ರಾಜ್ಯ ಸೇರಿ ದೇಶದ 800 ಎಂಜಿನಿಯರಿಂಗ್ ಕಾಲೇಜಿಗೆ ಬೀಗ
Team Udayavani, Sep 3, 2017, 6:20 AM IST
ಬೆಂಗಳೂರು: ಎಂಜಿನಿಯರಿಂಗ್ ಕ್ಷೇತ್ರಕ್ಕೇ ಆಘಾತಕಾರಿ ಸುದ್ದಿ ಇದು.ಹೌದು, ಸತತ ಐದು ವರ್ಷ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಶೇ.30ರಷ್ಟು ಕಡಿಮೆ ಸರಾಸರಿ ಹೊಂದಿರುವ ರಾಜ್ಯದ ಸುಮಾರು 20 ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ದೇಶದ 800 ಎಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚಲು ಅಖೀಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್(ಎಐಸಿಟಿಇ) ಸೂಚಿಸಿದೆ.
ಎಂಜಿನಿಯರಿಂಗ್ ಕೋರ್ಸ್ಗಳ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಹಾಗೂ ಕಳಪೆ ಸಾಧನೆ ತೋರುತ್ತಿರುವ ಕಾಲೇಜು ಆಡಳಿತ ಮಂಡಳಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಎಐಸಿಟಿಇ, ಸಸತ ಐದು ವರ್ಷದಲ್ಲಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಗಣನೀಯವಾಗಿ ಇಳಿಕೆ ಕಂಡಿರುವ ದೇಶದ ವಿವಿಧ ರಾಜ್ಯದ ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿ ಮಾಡಿದೆ. ಆ ಎಲ್ಲಾ ಕಾಲೇಜುಗಳಿಗೂ ಮುಚ್ಚುವಂತೆ ಸೂಚನೆ ನೀಡಿದ್ದು, ಈ ಸಂಬಂಧ ಸೆಪ್ಟೆಂಬರ್ ಎರಡನೇ ವಾರದೊಳಗೆ ವರದಿ ಸಲ್ಲಿಸುವಂತೆಯೂ ನಿರ್ದೇಶನ ನೀಡಿದೆ.
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಕಾಲೇಜುಗಳಿಗೆ ತಮ್ಮ ಸಂಸ್ಥೆಯನ್ನು ಸಮೀಪದ ಕಾಲೇಜಿನೊಂದಿಗೆ ವಿಲೀನಗೊಳಿಸುವ ಆಯ್ಕೆಯನ್ನು ನೀಡಿದೆ. ಈ ಮೂಲಕ ಈಗಾಗಲೇ ಕಾಲೇಜಿಗೆ ದಾಖಲಾಗಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಯಾವುದೇ ಕುಂದಾಗದಂತೆ ನೋಡಿಕೊಂಡಿದೆ ಎಂದು ಎಐಸಿಟಿಇ ಉನ್ನತ ಮೂಲ ಸ್ಪಷ್ಟಪಡಿಸಿದೆ.
ದೇಶದ ವಿವಿಧ ರಾಜ್ಯದ ಎಂಜಿನಿಯರಿಂಗ್ ಕಾಲೇಜಿನ ಪ್ರವೇಶಾತಿ(ಇನ್ಟೇಕ್) ಪ್ರಮಾಣವನ್ನು ಅಧ್ಯಯನ ನಡೆಸಿದ ನಂತರ ಎಐಸಿಟಿಇ, ಕೆಲವು ಎಂಜಿನಿಯರಿಂಗ್ ಕಾಲೇಜು ಮುಚ್ಚಿಸುವ ನಿರ್ಧಾರ ತೆಗೆದುಕೊಂಡಿದೆ. ಕರ್ನಾಟಕದಲ್ಲಿ 600 ಎಂಜಿನಿಯರಿಂಗ್ ಕಾಲೇಜುಗಳಿದ್ದು, ಅದರಲ್ಲಿ ಸುಮಾರು 20 ಕಾಲೇಜಿಗೆ ಮುಚ್ಚುವಂತೆ ಸೂಚನೆ ನೀಡಿದೆ. ಆ ಕಾಲೇಜು ಯಾವುವು ಎಂಬುದನ್ನು ಬಹಿರಂಗಪಡಿಸಿಲ್ಲ.
ಎಂಜಿನಿಯರಿಂಗ್ ಶಿಕ್ಷಣ ಗುಣಮಟ್ಟ ಸುಧಾರಣೆಗೆ ಎಐಸಿಟಿಇ ಹಲವು ಕಾರ್ಯಕ್ರಮ ಹಾಗೂ ಕಾರ್ಯತಂತ್ರ ರೂಪಿಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಸಂಬಂಧಿಸಿದಂತೆ ಎಲ್ಲಾ ಎಂಜಿನಿಯರಿಂಗ್ ಕಾಲೇಜುಗಳಿಗೂ ಸೂಚನೆ ನೀಡಿದೆ. ಎಐಸಿಟಿಇ ಸೂಚನೆಯನ್ನು ಪಾಲಿಸದೇ, ಶೈಕ್ಷಣಿಕ ಗುಣಮಟ್ಟದ ಕಡೆಗೆ ಗಮನ ಹರಿಸದ ಕಾಲೇಜುಗಳು ವಿರುದ್ಧ ಮೊದಲ ಹಂತದ ಕ್ರಮ ಇದಾಗಿದೆ.
ಎಂಜಿನಿಯರಿಂಗ್ ಕಾಲೇಜು
ಭಾರತದಲ್ಲಿ 10,361 ಎಂಜಜಿನಿಯರಿಂಗ್ ಕಾಲೇಜು ಇದೆ. ಮಹಾಷ್ಟ್ರದಲ್ಲಿ 1500, ತಮಿಳುನಾಡಿನಲ್ಲಿ 1300, ಉತ್ತರ ಪ್ರದೇಶದಲ್ಲಿ 1165, ಆಂಧ್ರ ಪ್ರದೇಶದಲ್ಲಿ 800 ಹಾಗೂ ಕರ್ನಾಟಕದಲ್ಲಿ 600 ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ಎಲ್ಲಾ ರಾಜ್ಯದಲ್ಲೂ ಎಂಜಿನಿಯರಿಂಗ್ ಕಾಲೇಜು ಇದೆ. ಪ್ರತಿ ವರ್ಷ 37 ಸಾವಿರ ಎಂಜಿನಿಯರಿಂಗ್ ಕಾಲೇಜುಗ ಳಲ್ಲಿ ಲಕ್ಷಾಂತರ ಸೀಟು ಭರ್ತಿಯಾಗದೆ ಉಳಿಯುತ್ತಿದೆ.
ಕಾಲಾವಕಾಶಕ್ಕೆ ಕೋರಿಕೆ
ಕಳಪೆ ಸಾಧನೆಯ ಎಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚುವಂತೆ ಎಐಸಿಟಿಇ ನೀಡಿರುವ ಸೂಚನೆಗೆ ಪ್ರತಿಯಾಗಿ ಕೆಲವೊಂದು ಎಂಜಿನಿಯರಿಂಗ್ ಸಂಸ್ಥೆಯ ಆಡಳಿತ ಮಂಡಳಿಯಿಂದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಇನ್ನು ಒಂದು ವರ್ಷಗಳ ಅವಕಾಶ ನೀಡುವಂತೆ ಕೋರಿಕೆ ಸಲ್ಲಿಸಿವೆ. 2018-19ನೇ ಸಾಲಿನಿಂದ ಬಹುತೇಕ ಎಂಜಿನಿಯರಿಂಗ್ ಕಾಲೇಜಿಗೆ ಈ ಸಂಕಟ ಎದುರಾಗಲಿದೆ.
ಮುಚ್ಚುಗಡೆ; ಎಲ್ಲೆಲ್ಲಿ ಎಷ್ಟು?
ತೆಲಂಗಾಣ – 64
ಉತ್ತರ ಪ್ರದೇಶ – 47
ಮಹಾರಾಷ್ಟ್ರ – 59
ಆಂಧ್ರ ಪ್ರದೇಶ – 29
ರಾಜಸ್ಥಾನ – 30
ತಮಿಳುನಾಡು -31
ಹರ್ಯಾಣ – 31
ಗುಜರಾತ್-29
ಕರ್ನಾಟಕ – 20
ಮಧ್ಯ ಪ್ರದೇಶ – 21
ಪಂಜಾಬ್-19