ಅಂಬರೀಶ್ ವೈಕುಂಠ ಸಮಾರಾಧನೆಯಲ್ಲಿ ಜನಸಾಗರ
Team Udayavani, Dec 6, 2018, 11:06 AM IST
ನಟ ಅಂಬರೀಶ್ ಅವರ ವೈಕುಂಠ ಸಮಾರಾಧನೆ ಮತ್ತು ಕೊನೆದಿನದ ಪುಣ್ಯತಿಥಿ ಕಾರ್ಯಕ್ರಮ ಬುಧವಾರ ಅರಮನೆ ಮೈದಾನದ ವೈಟ್ ಪೆಟಲ್ಸ್ನಲ್ಲಿ ನಡೆಯಿತು. ಮಂಡ್ಯದಿಂದ ಅಭಿಮಾನಿಗಳು ತಂದಿದ್ದ ಅಂಬಿಯ ಇಷ್ಟದ ಭತ್ತ ಹಾಗೂ ಕಬ್ಬಿನ ಜಲ್ಲೆಯಯನ್ನು ಅಂಬರೀಶ್ ಭಾವಚಿತ್ರದ ಮುಂದಿಟ್ಟು ಪುತ್ರ ಅಭಿಷೇಕ್ ನಮನ ಸಲ್ಲಿಸಿದರು.
ಇದೇ ವೇಳೆ ಪತ್ನಿ ಸುಮಲತಾ ಅಂಬರೀಶ್, ನಟ ದೊಡ್ಡಣ್ಣ, ರಾಕ್ಲೈನ್ ವೆಂಕಟೇಶ್ ಸೇರಿದಂತೆ ಅಂಬರೀಶ್ ಕುಟುಂಬದವರು, ಆಪ್ತರು ಹಾಜರಿದ್ದರು. ಬಳಿಕ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ, ಕ್ರಿಕೆಟಿಗ ಅನಿಲ್ ಕುಂಬ್ಳೆ, ನಟ ಪುನೀತ್ ರಾಜಕುಮಾರ್, ಪತ್ನಿ ಅಶ್ವಿನಿ, ತಮಿಳು ನಟ ಕಾರ್ತಿಕ್, ಕೋಕಿಲಾ ಮೋಹನ್, ನಟಿ ಡಾ. ಜಯಸುಧಾ, ಸಂಗೀತಾ, ಗಾಯಕ ವಿಜಯ್ ಪ್ರಕಾಶ್, ನಿರ್ಮಾಪಕ ಸಿ.ಆರ್ ಮನೋಹರ್ ಸೇರಿದಂತೆ ಚಿತ್ರರಂಗ ಮತ್ತು ರಾಜಕೀಯ ರಂಗದ ಹಲವು ಗಣ್ಯರು, ಅಭಿಮಾನಿಗಳು ಪಾಲ್ಗೊಂಡು ಅಂಬರೀಶ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಪೂಜೆಯ ನಂತರ 7 ರಿಂದ 8 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಂಡ್ಯ ಶೈಲಿಯ ರಾಗಿ ಮುದ್ದೆ, ಕಾಳು ಗೊಜ್ಜು, ಹಲಸಿನ ಕಾಯಿ ಗೊಜ್ಜು, ಪೂರಿ, ತರಕಾರಿ ಸಾಗು, ಕೊಸಂಬರಿ, ಕಾರ್ನ್ ಮಸಾಲಾ, ಬೆಂಡೆಕಾಯಿ ಫ್ರೈ, ಆಲೂ ಫ್ರೈ, ವೆಜ್ ಧಮ್ ಬಿರಿಯಾನಿ, ರಾಯ್ತಾ, ಸ್ಪೆಶಲ್ ಮೈಸೂರು ಪಾಕ್, ಗೋಧಿ ಖೀರು, ಬೆಲ್ಲದ ಕಡುಬು, ಅನ್ನ ಸಾಂಬಾರ್, ರಸಂ, ಮೊದಲಾದ ಪದಾರ್ಥಗಳಿದ್ದ ಶುದ್ಧ ಸಸ್ಯಹಾರಿ ಊಟ ತಯಾರಿಸಲಾಗಿತ್ತು. ಮಧ್ಯಾಹ್ನ 12ಕ್ಕೆ ಶುರುವಾದ ಭೋಜನ ಕಾರ್ಯಕ್ರಮ ಸಂಜೆ 4ರವರೆಗೆ ನಡೆಯಿತು.