ನ್ಯಾನೋ ಟೆಕ್ ಪಾರ್ಕ್ಗೆ ಕೇಂದ್ರದ ಸಹಯೋಗ
Team Udayavani, Mar 3, 2020, 3:07 AM IST
ಬೆಂಗಳೂರು: ಕೇಂದ್ರ ಸರ್ಕಾರದ ಸಹಯೋಗ ದಲ್ಲಿ ಬಹುನಿರೀಕ್ಷಿತ ನ್ಯಾನೋ ಟೆಕ್ ಪಾರ್ಕ್ ನಿರ್ಮಿಸಲು ಸರ್ಕಾರ ಉದ್ದೇಶಿಸಿದ್ದು, ಉದಯೋ ನ್ಮುಖ ಕ್ಷೇತ್ರದ ಬೆಳವಣಿಗೆಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ನಗರದ ಹೋಟೆಲ್ ಲಲಿತ್ ಅಶೋಕದಲ್ಲಿ ಮೂರು ದಿನಗಳ “ಬೆಂಗಳೂರು ಇಂಡಿಯಾ ನ್ಯಾನೋ-2020’ರ 11ನೇ ಆವೃತ್ತಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ನ್ಯಾನೋ ತಂತ್ರಜ್ಞಾನ ಅಭಿವೃದ್ಧಿ ಸರ್ಕಾರದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಮೂಲ ಸೌಕರ್ಯ, ಕೌಶಲ್ಯಯುತ ಮಾನವ ಸಂಪನ್ಮೂಲ ಪೂರೈಕೆ ಒಳಗೊಂಡಂತೆ ರಾಜ್ಯದಲ್ಲಿ ಈ ಕ್ಷೇತ್ರದ ಉತ್ತೇಜನಕ್ಕೆ ಪೂರಕ ವಾತಾವರಣ ನಿರ್ಮಿಸಲಾಗುವುದು. ಇದರೊಂದಿಗೆ “ನ್ಯಾನೋ ರಾಜಧಾನಿ’ಯನ್ನಾಗಿ ರೂಪಿಸಲಾಗುವುದು ಎಂದು ಹೇಳಿದರು.
ಆಹಾರ, ಕೃಷಿ, ಇಂಧನ, ಜಲ ಶುದ್ಧೀಕರಣ, ಆರೋಗ್ಯ, ತ್ಯಾಜ್ಯ ನಿರ್ವಹಣೆ ಸೇರಿ ವಿವಿಧ ಕ್ಷೇತ್ರಗಳಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ನ್ಯಾನೋ ತಂತ್ರಜ್ಞಾನದಲ್ಲಿ ವಿಜ್ಞಾನಿಗಳು ಮತ್ತು ಎಂಜಿನಿ ಯರ್ಗಳು ಹೆಚ್ಚು ಆವಿಷ್ಕಾರ ನಡೆಸುವ ಅಗತ್ಯ ಇದೆ ಎಂದ ಅವರು, ದೇಶದ ಆರ್ಥಿಕತೆಯಲ್ಲಿ 2019-20ನೇ ಸಾಲಿಗೆ ಕೈಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕದ ಪಾಲು 15.80 ಲಕ್ಷ ಕೋಟಿ ರೂ. ಆಗಿದೆ. ಅತಿ ಹೆಚ್ಚು ಆದಾಯ ತಂದುಕೊಡು ತ್ತಿರುವ ನಾಲ್ಕನೇ ರಾಜ್ಯವೂ ಆಗಿದೆ ಎಂದರು.
ಭಾರತ ರತ್ನ ಪುರಸ್ಕೃತ ಖ್ಯಾತ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ನ್ಯಾನೋ ತಂತ್ರಜ್ಞಾನದ ಬಳಕೆ ಹೆಚ್ಚಾಗಬೇಕು. ಯುವ ವಿಜ್ಞಾನಿಗಳು ಈ ಕುರಿತು ಹೆಚ್ಚಿನ ಸಂಶೋಧನೆಗಳ ಮೂಲಕ ವೈದ್ಯಕೀಯ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.
ಸಂಶೋಧನೆ, ವೈದ್ಯಕೀಯ, ಶಿಕ್ಷಣ ಸೇರಿ ಪ್ರವರ್ಧಮಾನಕ್ಕೆ ಬರುತ್ತಿರುವ ಉದ್ಯಮಗಳ ಅವಕಾಶ ಸೇರಿದಂತೆ ಹಲವು ವಿಚಾರಗಳ ಚರ್ಚೆಗೆ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನ ಜಾಗತಿಕ ವೇದಿಕೆಯಾಗಿದೆ. ಈ ಬಾರಿಯ ಸಮ್ಮೇಳನ ಇ-ಮೊಬಿಲಿಟಿ, ಕೃಷಿ, ಶುದ್ಧ ನೀರು, ಪರಿಸರ, ಉತ್ಪಾದನೆಯಲ್ಲಿ ನ್ಯಾನೋ ತಂತ್ರಜ್ಞಾನ ಕೇಂದ್ರೀಕರಿಸಿದೆ ಎಂದರು.
ಇದೇ ವೇಳೆ ನ್ಯಾನೋ ತಂತ್ರಜ್ಞಾನದ ಉತ್ತಮ ಸಂಶೋಧನೆಗಾಗಿ ಐಐಎಸ್ಸಿ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪಿ.ಎಸ್.ಅನಿಲ್ ಕುಮಾರ್ ಅವರಿಗೆ “ಪ್ರೊ.ಸಿ.ಎನ್.ಆರ್.ರಾವ್ ಬೆಂಗಳೂರು ಇಂಡಿ ಯಾ ನ್ಯಾನೋ ವಿಜ್ಞಾನ ಪ್ರಶಸ್ತಿ 2020′ ಪ್ರದಾನ ಮಾಡಲಾಯಿತು. ಸ್ಟಾನ್ಫೋರ್ಡ್ ವಿಶ್ವವಿದ್ಯಾಲ ಯದ ಪ್ರಾಧ್ಯಾಪಕ ರೋಜರ್ ಹೋವೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಐಐಎಸ್ಸಿ ಬೆಂಗಳೂರಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಅಜಯ್ ಕುಮಾರ್ ಸೂದ್, ಶಾಸಕ ರಿಜ್ವಾನ್ ಅರ್ಷದ್, ಕೆ-ಸ್ಟೆಪ್ಸ್ ಎಂ.ಡಿ ಡಾ.ಎಚ್.ಹೊನ್ನೇಗೌಡ ಉಪಸ್ಥಿತರಿದ್ದರು.
ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಜಾರಿ ಶೀಘ್ರ: ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ರಾಜ್ಯ ಸರ್ಕಾರವು ಶೀಘ್ರ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಜಾರಿಗೆ ತರಲಿದೆ. ಅದರಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿಗೆ ಪೂರಕವಾದ ಹಲವಾರು ಅಂಶಗಳು ಇರಲಿವೆ. ನೀತಿ-ನಿರೂಪಣೆಯಲ್ಲಿ ಪ್ರೊ.ಸಿ.ಎನ್.ಆರ್.ರಾವ್ ಮಾರ್ಗದರ್ಶನದ ವಿಜನ್ ಗ್ರೂಪ್ ನೆರವಾಗಲಿದೆ. ನ್ಯಾನೊ ತಂತ್ರಜ್ಞಾನದ ಹಬ್ ಮಾಡಲು ಐಐಎಸ್ಸಿ, ಐಐಟಿ ಸೇರಿ ಹಲವು ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ನೆರವು ಪಡೆಯಲಾಗುವುದು ಎಂದರು.
ದೇವನಹಳ್ಳಿ ಬಳಿ ಪಾರ್ಕ್?: ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಗಳು, ನಗರದ ಬಳ್ಳಾರಿ ರಸ್ತೆಯಲ್ಲಿ ನ್ಯಾನೊ ಟೆಕ್ ಪಾರ್ಕ್ಗೆ ಜಾಗ ಗುರುತಿಸಲಾಗಿದೆ ಎಂದು ಹೇಳಿದರು. ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಮೂಲಗಳ ಪ್ರಕಾರ ದೇವನಹಳ್ಳಿ ಬಳಿ 15 ಎಕರೆ ಜಾಗ ಇದ್ದು, ಅಲ್ಲಿ ಪಾರ್ಕ್ ತಲೆಯೆತ್ತಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ