ಬಿಎಸ್ವೈ ಸ್ಲಂ ವಾಸ್ತವ್ಯ ಚುನಾವಣೆ ಗಿಮಿಕ್:ಸಿಎಂ
Team Udayavani, Feb 11, 2018, 6:50 AM IST
ಬೆಂಗಳೂರು: ಚುನಾವಣೆ ಬಂದಾಗ ಸ್ಲಂ ಪ್ರದೇಶಗಳಿಗೆ ಹೋಗುತ್ತಿರುವ ಬಿ.ಎಸ್. ಯಡಿಯೂರಪ್ಪ ಹಿಂದೆ ಅಧಿಕಾರದಲ್ಲಿದ್ದಾಗ ಐದು ವರ್ಷಗಳಲ್ಲಿ ಸ್ಲಂ ಗಳ ಅಭಿವೃದ್ಧಿಗೆ ಏನು ಮಾಡಿದರು ಅನ್ನುವುದನ್ನು ತಿಳಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯನವರ 110ನೇ ಜನ್ಮದಿನಾಚರಣೆ ಅಂಗವಾಗಿ ವಿಧಾನಸೌಧದ ಆವರಣದಲ್ಲಿನ ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರ ಸ್ಲಂ ವಾಸ್ತವ್ಯವನ್ನು ಟೀಕಿಸಿದ ಅವರು, ಇದು ಕೇವಲ ಚುನಾವಣಾ ಸ್ಟಂಟ್ ಎಂದರು.
ಯಡಿಯೂರಪ್ಪನವರಿಗೆ ಈಗ ಸ್ಲಂಗಳು ನೆನಪಾಗಿವೆ. ಹಿಂದೆ ಅಧಿಕಾರದಲ್ಲಿದ್ದಾಗ ಎಷ್ಟು ಬಾರಿ ಕೊಳಗೇರಿಗಳಿಗೆ ಭೇಟಿ ಕೊಟ್ಟು, ಅಲ್ಲಿ ವಾಸ್ತವ್ಯ ಮಾಡಿದ್ದರು. ಐದು ವರ್ಷದ ಅವಧಿಯಲ್ಲಿ ಸ್ಲಂ ಗಳ ಅಭಿವೃದ್ಧಿಗೆ ಏನು ಮಾಡಿದ್ದಾರೆ ಎಂದು ರಾಜ್ಯದ ಜನತೆಗೆ ತಿಳಿಸಲಿ. ಇದೆಲ್ಲ ರಾಜಕೀಯ ಪ್ರೇರಿತ ಅನ್ನುವುದು ರಾಜ್ಯದ ಜನತೆಗೆ ಚೆನ್ನಾಗಿ ಗೊತ್ತಿದೆ. ಬಿಜೆಪಿ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ವಿರೋಧಿ. ಮುಸ್ಲಿಮರು ಈ ದೇಶ ಬಿಟ್ಟು ಹೋಗಲಿ ಎಂದು ಬಿಜೆಪಿ ಹೇಳುತ್ತದೆ. ಇದೇ ವೇಳೆ ಯಡಿಯೂರಪ್ಪ ಸ್ಲಂ ಗಳಲ್ಲಿ ವಾಸ್ತವ್ಯ ಹೂಡುವ ಚುನಾವಣಾ ಸ್ಟಂಟ್ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.