ಅರ್ಚಕರ ಒಕ್ಕೂಟದಿಂದಸಿಎಂ ಸಿದ್ದುಗೆ ಅಭಿನಂದನೆ
Team Udayavani, Sep 14, 2017, 1:04 PM IST
ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆ ದೇವಸ್ಥಾನಗಳಿಗೆ ಪೂಜಾ ಸಾಮಗ್ರಿ ಖರೀದಿ ಮೊತ್ತ ಏರಿಕೆ ಹಾಗೂ ಬೆಂಗಳೂರಿನಲ್ಲಿ ಅರ್ಚಕರ ಭವನ ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಅಖೀಲ ಕರ್ನಾಟಕ ಹಿಂದೂ ದೇವಾಲಯಗಳ
ಅರ್ಚಕರ-ಆಗಮಿಕರ ಮತ್ತು ಉಪಾವಂತರ ಒಕ್ಕೂಟವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬುಧವಾರ ಅಭಿನಂದಿಸಿತು.
ಮುಖ್ಯಮಂತ್ರಿಗಳ ಗೃಹ ಕಚೇರಿ “ಕೃಷ್ಣಾ’ದಲ್ಲಿ ಒಕ್ಕೂಟದ ರಾಜ್ಯಾಧ್ಯ ಕ್ಷರೂ ಆದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಒಕ್ಕೂಟದ ಪದಾಧಿಕಾರಿಗಳು ಮುಖ್ಯ ಮಂತ್ರಿಗಳನ್ನು ಸನ್ಮಾನಿಸಿದರು. ನಂತರ ಮಾತನಾಡಿದ ದಿನೇಶ್ ಗುಂಡೂರಾವ್, “ದೇವಾಲಯಗಳಲ್ಲಿ ಪೂಜಾ ಸಾಮಗ್ರಿ ಖರೀದಿಗೆ ಈ ಹಿಂದೆ ವಾರ್ಷಿಕ 24,000 ರೂ. ನೀಡಲಾಗುತ್ತಿತ್ತು. ಕಾಂಗ್ರೆಸ್
ಸರ್ಕಾರವು ಆ ಮೊತ್ತ ಏರಿಕೆ ಮಾಡಿ ಪ್ರತಿ ತಿಂಗಳಿಗೆ 4000 ರೂ.ನಂತೆ ವಾರ್ಷಿಕ 48,000 ರೂ.ಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇದರಿಂದ ರಾಜ್ಯದ 36,217 ದೇವಸ್ಥಾನ ಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಅರ್ಚಕರ ಭವನ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ ಮಂಜೂರಾಗಿದೆ. ಅರ್ಚಕರ ಭವನಕ್ಕಾಗಿ ಮುಜರಾಯಿ ದೇವಾಲಯಗಳ ವ್ಯಾಪ್ತಿಯಲ್ಲಿರುವ ಸೂಕ್ತ ಜಾಗ ಗುರುತಿಸಿ ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳು ಮುಜರಾಯಿ ಇಲಾಖೆ ಸಚಿವರಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು. ಒಕ್ಕೂಟದ ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್.ದೀಕ್ಷಿತ್, ಗೌರವ ಉಪಾಧ್ಯಕ್ಷ ಡಾ.ಎಸ್.ಆರ್. ಶೇಷಾದ್ರಿಭಟ್ಟರ್, ಗೌರವ ಉಪಾಧ್ಯಕ್ಷರಾದ ಶ್ರೀಕಂಠಮೂರ್ತಿ ಇತರರು ಉಪಸ್ಥಿತರಿದ್ದರು.