ವಿಲನ್ ಆದ ನಾಯಕ ನಟ
Team Udayavani, Mar 15, 2018, 1:07 PM IST
ಬೆಂಗಳೂರು: ರೀಲ್ನ ನಾಯಕ ನಟ ರಿಯಲ್ ಲೈಫ್ನಲ್ಲಿ “ವಿಲನ್’ ಆಗಿದ್ದಾನೆ! ಹೌದು, ರಸ್ತೆ ಅಪಘಾತವೆಸಗಿದ ಕಾರಿನ ವೆಚ್ಚವನ್ನು ಭರಿಸಲಾಗದೇ ಕನ್ನಡದ “ಆಪ್ತಮಿತ್ರ-2′ ಚಿತ್ರದ ನಾಯಕ ವಿಕ್ರಂ ಕಾರ್ತಿಕ್ ದರೋಡೆಯ ಕಥೆ ಕಟ್ಟಿದ್ದಾರೆ.
ಮಂಗಳವಾರ ರಾತ್ರಿ ಕಾರಿನಲ್ಲಿ ಹೋಗುತ್ತಿದ್ದ ವೇಳೆ ನಾಲ್ಕೈದು ಮಂದಿ ದುಷ್ಕರ್ಮಿಗಳು ಅಡ್ಡಗಟ್ಟಿ ನನ್ನ ಮೇಲೆ ಹಲ್ಲೆ ನಡೆಸಿ ಹಣ, ಮೊಬೈಲ್ ದರೋಡೆ ಮಾಡಿದರು ಎಂದು ನಟ ವಿಕ್ರಂ ದೂರು ನೀಡಿದ್ದರು. ಆದರೆ, ಪೊಲೀಸರ ತನಿಖೆ ವೇಳೆ ಕಾರ್ತಿಕ್ ತಪ್ಪೆಸಗಿರುವುದು ಬಹಿರಂಗವಾಗಿದೆ.
ಮಂಗಳವಾರ ರಾತ್ರಿ ಕಾರ್ತಿಕ್ ಮದ್ಯಸೇವಿಸಿ ತಮ್ಮ ಸ್ವಿಫ್ಟ್ ಕಾರು ಚಲಾಯಿಸಿ, ನಗರದ ಶಂಕರಮಠ ಸಿಗ್ನಲ್ ಬಳಿ ಮತ್ತೂಂದು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಸ್ಥಳೀಯರು ನಟನನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ
ವೇಳೆ ನಮ್ಮ ಕಾರ್ ಜಖಂ ಆಗಿದ್ದು, ರಿಪೇರಿಗೆ 50 ಸಾವಿರ ರೂ. ಖರ್ಚಾಗಲಿದೆ, ಕೂಡಲೇ ಹಣ ನೀಡುವಂತೆ ಒತ್ತಾಯಿಸಿದ್ದಾರೆ.
ಹಣ ನೀಡದ ಕಾರ್ತಿಕ್ ನನ್ನ ಬಳಿ ಹಣವಿಲ್ಲ. ಬೇಕಾದರೆ ನನ್ನ ಕಾರು, ಮೊಬೈಲ್ ನೀವೇ ಇಟ್ಟುಕೊಳ್ಳಿ ಹಣ ಪಾವತಿಸಿದ ಬಳಿಕ ಬಿಡಿಸಿಕೊಂಡು ಹೋಗುತ್ತೇನೆ ಎಂದು ಹೇಳಿದ್ದಾರೆ. ಬುಧವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಆಸ್ಪತ್ರೆಗೆ ದಾಖಲಾದ ವಿಕ್ರಂ ಕಾರ್ತಿಕ್ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಪ್ರಕರಣದ ತನಿಖೆ ವೇಳೆ ಸಿಸಿಟಿವಿ ಹಾಗೂ ಸ್ಥಳೀಯರನ್ನು ವಿಚಾರಣೆ ನಡೆಸಿದಾಗ ವಿಕ್ರಂ ಕಾರ್ತಿಕ್ ತಪ್ಪು ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.