ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿ: ವೇಣುಗೋಪಾಲ್
Team Udayavani, Oct 15, 2017, 6:35 AM IST
ಬೆಂಗಳೂರು: “ನನ್ನ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಸಾಬೀತಾದರೆ, ಸಾರ್ವಜನಿಕ ಜೀವನದಿಂದಲೇ ನಿವೃತ್ತಿ ಪಡೆಯುತ್ತೇನೆ’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಘೋಷಿಸಿದ್ದಾರೆ.
ಶಾಂತಿನಗರದ ಕೆಎಸ್ಆರ್ಟಿಸಿ ಕೇಂದ್ರ ಕಚೇರಿಯಲ್ಲಿ ಶನಿವಾರ ಬೆಂಗಳೂರಿನಿಂದ ಕೇರಳದ ನೂತನ ಬಸ್ ಸೇವೆಗೆ ಚಾಲನೆ ನೀಡಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. “ಲೈಂಗಿಕ ಕಿರುಕುಳ ಪ್ರಕರಣ ಸತ್ಯಕ್ಕೆ ದೂರ. ಹಾಗೊಂದು ವೇಳೆ ನಾನು ತಪ್ಪು ಮಾಡಿದ್ದೇನೆಂಬುದು ಸಾಬೀತಾದರೆ, ಮತ್ತೆ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳುವುದಿಲ್ಲ’ ಎಂದು ಹೇಳಿದರು.
“40 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ನನ್ನ ಇಡೀ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲ. ಆದರೆ, ಈಗ 36 ಕ್ರಿಮಿನಲ್ ಕೇಸುಗಳಿರುವ ಮಹಿಳೆಯೊಬ್ಬರು ನನ್ನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ¨ªಾರೆ ಎನ್ನಲಾಗುತ್ತಿದೆ. ಅವರ ವಿರುದ್ಧ ಎರ್ನಾಕುಲಂ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇನೆ. ಈ ರೀತಿಯ ಆರೋಪವನ್ನು ಪ್ರತಿಪಕ್ಷಗಳು ಮೊದಲಿನಿಂದಲೂ ಮಾಡಿಕೊಂಡು ಬಂದಿವೆ.
ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ತಿರುಗೇಟು ನೀಡಿದರು. ಅವಾಚ್ಯ ಶಬ್ದ ಬಳಕೆ; ಸ್ಪಷ್ಟನೆ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಚಿವ ರೋಷನ್ ಬೇಗ್ ಆಡಿರುವ ಮಾತುಗಳು ಉದ್ದೇಶಪೂರ್ವಕವಾಗಿ ಅಲ್ಲ. ಆದಾಗ್ಯೂ ಈ ಬಗ್ಗೆ ಸ್ಪಷ್ಟನೆ ಕೇಳಿದ್ದೇನೆಂದು ಇದೇ ವೇಳೆ ವೇಣುಗೋಪಾಲ್ ತಿಳಿಸಿದರು.