ಕೆರೆಗಳಿಗೆ ಕಲುಷಿತ ನೀರು: ಕ್ರಮಕ್ಕೆ ಮನವಿ
Team Udayavani, May 16, 2020, 5:05 AM IST
ಬೆಂಗಳೂರು: ಲಾಕ್ಡೌನ್ನಿಂದಾಗಿ ನಗರದ ಕೆರೆಗಳಲ್ಲಿ ಕಲುಷಿತ ನೀರಿನ ಪ್ರಮಾಣ ಕಡಿಮೆಯಾಗಿರುವುದು ಸ್ಪಷ್ಟವಾಗಿದ್ದು, ಕಲುಷಿತ ನೀರು ಬಿಡುತ್ತಿರುವ ಕೈಗಾರಿಕೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಸಂಬಂಧ ಮೇಯರ್ ಎಂ. ಗೌತಮ್ಕುಮಾರ್ ಅವರು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ವಿಜಯ್ ಕುಮಾರ್ ಗೋಗಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.
ಈ ಸಂಬಂಧ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿಜಯ್ಕುಮಾರ್ ಗೋಗಿ ಅವರನ್ನು ಶುಕ್ರವಾರ ಭೇಟಿ ಮಾಡಿದ ಮೇಯರ್, ಲಾಕ್ಡೌನ್ ನಿಂದಾಗಿ ನಗರದ ಹಲವು ರಾಜಕಾಲುವೆಗಳಲ್ಲಿ ಕಲುಷಿತ ನೀರು ಸೇರುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ನಗರದಲ್ಲಿ ಕಾರ್ಖಾನೆಗಳಿಂದ ರಾಸಾಯನಿಕ ಹಾಗೂ ಕಲುಷಿತ ನೀರು ರಾಜಕಾಲುವೆಗಳ ಮೂಲಕ, ಕೆರೆಗಳನ್ನು ಸೇರುತ್ತಿವೆ. ಈ ರೀತಿ ಕಾರ್ಖಾನೆಗಳಿಂದಲೇ ನೀರು ಸೇರುತ್ತಿರುವುದು ಲಾಕ್ಡೌನ್ನಿಂದಾಗಿ ಸ್ಪಷ್ಟವಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಸಿಟಿಜನ್ಸ್ ಫಾರ್ ಸಿಟಿಜನ್ಸ್, ಕೋಟಿ ವೃಕ್ಷ ಸೈನ್ಯ, ನಮಾಮಿ ವೃಷಭಾವತಿ ಫೌಂಡೇಷನ್ ಸೇರಿದಂತೆ ಹಲವು ಸ್ವಯಂ ಸೇವಾ ಸಂಸ್ಥೆಗಳು ಮಾಹಿತಿ ಕಲೆಹಾಕಿದ್ದು, ಇವರು ಸಂಗ್ರಹಿಸಿರುವ ಮಾಹಿತಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಅಲ್ಲದೆ, ಕಲುಷಿತ ನೀರು ರಾಜಕಾಲುವೆಗೆ ಸೇರಲು ಕಾರಣರಾಗುತ್ತಿರುವ ಕಾರ್ಖಾನೆಗಳ ಪರವಾನಗಿಯನ್ನು ರದ್ದುಪಡಿಸಬೇಕು. ಕಲುಷಿತ ನೀರಿನ ಸಂಸ್ಕರಣೆಗೆ ಕ್ರಮವಹಿಸಬೇಕು ಎಂದು ಮನವಿ ಮಾಡಿದ್ದಾರೆ.