ಕೊಡುಗೆಗಳ ಮಹಾಪೂರ ಚುನಾವಣೆ ಚಮತ್ಕಾರ!

ಸುದ್ದಿ ಸುತ್ತಾಟ

Team Udayavani, Nov 25, 2019, 3:09 AM IST

koduge

ಚಿತ್ರ: ಫಕ್ರುದ್ಧೀನ್ ಎಚ್.

ಸರ್ಕಾರ ಸುಭದ್ರವಾಗಿರಲು ಕನಿಷ್ಠ ಇನ್ನೂ ಎಂಟು ಸೀಟುಗಳ ಅಗತ್ಯವಿದೆ. ಅದರಲ್ಲಿ ಐದು ನಗರದಲ್ಲೇ ಬರುತ್ತವೆ (ಒಂದಕ್ಕೆ ಇನ್ನೂ ಚುನಾವಣೆ ಘೋಷಣೆ ಆಗಿಲ್ಲ). ಒಂದು ವೇಳೆ ಮಧ್ಯಂತರ ಚುನಾವಣೆ ಎದುರಾದರೂ ಹೆಚ್ಚು ಸ್ಥಾನಗಳನ್ನು ಒಳಗೊಂಡ ಬೆಂಗಳೂರು ಜಿಲ್ಲೆ ಉಳಿದವುಗಳಿಗಿಂತ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಎದ್ದುಕಾಣುವ ಮತ್ತು ಜನಪರ ಘೋಷಣೆಗಳತ್ತ ಸರ್ಕಾರ ಕಣ್ಣು ನೆಟ್ಟಿದೆ. ಇದರ ಪರಿಣಾಮವೇ ಬಸ್‌ ಪ್ರಯಾಣ ದರ ಇಳಿಕೆ, ಉಪನಗರ ರೈಲು ಯೋಜನೆಗೆ ಮಂಡಳಿ ಅನುಮೋದನೆಯಂತಹ ಪೂರಕ ಕ್ರಮಗಳಾಗಿವೆ. ಈ ಘೋಷಣೆಗಳ ಒಳನೋಟ ಈ ಬಾರಿಯ “ಸುದ್ದಿ ಸುತ್ತಾಟ’ದಲ್ಲಿ….

ಆರ್ಥಿಕ ಸಂಕಷ್ಟದಲ್ಲಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಯಾಣ ದರ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತು. ಆದರೆ, ಪ್ರಯಾಣ ದರ ಕಡಿಮೆ ಮಾಡುವುದಾಗಿ ಸರ್ಕಾರ ಘೋಷಿಸಿತು! ರೈಲ್ವೆ ಹೋರಾಟಗಾರರು ಹಲವು ಬಾರಿ ಮನವಿ ಸಲ್ಲಿಸಿದರೂ ಉಪನಗರ ರೈಲಿಗೆ ಸಂಬಂಧಿಸಿದ ಪರಿಷ್ಕೃತ ಯೋಜನೆಗೆ ಸಿಗದ ಒಪ್ಪಿಗೆ ಏಕಾಏಕಿ ರೈಲ್ವೆ ಮಂಡಳಿಯಿಂದ ಅನುಮೋದನೆಗೊಂಡಿತು.

ಮತ್ತೂಂದೆಡೆ ಮೆಟ್ರೋ ಸಂಪರ್ಕ ಜಾಲ ದುಪ್ಪಟ್ಟು ವಿಸ್ತರಿಸಲಾಗಿದೆ. ಜತೆಗೆ ಮುಂದಿನ ಆರೇಳು ತಿಂಗಳಲ್ಲಿ “ನಮ್ಮ ಮೆಟ್ರೋ’ ಎರಡನೇ ಹಂತದ ಒಂದು ವಿಸ್ತೃತ ಮಾರ್ಗ ಲೋಕಾರ್ಪಣೆ ಮಾಡುವ ಗುರಿಯನ್ನು ಬಿಎಂಆರ್‌ಸಿಎಲ್‌ಗೆ ನೀಡಿದ್ದು, ಒತ್ತಡದಲ್ಲಿ ನಿಗಮ ಕೆಲಸ ಮಾಡುತ್ತಿದೆ. ಈ ಮಧ್ಯೆ ಐಟಿ-ಬಿಟಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಒಂದರ ಹಿಂದೊಂದು ನಿಗಮ-ಪ್ರಾಧಿಕಾರಗಳನ್ನು ಸರ್ಕಾರ ಘೋಷಿಸುತ್ತಿದೆ.

ಸದ್ದಿಲ್ಲದೆ ನಡೆಯುತ್ತಿರುವ ಈ ನಗರ ಕೇಂದ್ರಿತ ಬೆಳವಣಿಗೆಗಳು, ಸರ್ಕಾರದ ಚಿತ್ತ ಪ್ರಸ್ತುತ ಎದುರಾಗಿರುವ ಪಚುನಾವಣೆ ಮತ್ತು ಮುಂದೆ ಎದುರಾಗಲಿರುವ ಚುನಾವಣೆಗಳತ್ತ ನೆಟ್ಟಿರುವುದನ್ನು ಬೊಟ್ಟು ಮಾಡಿ ತೋರಿಸುತ್ತಿವೆ. ಪ್ರಸ್ತುತ 16 ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳು ನಗರದಲ್ಲೇ ಬರುತ್ತವೆ (ಆರ್‌.ಆರ್‌.ನಗರದಲ್ಲಿ ಚುನಾವಣೆ ಆಗಬೇಕಿದೆ). ಅಂದರೆ ಸರ್ಕಾರ ಸುಭದ್ರವಾಗಿರಲು ಬೇಕಿರುವ ಎಂಟು ಸೀಟುಗಳಲ್ಲಿ ಅರ್ಧಕ್ಕರ್ಧ ನಗರದಲ್ಲೇ ಇವೆ.

ಈ ದೃಷ್ಟಿಯಿಂದ ಬೆಂಗಳೂರು ಮಹಾನಗರ ಸರ್ಕಾರದ “ವಿಶೇಷ ಪ್ರೀತಿ’ ಮಹತ್ವ ಪಡೆದುಕೊಂಡಿದೆ. ಹೊಸ ಸರ್ಕಾರದ ಮುಂದೆ ಈಗ ಎರಡು ರೀತಿಯ ಸವಾಲುಗಳಿವೆ. ಒಂದು- ಹಿಂದಿನ ಮೈತ್ರಿ ಸರ್ಕಾರಕ್ಕೂ ಮತ್ತು ಹೊಸ ಸರ್ಕಾರದ ಕಾರ್ಯವೈಖರಿಗೂ ವ್ಯತ್ಯಾಸ ಇದೆ ಎಂಬುದನ್ನು ಜನರಿಗೆ ಮನವರಿಕೆಯಾಗುವಂತೆ ತೋರಿಸಿಕೊಡುವುದು. ಮತ್ತೂಂದು; ಮಧ್ಯಂತರ ಚುನಾವಣೆ ಎದುರಾಗದಂತೆ ನೋಡಿಕೊಳ್ಳುವುದು.

ಇದಕ್ಕಾಗಿ ಉಪಚುನಾವಣೆಯಲ್ಲಿ ಅಗತ್ಯ ಸೀಟುಗಳನ್ನು ಗೆಲ್ಲುವ ಜತೆಗೆ ಕೇಂದ್ರಕ್ಕೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕೂಡ ಸರ್ಕಾರಕ್ಕೆ ನೂರು ದಿನಗಳು ಪೂರೈಸಿದ ಸಂದರ್ಭದಲ್ಲಿ “ಪೂರ್ಣಾವಧಿ ಪೂರೈಸುವುದು ನನ್ನ ಕಾರ್ಯವೈಖರಿ ಮೇಲೆ ನಿಂತಿದೆ’ ಎಂದು ಹೇಳಿದ್ದು ಕೂಡ ಇದೇ ಅರ್ಥದಲ್ಲಿ ಎನ್ನಲಾಗಿದೆ. ಈ ನಡೆಯ ಹಿಂದೆ ಉಪಚುನಾವಣೆಯ ಗುರಿಯೊಂದೇ ಇಲ್ಲ.

ಎಂಟು ಸ್ಥಾನಗಳನ್ನು ಗೆದ್ದರೂ ಅದು ಸರಳ ಬಹುಮತ ಆಗಲಿದೆ. ತದನಂತರವೂ ಸರ್ಕಾರದ್ದು “ತಂತಿ ಮೇಲಿನ ನಡಿಗೆ’ಯೇ ಆಗಿರಲಿದೆ. ಹಾಗಾಗಿ, ಮಧ್ಯಂತರ ಚುನಾವಣೆ ಗುಮ್ಮ ಆಗಲೂ ತಪ್ಪಿದ್ದಲ್ಲ. ಹಾಗಾಗಿ, ಅದಕ್ಕೂ ಈಗಿನಿಂದಲೇ ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದರ ಫ‌ಲಶ್ರುತಿಯೇ ಈ ನಗರ ಕೇಂದ್ರಿತ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬೆಂಗಳೂರು ಮೇಲೆ ಕಣ್ಣು: ಒಟ್ಟಾರೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಅತಿ ಹೆಚ್ಚು, 28 ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆ ಬೆಂಗಳೂರು. ಇನ್ನು ಮೂಲತಃ ಬಿಜೆಪಿ ನಗರ ಪ್ರದೇಶದಲ್ಲಿ ಪ್ರಬಲವಾಗಿದೆ. ಇಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದರೆ, ಅಧಿಕಾರದ ಗದ್ದುಗೆ ಸುಲಭ ಎಂಬ ಲೆಕ್ಕಾಚಾರ ಇದರ ಹಿಂದಿದೆ. ಇಷ್ಟೇ ಅಲ್ಲ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ಕೂಡ ಸೆಪ್ಟೆಂಬರ್‌-ಅಕ್ಟೋಬರ್‌ನಲ್ಲಿ ಎದುರಾಗಲಿದೆ.

ಪ್ರಸ್ತುತ ಘೋಷಣೆಗಳು ಮತ್ತು ಸರ್ಕಾರದ ಕಾರ್ಯವೈಖರಿಯು ಸ್ಥಳೀಯ ಸಂಸ್ಥೆಯ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಪಾಲಿಕೆಯಲ್ಲಿ ಕೆಲ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಅದೇ ಸದಸ್ಯರು ಉಪಚುನಾವಣೆಯಲ್ಲೂ ಸರ್ಕಾರದ ಉಳಿವಿಗೆ ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಪ್ರಯಾಣಿಕರಿಗೆ ಕೊಡುಗೆ: ಈ ಘೋಷಣೆಗಳ ಹಿಂದೆ ಯಾವುದೇ ಕಾರ್ಯತಂತ್ರ ಕೆಲಸ ಮಾಡಿದ್ದರೂ, ಜನರಿಗಂತೂ ಅನುಕೂಲ ಆಗಿದೆ. ದರ ಕಡಿಮೆ ಮಾಡಲು ಮುಂದಾಗಿರುವುದರಿಂದ ಪ್ರಯಾಣಿಕರ ಮೇಲೆ ಹೊರೆ ತಗ್ಗಲಿದೆ. ಮತ್ತೂಂದೆಡೆ ಇದಕ್ಕೆ ವ್ಯತಿರಿಕ್ತವಾಗಿ ಬಿಎಂಟಿಸಿ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೂ ಸಿಲುಕಲಿದೆ.

ಕಳೆದ ಐದು ವರ್ಷಗಳಿಂದ ಪ್ರಯಾಣ ದರ ಏರಿಕೆ ಆಗಿಲ್ಲ. ಆದರೆ, ಡೀಸೆಲ್‌ ದರ ಹಲವಾರು ಬಾರಿ ಹೆಚ್ಚಳ ಆಗಿದೆ. ಪ್ರತಿ ವರ್ಷ ಅಂದಾಜು 200 ಕೋಟಿ ನಷ್ಟದಲ್ಲಿ ಸಾಗುತ್ತಿರುವ ಬಿಎಂಟಿಸಿ, 600ರಿಂದ 800 ಕೋಟಿ ರೂ. ಸಾಲದಲ್ಲಿದೆ. ಪ್ರತಿ ತಿಂಗಳು 18 ಕೋಟಿ ರೂ. ಸಾಲದ ಮೆಲಿನ ಬಡ್ಡಿ ಪಾವತಿಸುತ್ತಿದೆ.

ಈ ಮಧ್ಯೆ ನಾಲ್ಕು ವರ್ಷಗಳಿಗೊಮ್ಮೆ ನೌಕರರಿಗೆ ನೀಡಲಾಗುವ ವೇತನ ಭತ್ಯೆ ಮತ್ತಿತರ ಸೌಲಭ್ಯಗಳನ್ನು ಹೆಚ್ಚಿಸುತ್ತಿದ್ದು, 2020ರ ಜನವರಿಗೆ ಮತ್ತೆ ಅದು ಅನ್ವಯ ಆಗಲಿದೆ. ಈಗ ದರ ಹೆಚ್ಚಳದ ನಿರೀಕ್ಷೆಗೆ ತಣ್ಣೀರೆರಚಿದಂತಾಗಿದ್ದು, ಸರ್ಕಾರದ ಅನುದಾನವನ್ನು ಸಂಸ್ಥೆ ಎದುರುನೋಡುತ್ತಿದೆ.

ಬಿಎಂಟಿಸಿಯು ತಿಂಗಳಿಗೆ 1 ಕೋಟಿ ಲೀ. ಡೀಸೆಲ್‌ ಖರೀದಿಸುತ್ತಿದ್ದು, ಕೊನೆಪಕ್ಷ ಡೀಸೆಲ್‌ ಮೇಲಿನ ಸೆಸ್‌ನಿಂದಾದರೂ ವಿನಾಯ್ತಿ ನೀಡಿದರೆ, ವಾರ್ಷಿಕ 200 ಕೋಟಿ ರೂ. ಸಂಸ್ಥೆಗೆ ಉಳಿತಾಯ ಆಗುತ್ತದೆ. ಇದಲ್ಲದೆ, ದೆಹಲಿ ನಗರ ಸಾರಿಗೆಗೆ ಪ್ರತಿ ವರ್ಷ ಸಾವಿರ ಕೋಟಿ ರೂ. ಅನುದಾನ ನೀಡಲಾಗುತ್ತದೆ. ಅದೇ ಮಾದರಿಯನ್ನು ಇಲ್ಲಿಯೂ ಅನುಸರಿಸಬಹುದು ಎಂದು ನಿಗಮದ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಮೆಟ್ರೋ ಜಾಲ ವಿಸ್ತರಣೆ: “ನಮ್ಮ ಮೆಟ್ರೋ’ 1, 2, 2ಎ ಮತ್ತು ಬಿ ಸೇರಿದಂತೆ ಒಟ್ಟಾರೆ ಮೆಟ್ರೋ ಜಾಲ ಪ್ರಸ್ತುತ 160-170 ಕಿ.ಮೀ. ಇದೆ. ಇದನ್ನು 300 ಕಿ.ಮೀ.ಗೆ ವಿಸ್ತರಣೆಗೊಳಿಸುವುದರಿಂದ ನಗರದ ಸುತ್ತಲಿನ ಪ್ರದೇಶಕ್ಕೂ ಸೇವೆ ಲಭ್ಯವಾಗಲಿದೆ. ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಲಿದ್ದು, ಆ ಮೂಲಕ ಸಂಚಾರದಟ್ಟಣೆ ಕಿರಿಕಿರಿಯಿಂದ ಮುಕ್ತಿ ಸಿಗಲಿದೆ.ಆದರೆ, ಇದು ಸಾಕಾರಗೊಳ್ಳಲು ದಶಕವೇ ಬೇಕಾಗುತ್ತದೆ ಎನ್ನುತ್ತದೆ ಬಿಎಂಆರ್‌ಸಿಎಲ್‌ ಕಾರ್ಯವೈಖರಿ.

2014-15ರಲ್ಲಿ ಅನುಮೋದನೆ ನೀಡಿದ ಎರಡನೇ ಹಂತದ ಯೋಜನೆಯಲ್ಲಿ ಇದುವರೆಗೆ ಒಂದೇ ಒಂದು ಮಾರ್ಗವನ್ನು ಲೋಕಾರ್ಪಣೆ ಮಾಡಲು ನಿಗಮಕ್ಕೆ ಸಾಧ್ಯವಾಗಿಲ್ಲ. ಈಗಷ್ಟೇ ಟೆಂಡರ್‌ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಹಂತ ತಲುಪಿದೆ. ಈ ಮಧ್ಯೆ 2023-24ಕ್ಕೆ ಗಡುವು ವಿಸ್ತರಣೆ ಆಗಿದೆ. ಹೀಗಿರುವಾಗ ದುಪ್ಪಟ್ಟು ಕಿ.ಮೀ. ಮಾರ್ಗ ನಿರ್ಮಾಣಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ. ಇದಕ್ಕಾಗಿ ಕಾರ್ಯವೈಖರಿ ಬದಲಾಗಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಮುಂದಿನ ಆರೇಳು ತಿಂಗಳಲ್ಲಿ ಕನಕಪುರ ಮಾರ್ಗವನ್ನು ಲೋಕಾರ್ಪಣೆ ಮಾಡುವ ಗುರಿ ಬಿಎಂಆರ್‌ಸಿಎಲ್‌ ಮುಂದಿದೆ. ಮಾರ್ಗ ನಿರ್ಮಾಣ, ಹಳಿ ಜೋಡಣೆ, ಸಿವಿಲ್‌ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ. ಸಣ್ಣ-ಪುಟ್ಟ ಕಾರ್ಯಗಳು ಬಾಕಿ ಇದ್ದು, ನಿಗದಿತ ಅವಧಿಯಲ್ಲಿ ಸೇವೆಗೆ ಇದು ಮುಕ್ತವಾಗಲಿದೆ. ಕೆಂಗೇರಿ ಮಾರ್ಗದಲ್ಲಿ ಹಲವು ತಾಂತ್ರಿಕ ಕಾರಣಗಳಿರುವುದರಿಂದ ಸಮಯ ಹಿಡಿಯುತ್ತದೆ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಾಧಿಕಾರಗಳ ಮಹಾಪೂರ: ಸಿಲಿಕಾನ್‌ ಸಿಟಿಯಲ್ಲಿ ತಂತ್ರಜ್ಞಾನ ಬೆಳವಣಿಗೆಗೆ ಒಂದರ ಹಿಂದೊಂದು ಪ್ರಾಧಿಕಾರ ಸ್ಥಾಪನೆಯ ಘೋಷಣೆ ಮಾಡುತ್ತಿದೆ. ಮೊದಲಿಗೆ ಐಟಿ-ಬಿಟಿಗಾಗಿ ವಿಜನ್‌ ಗ್ರೂಪ್‌ ಇತ್ತು. ತದನಂತರ ಸ್ಟಾರ್ಟ್‌ಅಪ್‌ಗಾಗಿ ವಿಜನ್‌ ಗ್ರೂಪ್‌ ಸ್ಥಾಪಿಸುವುದಾಗಿ ಹೇಳಿದೆ. ಬೆನ್ನಲ್ಲೇ ಸ್ಟಾರ್ಟ್‌ಅಪ್‌ ನೀತಿ, ಆವಿಷ್ಕಾರ ಪ್ರಾಧಿಕಾರ ರಚಿಸುವುದಾಗಿ ಹೇಳಿತು.

ಇದಾದ ನಂತರ ಗ್ಲೋಬಲ್‌ ಇನ್‌ಹೌಸ್‌ ಸೆಂಟರ್‌ (ಜಿಐಸಿ)ಗಳ ಉತ್ತೇಜನಕ್ಕೆ ತಂತ್ರಜ್ಞಾನ ಅಭಿವೃದ್ಧಿ ಮಂಡಳಿ ಸ್ಥಾಪಿಸುವುದಾಗಿ ಘೋಷಿಸಿತು. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ರೆಗ್ಯುಲೇಟರಿ ಸ್ಯಾಂಡ್‌ ಬಾಕ್ಸ್‌ ನೀತಿ ರೂಪಿಸುವುದಾಗಿ ಸರ್ಕಾರ ಹೇಳಿದೆ. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರವನ್ನೂ ಘೋಷಿಸಿದ್ದು, ಇದನ್ನು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದಡಿ ತರಲು ನಿರ್ಧರಿಸಿದೆ. ಇದು ಮಾತ್ರವಲ್ಲದೆ, ನಗರದ ನಾಲ್ಕು ಸಾವಿರ ಸ್ಥಳಗಳಲ್ಲಿ ದಿನದಲ್ಲಿ ಒಂದು ಗಂಟೆ ಉಚಿತ ವೈ-ಫೈ ಸೇವೆ ನೀಡಲು ಸರ್ಕಾರ ತೀಮಾನಿಸಿದೆ.

ಉಪನಗರ ರೈಲಿಗೆ ಮಂಡಳಿ ಒಪ್ಪಿಗೆ: ಕಾಕತಾಳೀಯ ಎಂಬಂತೆ ಉಪಚುನಾವಣೆ ಘೋಷಣೆಗೆ ಕೆಲವೇ ದಿನಗಳ ಮುನ್ನ ಉಪನಗರ ರೈಲು ಯೋಜನೆಗೆ ರೈಲ್ವೆ ಮಂಡಳಿ ಅನುಮತಿ ನೀಡಿದೆ. ಇದರೊಂದಿಗೆ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಮತ್ತು ಕೇಂದ್ರ ಸಚಿವ ಸಂಪುಟ ಸಮಿತಿ ಅನುಮೋದನೆ ಮಾತ್ರ ಬಾಕಿ ಉಳಿದಂತಾಗಿದೆ. ಯೋಜನೆ ಅಡಿ ನಗರದಲ್ಲಿ ನಾಲ್ಕು ಕಾರಿಡಾರ್‌ಗಳಲ್ಲಿ 148 ಕಿ.ಮೀ. ಉದ್ದದ ರೈಲ್ವೆ ಮಾರ್ಗ ನಿರ್ಮಿಸಲಾಗುತ್ತಿದ್ದು,

55.5 ಕಿ.ಮೀ. ಎತ್ತರಿಸಿದ ಮಾರ್ಗ ಇರಲಿದೆ. ಒಟ್ಟಾರೆ 62 ನಿಲ್ದಾಣಗಳು ಬರಲಿದ್ದು, 22 ನಿಲ್ದಾಣಗಳು ಎತ್ತರಿಸಿದ ಮಾರ್ಗದಲ್ಲಿ ಬರಲಿವೆ. ಯೋಜನೆ ಅನುಷ್ಠಾನಕ್ಕಾಗಿ 28.64 ಹೆಕ್ಟೇರ್‌ ಯಾವುದೇ ಕಟ್ಟಡಗಳ ನಿರ್ಮಾಣ ಇಲ್ಲದ ಮುಕ್ತ ಖಾಸಗಿ ಭೂಮಿ ಹಾಗೂ 12.52 ಹೆಕ್ಟೇರ್‌ ನಿರ್ಮಿತ ಪ್ರದೇಶವಾಗಿದ್ದು, ಒಟ್ಟಾರೆ 132.30 ಹೆಕ್ಟೇರ್‌ ಭೂಸ್ವಾಧೀನವಾಗಲಿದೆ. ಮುಂದಿನ ಆರು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಉಲ್ಲೇಖೀಸಲಾಗಿದೆ.

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.