Chandrayaan-3; ಚಂದ್ರಯಾನ ಅಂಚೆ ಚೀಟಿಗೆ ಮುಗಿಬಿದ್ದ ಗ್ರಾಹಕರು!
ವಿಶೇಷ ಅಂಚೆ ರದ್ದತಿ ಚೀಟಿ ಎಲ್ಲ ಅಂಚೆ ಕಚೇರಿಯಲ್ಲಿ ಲಭ್ಯವಿಲ್ಲ.
Team Udayavani, Sep 1, 2023, 3:10 PM IST
ಬೆಂಗಳೂರು: ಸಾರ್ವಜನಿಕರಿಗೆ ವಿಶೇಷ ದಿನಗಳ ಮಹತ್ವದ ಬಗ್ಗೆ ಅರಿವು ಮೂಡಿಸಲು ಹಾಗೂ ಗುಡಿ, ಸಣ್ಣ ಕೈಗಾರಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಾರಂಭಿಸಲಾದ ವಿಶೇಷ ರದ್ದತಿ ಅಂಚೆ ಚೀಟಿಗೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದ ಅಂಚೆ ಬೆಂಗಳೂರು ವೃತ್ತದಲ್ಲಿ ವಿಶೇಷ ದಿನಗಳಂದು ವಿಶೇಷ ಅಂಚೆ ರದ್ದತಿ ಚೀಟಿ ಹೊರ ತರುವ ಯೋಜನೆ ಪ್ರಾರಂಭಿಸಿದೆ. ಇದನ್ನು ಉಚಿತವಾಗಿ ಗ್ರಾಹಕರಿಗೆ ವಿತರಿಸುತ್ತಿದೆ. ಈ ವ್ಯವಸ್ಥೆಯನ್ನು ಮಹಾರಾಷ್ಟ್ರ
ಸೇರಿದಂತೆ ದೇಶದ ಇತರೆ ರಾಜ್ಯಗಳು ಅನುಸರಿಸುತ್ತಿದೆ.
ಕರ್ನಾಟಕ ಅಂಚೆ ವೃತ್ತ 2023ನೇ ಸಾಲಿನಲ್ಲಿ ತಿಂಗಳಿಗೆ 3 ರಿಂದ 4ರಂತೆ ಇದುವರೆಗೆ 24 ವಿಶೇಷ ಅಂಚೆ ರದ್ದತಿ ಚೀಟಿ ಹೊರತಂದಿದೆ. ಇನ್ನೂ 12 ವಿಶೇಷ ರದ್ದತಿ ಅಂಚೆ ಚೀಟಿ ಇನ್ನಷ್ಟೇ ಮುದ್ರಣವಾಗಬೇಕಿದೆ. ಪ್ರಸ್ತುತ ವಿಶೇಷ ದಿನಗಳಂದು ಮುದ್ರಿತವಾಗುವ ರದ್ದತಿ ಅಂಚೆ ಚೀಟಿಯನ್ನು ಪೋಸ್ಟ್ ಆಫೀಸ್ಗೆ ಬರುವವರಿಗೆ ಹಾಗೂ ಅಂಚೆ ಚೀಟಿ ಹವ್ಯಾಸಿ ಸಂಗ್ರಹಕರಿಗೆ ನೀಡಲಾಗುತ್ತಿದೆ.
ಚಂದ್ರಯಾನ್-3ಗೆ ಬೇಡಿಕೆ!: ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಹತ್ತರ ಯೋಜನೆ ಚಂದ್ರಯಾನ -3 ಯಶಸ್ವಿಯಾದ ಹಿನ್ನೆಲೆಯಲ್ಲಿ ಕರ್ನಾಟಕ ಅಂಚೆ ವೃತ್ತವು ಆ.24ರಂದು ವಿಶೇಷ ರದ್ದತಿ ಅಂಚೆ ಚೀಟಿ ಬಿಡುಗಡೆಗೊಳಿಸಿದೆ. ಜನರು
ಚಂದ್ರಯಾನದ ಯಶಸ್ಸಿನ ನೆನಪಿಗಾಗಿ ಚಂದಿ ರನ ಅಂಗಳದ ಮೇಲೆ ವಿಕ್ರಮ್ ಯಶಸ್ವಿಯಾಗಿ ಲ್ಯಾಂಡ್ ಆಗಿರುವ ಚಿತ್ರ ಹಾಗೂ ದಿನಾಂಕದ ವಿಶೇಷ ರದ್ದತಿ ಅಂಚೆ ಚೀಟಿ ಪಡೆದುಕೊಂಡಿದ್ದಾರೆ. 8 ಸಾವಿರ ವಿಶೇಷ ರದ್ದತಿ ಅಂಚೆ ಚೀಟಿ ಬಿಡುಗಡೆಗೊಳಿಸಿದರು, ಕೆಲವೆಡೆ ಚಂದ್ರಯಾನದ ರದ್ದತಿ ಅಂಚೆ ಚೀಟಿ ಸಿಗದೇ ಜನರು ಬರಿಗೈಯಲ್ಲಿ ಹಿಂದುರುಗಿದ್ದಾರೆ.
ಸಂಭ್ರಮಾಚರಣೆ, ಸ್ಮರಣೆ
ಸಣ್ಣ ಕೈಗಾರಿಕೆ, ಗುಡಿ ಕೈಗಾರಿಕೆ, ಭಾರತ ಕ್ರಿಕೆಟ್ ವರ್ಲ್ಡ್ ಕಪ್ ಪಡೆದಿರುವ ದಿನ, ವಿಶ್ವ ಛಾಯಗ್ರಾಹಕರ ದಿನ, ವಿಶ್ವ ಜನಸಂಖ್ಯೆ ದಿನ ಸೇರಿದಂತೆ ವಿವಿಧ ದಿನಗಳ ಸ್ಮರಣೆ ಹಾಗೂ ಸಂಭ್ರಮಾಚರಣೆಗಾಗಿ ವಿಶೇಷ ರದ್ದತಿ ಅಂಚೆ ಚೀಟಿ ಬಿಡುಗಡೆಗೊಳಿಸುತ್ತಿದೆ.
4 ಕಡೆ ಮಾತ್ರ ಲಭ್ಯ
ವಿಶೇಷ ಅಂಚೆ ರದ್ದತಿ ಚೀಟಿ ಎಲ್ಲ ಅಂಚೆ ಕಚೇರಿಯಲ್ಲಿ ಲಭ್ಯವಿಲ್ಲ. ಕರ್ನಾಟಕ ನಾಲ್ಕು ಅಂಚೆ ವೃತ್ತಗಳಾದ ಬೆಂಗಳೂರು,
ಮಂಗಳೂರು, ಮೈಸೂರು ಹಾಗೂ ಬೆಳಗಾವಿಯ ಕಚೇರಿಯಲ್ಲಿ ಮಾತ್ರ ಲಭ್ಯವಿರಲಿ ದೆ. ಸಾಮಾನ್ಯವಾಗಿ ವಿಶೇಷ ದಿನದಂದು ಪ್ರತಿಯೊಂದು ವಿಭಾಗದಲ್ಲಿ 2 ಸಾವಿರ ರದ್ದತಿ ಅಂಚೆ ಚೀಟಿ ಮುದ್ರಿಸಲಾಗುತ್ತಿದೆ. ಇದನ್ನು ಉಚಿತವಾಗಿ ನೀಡಲಾಗುತ್ತಿದೆ.
ವಿಶೇಷ ದಿನಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಹಾಗೂ ಜನರಿಗೆ ವಿಶೇಷ ದಿನಗಳ ಸ್ಮರಿಸುವ ನಿಟ್ಟಿನಲ್ಲಿ ವಿಶೇಷ ರದ್ದತಿ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸುತ್ತಿದೆ. ಪ್ರಸ್ತುತ ಈ ಯೋಜನೆಗೆ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿದೆ. ಚಂದ್ರಯಾನ್ -3 ವಿಶೇಷ ರದ್ದತಿ ಅಂಚೆ ಚೀಟಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅವಧಿಗೂ ಮುನ್ನವೇ ಅಂಚೆ ಕಚೇರಿಯಲ್ಲಿ ಈ ಅಂಚೆ ಚೀಟಿಗಳು ಖಾಲಿಯಾಗಿವೆ.
● ರಾಜೇಂದ್ರ, ಚೀಫ್ ಪೋಸ್ಟ್ ಮಾಸ್ಟರ್ ಜನರಲ್