14500 ಕೋಟಿ ರೂಪಾಯಿ ಮೌಲ್ಯದ ತೆಂಗು, ಅಡಿಕೆ ನಷ್ಟ
Team Udayavani, Sep 16, 2017, 7:00 AM IST
ಬೆಂಗಳೂರು:ರಾಜ್ಯದಲ್ಲಿ ಬರ ಹಾಗೂ ಮಳೆ ಕೊರತೆಯಿಂದ ಅಡಿಕೆ ಮತ್ತು ತೆಂಗು ಐದೂವಾರೆ ಸಾವಿರ ಹೆಕ್ಟೇರ್ನಷ್ಟು ನಷ್ಟವಾಗಿದ್ದು, ಕೇಂದ್ರದ ನೆರವಿಗಾಗಿ ಕಾಯುತ್ತಿದ್ದೇವೆ. ಒಂದೊಮ್ಮೆ ಕೇಂದ್ರ ಸರ್ಕಾರ ಕೊಡದಿದ್ದರೆ ರಾಜ್ಯ ಸರ್ಕಾರದಿಂದಲೇ ಪರಿಹಾರ ನೀಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ವಿಧಾನಸೌದದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ಸಾವಿರ ಹೆಕ್ಟೇರ್ ತೆಂದು, ಎರಡೂವರೆ ಸಾವಿರ ಹೆಕ್ಟೇರ್ ಅಡಿಕೆ ಬೆಳೆ ನಷ್ಟವಾಗಿದ್ದು, ಇದರ ಮೌಲ್ಯ 14500 ಕೋಟಿ ರೂ.ಗಳು. ನಿಯಮಾನುಸಾರ ಕೇಂದ್ರಕ್ಕೆ 4500 ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಎರಡು ಸಾವಿರ ಕೋಟಿ ರೂ. ಕೊಡುವುದಾಗಿ ಭರವಸೆ ದೊರೆತಿದೆ. ಆದರೆ, ಇನ್ನೂ ಹಣ ಬಿಡುಗಡೆಯಾಗಿಲ್ಲ ಎಂದು ಹೇಳಿದರು.
ಕೇಂದ್ರ ಸರ್ಕಾರದಿಂದ ನೆರವು ಬರದಿದ್ದರೆ ತಕ್ಷಣಕ್ಕೆ ರಾಜ್ಯ ಸರ್ಕಾರವೇ ಪರಿಹಾರ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ. ಆದರೆ, ಎಕರೆ ಅಥವಾ ಹೆಕ್ಟೇರ್ಗೆ ಎಷ್ಟು ಪರಿಹಾರ ಎಂಬುದು ಇನ್ನೂ ನಿಗದಿ ಮಾಡಿಲ್ಲ ಎಂದು ತಿಳಿಸಿದರು.
ಈ ತಿಂಗಳ ಅಂತ್ಯದವರೆಗೂ ಹವಾಮಾನ ಪರಿಸ್ಥಿತಿ ನೋಡಿ ಬರಪೀಡಿತ ತಾಲೂಕುಗಳ ಪಟ್ಟಿ ಮಾಡಲಾಗುವುದು. ರಾಜ್ಯದಲ್ಲಿ ಕೆಲವೆಡೆ ಉತ್ತಮ ಮಳೆಯಾಗಿದ್ದರೂ ಮಲೆನಾಡು, ಕರಾವಳಿ ಭಾಗ ಸೇರಿ ಜೂನ್ನಿಂದ ಸೆಪ್ಟೆಂಬರ್ವರೆಗೆ ಒಟ್ಟಾರೆ ಶೇ.30 ರಷ್ಟು ಮಳೆ ಕೊರತೆಯಿದೆ ಎಂದರು.
ಶಿವಮೊಗ್ಗದಲ್ಲಿ ಶೇ.30, ಮಂಗಳೂರಿನಲ್ಲಿ ಶೇ.20 ರಷ್ಟು ಮಳೆ ಕೊರತೆಯಾಗಿದೆ. ಚಿತ್ರದುರ್ಗ, ಹಾಸನ, ತುಮಕೂರು ಭಾಗಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಇದ್ದು ಟ್ಯಾಂಕರ್ಗಳಲ್ಲಿ ಪೂರೈಕೆ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಹೊಸ ತಾಲೂಕುಗಳ ರಚನೆ ಕಾರ್ಯ ಭರದಿಂದ ಸಾಗಿದೆ. 43 ಕಡೆ ಯಾವುದೇ ಸಮಸ್ಯೆ ಇಲ್ಲ. ಕೆಲವೆಡೆ ಮಾತ್ರ ಹೋಬಳಿ ಸೇರಿಸುವ ಹಾಗೂ ತೆಗೆಯುವ ವಿಚಾರದಲ್ಲಿ ಸ್ವಲ್ಪ ಗೊಂದಲ ಇದ್ದು ಸರಿಪಡಿಸಲಾಗುವುದು ಎಂದು ತಿಳಿಸಿದರು.
ಕಾಯ್ದೆ
ಇನಾಮಿ¤ ರದ್ದು ಆದ ನಂತರ 9 ಕಾಯ್ದೆ ಬಂದರೂ ಗೇಣಿದಾರರಿಗೆ ಜಮೀನು ಹಕ್ಕು ಸಿಕ್ಕಿಲ್ಲ. ಹೀಗಾಗಿ, ಹೊಸ ಕಾಯ್ದೆ ತರುವ ಬಗ್ಗೆಯೂ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಮುಂದಿನ ಅಧಿವೇಶನದಲ್ಲಿ ಇದರ ಬಗ್ಗೆ ಚರ್ಚಿಸಿ ಕಾಯ್ದೆ ತರಲಾಗುವುದು ಎಂದು ಹೇಳಿದರು.
ಅಕ್ರಮ-ಸಕ್ರಮ ವಿಚಾರದಲ್ಲಿ ಗ್ರಾಮಿಣ ಭಾಗದಲ್ಲಿ 2.78 ಲಕ್ಷ ಅರ್ಜಿ ವಿಲೇವಾರಿ ಮಾಡಿದ್ದು, ಇನ್ನೂ 2.60 ಲಕ್ಷ ಅರ್ಜಿ ಬಾಕಿಯಿದೆ. ಅದೇ ರೀತಿ ನಗರ ಭಾಗದಲ್ಲಿ 1.18 ಲಕ್ಷ ಅರ್ಜಿ ವಿಲೇವಾರಿಯಾಗಿದ್ದು 49,178 ಅರ್ಜಿ ಬಾಕಿಯಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಕ್ರಮ-ಸಕ್ರಮ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ
*ರಾಜ್ಯದಲ್ಲಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸರ್ಕಾರಿ ಭೂಮಿಯಲ್ಲಿ ವಾಸಕ್ಕಾಗಿ ಕಟ್ಟಿಕೊಂಡ ಮನೆಗಳ ಅಕ್ರಮ-ಸಕ್ರಮ ಸಂಬಂಧ ಅರ್ಜಿ ಸಲ್ಲಿಕೆಗೆ ಮತ್ತೆ ಕಾಲಾವಕಾಶ ಕೊಡುವ ಬಗ್ಗೆ ಚರ್ಚಿಸಲಾಗುತ್ತಿದೆ. ನಗರ ಭಾಗದಲ್ಲಿ ಸರ್ವೆ ಕಾರ್ಯ ನಡೆಯದ ಕಾರಣ ಇನ್ನೂ ಹಲವಾರು ಜನ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ ಎಂಬ ಮಾಹಿತಿ ಇದೆ. ಹೀಗಾಗಿ, ಸಂಪುಟದಲ್ಲಿ ಚರ್ಚಿಸಿ ಸೆಪ್ಟೆಂಬರ್ 12 ಕ್ಕೆ ಮುಗಿದಿರುವ ಗುಡುವು ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು.
– ಕಾಗೋಡು ತಿಮ್ಮಪ್ಪ, ಕಂದಾಯ ಸಚಿವ