Fraud: ಅಕ್ರಮ ಹಣ ವರ್ಗಾವಣೆ ಆಗಿದೆ ಎಂದು ಬೆದರಿಸಿ ವೃದ್ಧನಿಗೆ 20 ಲಕ್ಷ ರೂ. ವಂಚನೆ
Team Udayavani, Jan 26, 2024, 2:50 PM IST
ಬೆಂಗಳೂರು: ಸಾರ್ವಜನಿಕರಿಗೆ ಅಶ್ಲೀಲ ಭಾವಚಿತ್ರ ಕಳುಹಿಸುವ ಬಗ್ಗೆ ಮುಂಬೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ನಂಬಿಸಿ ಸೈಬರ್ ಕಳ್ಳರು ವೃದ್ಧರೊಬ್ಬರಿಂದ 20 ಲಕ್ಷ ರೂ. ಲಪಟಾಯಿಸಿದ್ದಾರೆ.
ಕೂಕ್ಟೌನ್ನ ರಂಗಸ್ವಾಮಿ ಸುಂದರ್ರಾಜನ್ (76) ವಂಚನೆಗೊಳಗಾದವರು. ರಂಗಸ್ವಾಮಿಗೆ ಅಪರಿಚಿತರು ಕರೆ ಮಾಡಿ ಮುಂಬೈನ ಟ್ರೈ ಕಂಪನಿಯಿಂದ ಕರೆ ಮಾಡುತ್ತಿರುವುದಾಗಿ ನಂಬಿಸಿದ್ದರು. ನಿಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ ಮೊಬೈಲ್ ನಂಬರ್ನಿಂದ ಅಶ್ಲೀಲ ಭಾವಚಿತ್ರ ಬರುತ್ತಿದೆ. ಮುಂಬೈನ ಬೈವಾಡ ಪೊಲೀಸ್ ಠಾಣೆಯಲ್ಲಿ ನಿಮ್ಮ ವಿರುದ್ಧ ದೂರು ದಾಖಲಾಗಿದೆ. ನೀವು ತಕ್ಷಣ ಮುಂಬೈಗೆ ಬರಬೇಕು. ನಿಮ್ಮ ಕರೆಗಳನ್ನು ಸುಪೀರಿಯರ್ ಅಧಿಕಾರಿಗಳಿಗೆ ಕಳುಹಿಸುವುದಾಗಿ ಬೆದರಿಸಿದ್ದರು. ಆಗ ಆಕಾಶ್ ಕುಲ್ ಹರಿ ಎಂಬುವರು ಮಾತನಾಡಿ ದೂರುದಾರರಿಗೆ ರಂಗಸ್ವಾಮಿ ಸುಂದರ್ರಾಜನ್ ಮೊಬೈಲ್ನಲ್ಲಿ ಸ್ಕೈಪ್ ಆ್ಯಪ್ ಡೌನ್ಲೋಡ್ ಮಾಡಿಸಿದ್ದರು. ನಂತರ ಸ್ಕೈಪ್ ಮೂಲಕ ಕರೆ ಮಾಡಿದ ಅಪರಿಚಿತರು ನಿಮ್ಮ ಹೆಸರಿನಲ್ಲಿ ಅಕ್ರಮ ಹಣ ವರ್ಗಾವಣೆ ಆಗುತ್ತಿದ್ದು, ನಿಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಬೇಕು. ಹೀಗಾಗಿ ನೀವು ಸೆಕ್ಯೂರಿಟಿ ಡೆಪಾಸಿಟ್ ಹಣ ನೀಡಬೇಕು ಎಂದು ಹೇಳಿದ್ದರು. ನಂತರ ದುಡ್ಡು ಹಿಂತಿರುಗಿಸುವುದಾಗಿ ನಂಬಿಸಿದ್ದರು. ಆತಂಕಗೊಂಡ ರಂಗಸ್ವಾಮಿ ಸುಂದರ್ರಾಜನ್ ಅಪರಿಚಿತರು ಕಳುಹಿಸಿದ ಬ್ಯಾಂಕ್ ಖಾತೆಗೆ 20 ಲಕ್ಷ ರೂ. ಜಮೆ ಮಾಡಿದ್ದರು. ನಂತರ ಅಪರಿಚಿತರು ಸಂಪರ್ಕಕ್ಕೂ ಸಿಗದೇ, ಅಸಲು ದುಡ್ಡನ್ನೂ ಕೊಟ್ಟಿರಲಿಲ್ಲ. ಇತ್ತ ರಂಗಸ್ವಾಮಿ ಸುಂದರ್ ರಾಜನ್ ಈ ಬಗ್ಗೆ ಪರಿಶೀಲಿಸಿದಾಗ ಇದು ಸೈಬರ್ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.