ಉಸಿರು ಉಳಿಸುವ ಸಮಯ ಸನ್ನಿಹಿತ
Team Udayavani, Nov 8, 2017, 11:37 AM IST
ಬೆಂಗಳೂರು: ಸ್ವತ್ಛ ಗಾಳಿ ಕಳೆದುಕೊಂಡು ಅಕ್ಷರಶಃ ಗ್ಯಾಸ್ ಚೇಂಬರ್ ನಂತಾಗಿರುವ ದೆಹಲಿ ಉಳಿಸುವ ಸಲುವಾಗಿ ಅಲ್ಲಿನ ಸರ್ಕಾರ, ಹೈಕೋರ್ಟ್, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಮತ್ತು ಸುಪ್ರೀಂಕೋರ್ಟ್ ಗಳು ಶತಪ್ರಯತ್ನ ನಡೆಸುತ್ತಿವೆ. ಇದರ ಬೆನ್ನಲ್ಲೇ ನಮ್ಮ ಬೆಂಗಳೂರಿನ ಸ್ಥಿತಿಯೂ ದೆಹಲಿಗಿಂತ ಹೊರತೇನಲ್ಲ ಎಂಬುದು ವಾಯು ಸಾಮರ್ಥ್ಯ ಮತ್ತು ಮಾಲಿನ್ಯ ನಿಯಂತ್ರಣ ಸಂಸ್ಥೆಯ ವರದಿಗಳು ಎಚ್ಚರಿಕೆ ನೀಡುತ್ತಿವೆ.
ಸದ್ಯ ದೆಹಲಿಯಲ್ಲಿ ವಾಯು ಮಾಲಿನ್ಯದ ಪ್ರಮಾಣ ಗರಿಷ್ಠ 638ಕ್ಕೆ ಏರಿಕೆಯಾಗಿದೆ. ಅಂದರೆ, ದೆಹಲಿಯ ರಿಯಲ್ ಟೈಮ್ ಏರ್ ಕ್ವಾಲಿಟಿ ಇಂಡೆಕ್ಸ್(ಎಕ್ಯೂಐ) 100 ದಾಟಿದರೆ ಆ ಗಾಳಿ ಆರೋಗ್ಯಕ್ಕೆ ಹಾನಿಕರ ಎನ್ನುತ್ತದೆ. ಆದರೆ, ದೆಹಲಿಯಲ್ಲಿ ಈ ಪ್ರಮಾಣ 600 ದಾಟಿದ್ದು ಉಸಿರಾಡುವ ಗಾಳಿಯಲ್ಲಿ ಸಂಪೂರ್ಣ ವಿಷ ಬೆರೆತಿದೆ ಎಂದು ವರದಿ ತಿಳಿಸಿದೆ.
ದೆಹಲಿಯಲ್ಲಿ ಹೀಗಾದರೆ ಬೆಂಗಳೂರಿಗೇನು ಎನ್ನಬೇಡಿ, ಬೆಂಗಳೂರಿನ ಪೀಣ್ಯ ಬಳಿ ಹಾಕಲಾಗಿರುವ ಮಾಲಿನ್ಯ ಮಾಪನ ಕೇಂದ್ರದಲ್ಲಿ ಮಂಗಳವಾರ ರಾತ್ರಿ ಎಕ್ಯೂಐ 160ಕ್ಕೆ ಏರಿಕೆಯಾಗಿತ್ತು. ಆದರೆ ಅದೂ ಕೂಡ ಹಾನಿಕರವೇ ಎಂದು ವರದಿ ಹೇಳಿದೆ.
ಮಾಲಿನ್ಯ ಪ್ರಮಾಣ: ಯಾವುದೇ ನಗರದಲ್ಲಿ ಈ ಪ್ರಮಾಣದ ಎಕ್ಯೂಐ ವರದಿಯಲ್ಲಿ 0-50 ಪ್ರಮಾಣ ಕಂಡು ಬಂದರೆ, ಜಗತ್ತಿನಲ್ಲಿ ಇವರೇ ಅದೃಷ್ಟವಂತರು. ಇನ್ನು ಈ ಪ್ರಮಾಣ 51-100 ಬಂದರೆ ಸುಧಾರಿತ ಮಾಲಿನ್ಯ ಎನ್ನಬಹುದು. ಕೆಲವು ಆರೋಗ್ಯ ಸಂಬಂಧಿತ ಅಡ್ಡಪರಿಣಾಮ ಬೀರಬಹುದು ಎನ್ನುತ್ತದೆ ವರದಿ.
101-150 ಪ್ರಮಾಣವನ್ನು ಅನಾರೋಗ್ಯಕರ ಎನ್ನುವ ಎಕ್ಯೂಐ, ಸಾಮಾನ್ಯವಾಗಿ ಉಳಿದ ಜನರ ಮೇಲೆ ಅಷ್ಟೇನೂ ಪರಿಣಾಮ ಬೀರಲ್ಲ ಎನ್ನುತ್ತದೆ. ಅಂದರೆ ಮಕ್ಕಳು, ವಯಸ್ಕರು, ಅಸ್ತಮಾ ಸೇರಿದಂತೆ ಇತರೆ ಶ್ವಾಸಕೋಶ ಸಮಸ್ಯೆ ಉಳ್ಳವರಿಗೆ ಅಪಾಯ ಸಾಧ್ಯ.
151-200 ರ ಮಾಲಿನ್ಯ ಪ್ರಮಾಣದಿಂದ ಪ್ರತಿಯೊಬ್ಬರಿಗೂ ತಮ್ಮ ಆರೋಗ್ಯದ ಮೇಲೆ ಏನೋ ಸಮಸ್ಯೆಯಾಗುತ್ತಿದೆ ಎಂಬುದು ಅರಿವಾಗುತ್ತದೆ. ಅಲ್ಲದೆ ಕೆಲವೊಂದು ಸೂಕ್ಷ ವ್ಯಕ್ತಿಗಳ ಮೇಲೆ ಅಪಾಯ ಕಟ್ಟಿಟ್ಟ ಬುತ್ತಿ. ಇದರಲ್ಲೂ ಮಕ್ಕಳು ಮತ್ತು ವಯಸ್ಕರ ಮೇಲೆ ಅಡ್ಡ ಪರಿಣಾಮ ಬೀರುವುದಲ್ಲದೇ, ಅಸ್ತಮಾ ಸೇರಿದಂತೆ ಕೆಲವೊಂದು ರೋಗಗಳ ಹೊಂದಿರುವವರಿಗೂ ಭಾರಿ ಸಮಸ್ಯೆಯಾಗುತ್ತದೆ.
ಗಂಭೀರ ಸ್ಥಿತಿ: ಎಕ್ಯೂಐ 201-300ರ ಗಾಳಿಯ ಮಾಲಿನ್ಯದಿಂದ ಗಂಭೀರವಾದ ಸಮಸ್ಯೆಗಳೇ ಸೃಷ್ಟಿಯಾಗಬಹುದು. ಇಂಥ ವೇಳೆ ಆರೋಗ್ಯದ ತುರ್ತು ಪರಿಸ್ಥಿತಿ ಘೋಷಿಸಬೇಕಾಗಿ ಬರಬಹುದು. ಅಲ್ಲದೆ ಎಲ್ಲ ಜನರಿಗೂ ಸಮಸ್ಯೆ ಕಾಣಿಸಿಕೊಳ್ಳಬಹುದು. ಈ ಗಾಳಿಯಿಂದ ಮಕ್ಕಳು, ಅಸ್ತಮಾ ರೋಗಿಗಳು ಸೇರಿದಂತೆ ಶ್ವಾಸಕೋಶ ಸಂಬಂಧಿ ರೋಗಗಳಲ್ಲಿ ನರಳುತ್ತಿರುವವರಿಗೆ ಹೆಚ್ಚಿನ ಹಾನಿಯುಂಟಾಗುತ್ತದೆ.
ಎಕ್ಯೂಐ 301+ ಆದರೆ ಈ ಗಾಳಿ ತೀರಾ ಅಪಾಯಕಾರಿ ಎಂದೇ ಪರಿಗಣಿಸಲ್ಪಡುತ್ತದೆ. ಎಲ್ಲ ಸಮುದಾಯದ ಜನರಿಗೂ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಗಾಳಿ ಈ ಪ್ರಮಾಣ ಮೀರಿದಾಗ ಪ್ರತಿಯೊಬ್ಬರು ಮನೆ ಬಿಟ್ಟು ಆಚೆ ಬರದಿರುವುದೇ ಉತ್ತಮ.
ತುಂಬಾ ಮಂದಿಗೆ ಮಾಲಿನ್ಯದಿಂದ ಅಪಾಯವೇನು ಎಂಬ ಬಗ್ಗೆ ಅರಿವೇ ಇರುವುದಿಲ್ಲ. ಅಲ್ಲದೆ ಮನೆಯೊಳಗಿದ್ದವರಿಗೆ ಇದರಿಂದ ಹೆಚ್ಚೇನೂ ಅಪಾಯವೂ ಇಲ್ಲ ಅಂತೆಂದುಕೊಂಡಿರುತ್ತಾರೆ. ಆದರೆ ಹೊರಗೆ ಓಡಾಡುವವರಿಗಿಂತ ಮನೆಯೊಳಗಡೆ ಇರುವವರಿಗೇ ಹೆಚ್ಚು ಅಪಾಯ ಎಂಬ ಆಘಾತಕಾರಿ ಅಂಶವೂ ಬಯಲಾಗಿದೆ.
2015ರಲ್ಲಿ ದೆಹಲಿ ಮೀರಿಸಿದ್ದ ಬೆಂಗಳೂರು
ಅಚ್ಚರಿ ಎಂದರೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಮ-ಬೆಸ ನಿರ್ಧಾರ ಜಾರಿಗೆ ತಂದು ದೆಹಲಿಯಲ್ಲಿ ವಾಹನಗಳ ಓಡಾಟ ಕಡಿಮೆ ಮಾಡಿದ್ದಾಗ ವಾಯು ಮಾಲಿನ್ಯ ಕಡಿಮೆಯಾಗಿತ್ತು. ವಿಚಿತ್ರವೆಂದರೆ, ಆಗ ಬೆಂಗಳೂರಿನ ಮಾಲಿನ್ಯ ಪ್ರಮಾಣ ದೆಹಲಿಯನ್ನೂ ಮೀರಿಸಿತ್ತು. ಅಂದರೆ, ಆಗ ದೆಹಲಿಯ ಮಾಲಿನ್ಯ ಪ್ರಮಾಣ 182(ಎಕ್ಯೂಐ) ಇದ್ದರೆ, ಬೆಂಗಳೂರಿನ ಮಾಲಿನ್ಯ ಪ್ರಮಾಣ 310(ಎಕ್ಯೂಐ)ಗೆ ಏರಿಕೆಯಾಗಿತ್ತು.
ಬೆಂಗಳೂರಿನ ವಿವಿಧೆಡೆ ದಾಖಲಾದ ಮಾಲಿನ್ಯದ ಪ್ರಮಾಣ
ಪೀಣ್ಯ – 161(ಎಕ್ಯೂಐ)
ಸಿಟಿ ರೈಲ್ವೆ ಸ್ಟೇಷನ್ – 130(ಎಕ್ಯೂಐ)
ದೆಹಲಿಯಲ್ಲಿನ ಮಾಲಿನ್ಯದ ಪ್ರಮಾಣ
ಆì.ಕೆ.ಪುರಂ – 638(ಎಕ್ಯೂಐ)
ಸಿರಿಪೋರ್ಟ್ – 325(ಎಕ್ಯೂಐ)
ಶಾದಿಪುರ – 318(ಎಕ್ಯೂಐ)
ದೇಶದ ಬೇರೆ ಬೇರೆ ನಗರಗಳ ವಾಯು ಮಾಲಿನ್ಯ ಪ್ರಮಾಣ
ಪುಣೆ – 316(ಎಕ್ಯೂಐ)
ಕಾನ್ಪುರ – 416(ಎಕ್ಯೂಐ)
ವಾರಾಣಸಿ – 315(ಎಕ್ಯೂಐ)
ಮಾಲಿನ್ಯದ ಅಪಾಯಗಳು
ಎಕ್ಯೂಐ ಅಂಕಿ ಅಂಶ
70 ಲಕ್ಷ: ವರ್ಷಕ್ಕೆ ಮಾಲಿನ್ಯದಿಂದ ಸಾಯುವವರ ಸಂಖ್ಯೆ. ಅಂದರೆ ವರ್ಷಕ್ಕೆ ಸಾಯುವ 8 ಮಂದಿಯಲ್ಲಿ ಒಬ್ಬರು ಮಾಲಿನ್ಯದಿಂದಾಗಿಯೇ ಸಾಯುತ್ತಾರೆ.
ಶೇ.54: ಹೊರಗೆ ಕೆಲಸ ಮಾಡುವವರಿಗಿಂತ ಮನೆಯೊಳಗೆ ಇರುವ ಶೇ.54 ರಷ್ಟು ಮಹಿಳೆಯರು ಮಾಲಿನ್ಯ ತಂದೊಡ್ಡುವ ರೋಗಗಳಿಂದ ಸಾಯುತ್ತಾರೆ.
6,00000: ಇಡೀ ಜಗತ್ತಿನಲ್ಲೇ ವಾಯು ಮಾಲಿನ್ಯದಿಂದ ಸಾವನ್ನಪ್ಪುವ ಐದು ವರ್ಷದೊಳಗಿನ ಮಕ್ಕಳ ಸಂಖ್ಯೆ
ಮಾಲಿನ್ಯದಿಂದ ಬರುವ ಕಾಯಿಲೆಗಳು
-ಅಸ್ತಮಾ
-ಶ್ವಾಸಕೋಶ ಸಂಬಂಧಿ ಕಾಯಿಲೆಗಳು
-ಶ್ವಾಸಕೋಶ ಕ್ಯಾನ್ಸರ್
-ಹೃದಯ ಸಂಬಂಧಿ ಕಾಯಿಲೆಗಳು