Consumer Court: ತುಂಡಾಗಿದ್ದ ಕುರ್ಚಿ ಬದಲಿಸಿಕೊಡದ ಅಂಗಡಿಗೆ 15 ಸಾವಿರ ದಂಡ
Team Udayavani, Sep 6, 2023, 1:52 PM IST
ಬೆಂಗಳೂರು: ತುಂಡಾದ ಕುರ್ಚಿ ದುರಸ್ತಿಗೊಳಿಸದೆ ಗ್ರಾಹಕ ಸೇವೆಯಲ್ಲಿ ವ್ಯತ್ಯಯವೆಸಗಿದ ಪೀಠೊಪಕರಣ ಅಂಗಡಿ ಮಾಲೀಕನಿಗೆ ಗ್ರಾಹಕ ನ್ಯಾಯಾಲಯ 15 ಸಾವಿರ ರೂ. ದಂಡ ಪರಿಹಾರ ನೀಡುವಂತೆ ತೀರ್ಪು ಹೊರಡಿಸಿದೆ.
ಬೆಂಗಳೂರಿನ ಮಹಿಳೆಯೊಬ್ಬರು 2022ರ ಫೆ.22ರಂದು 10 ಸಾವಿರ ಬೆಲೆ ಕುರ್ಚಿಯನ್ನು ಪೀಠೊಪಕರಣ ಅಂಗಡಿಯಿಂದ ಖರೀದಿಸಿದ್ದರು. 2022ರ ಜೂನ್ನಲ್ಲಿ ಕುರ್ಚಿ ಕೈ ತುಂಡಾಗಿದ್ದು, ಬಳಕೆಗೆ ಯೋಗ್ಯವಾಗಿಲ್ಲವೆಂದು ಅಂಗಡಿಗೆ ದೂರು ನೀಡಿದ್ದಾರೆ. ಜೂ.15ರಂದು ದೂರಿಗೆ ಸ್ಪಂದಿಸಿದ ಅಂಗಡಿ ಮಾಲೀಕ ಕುರ್ಚಿ ಬದಲಾಯಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ದೂರು ನೀಡಿ ಹಲವು ತಿಂಗಳು ಕಳೆದರೂ ದುರಸ್ತಿ ಮಾಡದ ಪೀಠೊಪಕರಣಗಳ ಅಂಗಡಿ ವಿರುದ್ಧ ಮಹಿಳೆಯು ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.
ಎರಡು ಕಡೆಯ ವಾದವನ್ನು ಪರಿಶೀಲಿಸಿದ ನ್ಯಾಯಾಧೀಶರು 10 ಸಾವಿರ ಕುರ್ಚಿ ಬಾಬ್ತು, ಮಾನಸಿಕ ತೊಂದರೆಗೆ 2,000 ಹಾಗೂ ವ್ಯಾಜ್ಯ ಬಾಬ್ತು 3,000 ರೂ. ಸೇರಿ 15,000 ರೂ. ಪರಿಹಾರ ನೀಡುವಂತೆ ತೀರ್ಪು ನೀಡಿದೆ.