ವಿದ್ಯಾರ್ಥಿ ನಾಯಕತ್ವ ಬೆಳೆಸಿ
Team Udayavani, Aug 2, 2018, 12:28 PM IST
ಬೆಂಗಳೂರು: ವಿದ್ಯಾರ್ಥಿ ನಾಯಕತ್ವ ಹಾಗೂ ಸಂಘಟನಾತ್ಮಕ ಶಕ್ತಿ ಬೆಳೆದರಷ್ಟೇ ಪಕ್ಷ ಬಲಿಷ್ಠವಾಗಲಿದೆ ಎಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರು ನಗರ, ಗ್ರಾಮಾಂತರ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ ” ಸ್ಪೂರ್ತಿ’ ಸಮಾವೇಶದಲ್ಲಿ ಮಾತನಾಡಿ, ವಿದ್ಯಾರ್ಥಿ ನಾಯಕತ್ವ ಹಾಗೂ ಸಂಘಟನಾತ್ಮಕ ಶಕ್ತಿ ಬೆಳೆದರೆ ಪಕ್ಷ ಗಟ್ಟಿಯಾಗುತ್ತದೆ. ಆದರೆ ಕೆಲವು ಸಚಿವರು ಹಾಗೂ ಶಾಸಕರಿಗೆ ವಿದ್ಯಾರ್ಥಿ ನಾಯಕತ್ವದ ಕಿಮ್ಮತ್ತು ತಿಳಿದಿಲ್ಲ.
ಸ್ಥಳೀಯ ಸಂಸ್ಥೆಗಳಿಂದ ಭವಿಷ್ಯದ ನಾಯಕರು ರೂಪುಗೊಳ್ಳಬೇಕು ಎಂದರು. ನಿಗಮ-ಮಂಡಳಿ ಹಾಗೂ ಸಮಿತಿಗಳಿಗೆ ನಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿ ಎಂದು ಕೇಳುವವರಿಗೆಲ್ಲ ಅಧಿಕಾರ ನೀಡಬಾರದು.
ಸ್ಥಳೀಯ ಮಟ್ಟದಲ್ಲಿ, ವಿದ್ಯಾರ್ಥಿ ಮಟ್ಟದಲ್ಲಿ ಪಕ್ಷದ ಸಂಘಟನೆಗೆ ಒತ್ತು ನೀಡಿದವರಿಗೆ ಹಾಗೂ ಎನ್ಎಸ್ಯುಐಗೆ ಹೆಚ್ಚು ನೋಂದಣಿ ಮಾಡಿಸಿದವರಿಗೆ ಅಧಿಕಾರ ನೀಡುವುದು ಸೂಕ್ತ. ವಿದ್ಯಾರ್ಥಿಗಳು ಪಕ್ಷಕ್ಕೆ ಸದಸ್ಯರಾಗದಿದ್ದರೆ ಮುಂದೆ ಪಕ್ಷ ನಡೆಸುವುದು ಕಷ್ಟವಾಗಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿ ಜೀವನದಲ್ಲಿ ಕಾಂಗ್ರೆಸ್ ತತ್ವ ಸಿದ್ಧಾಂತಗಳನ್ನು ಯುವ ಪೀಳಿಗೆಯಲ್ಲಿ ಬೆಳೆಸಿದರೆ ಅವರು ಸದಾ ಪಕ್ಷಕ್ಕಾಗಿ ದುಡಿಯಲಿದ್ದಾರೆ. ಪಕ್ಷಾಂತರ ಮಾಡುವುದು ಕೂಡ ಕಡಿಮೆಯಾಗಲಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ನನ್ನನ್ನ ಎಷ್ಟಾದರೂ ಬಳಸಿಕೊಳ್ಳಲಿ. ನಾನು ಸಾಮಾನ್ಯ ಕಾರ್ಯಕರ್ತನಂತೆ ದುಡಿಯಲು ಸಿದ್ಧ. ನನ್ನ ಮನೆ ಮೇಲೆ ಐಟಿ ದಾಳಿ ಆಯಿತು. ಕೆಲವರಂತೂ ಇನ್ನೂ ಅನುಭವಿಸಲಿ ಅಂತ ಖುಷಿಪಟ್ಟಿ¨ªಾರೆ. ಇನ್ನೂ ಕೆಲವರು ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಈ ಬಗ್ಗೆ ನನಗೂ ಗೊತ್ತಿದೆ.
ಇವೆಲ್ಲಕ್ಕೆ ನಾನು ತಲೆಕೆಡಿಸಿಕೊಳ್ಳಲ್ಲ. ಪಕ್ಷಕ್ಕಾಗಿ ದುಡಿಯಲು ಶತಸಿದ್ಧ .ಅಧಿಕಾರಕ್ಕಾಗಿ ನಾನು ಎಂದಿಗೂ ಹಂಬಲಿಸಲಿಲ್ಲ. ಧರ್ಮಸಿಂಗ್ ಅವಧಿಯಲ್ಲಿ ಸುಮ್ಮನಿದ್ದೆ. ಸಿದ್ದರಾಮಯ್ಯನವರ ಅವಧಿಯಲ್ಲಿ 7 ತಿಂಗಳು ಅಧಿಕಾರವೇ ಸಿಕ್ಕಿರಲಿಲ್ಲ. ಈ ಬಗ್ಗೆ ನಾನು ಹೊರಗಡೆ ಚರ್ಚಿಸಲೇ ಇಲ್ಲ. ಅಧಿಕಾರ ಹುಡುಕಿಕೊಂಡು ಬಂದಿತ್ತು ಎಂದರು.
ಬಹಿರಂಗ ಚರ್ಚೆ – ಶಿಸ್ತುಕ್ರಮ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಹಿಂದಿನ ಸರ್ಕಾರದಲ್ಲಿ ಸಿದ್ದರಾಮಯ್ಯರು ಕಳೆದ ಬಾರಿ ಉತ್ತಮ ಆಡಳಿತ ನೀಡಿದರೂ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬರಲಿಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಾವು ಸುಲಭದಲ್ಲಿ ಗೆಲ್ಲಲ್ಲು ಸಾಧ್ಯವಿಲ್ಲ.
ಬೂತ್ಮಟ್ಟದ ಕಾರ್ಯಕರ್ತರು ಮತದಾರರು ಯಾಕೆ ಕಾಂಗ್ರೆಸ್ಗೆ ಮತ ನೀಡಬೇಕೆಂದು ಮನದಟ್ಟಾಗುವಂತೆ ತಿಳಿಸಬೇಕು. ಆಗ ಮಾತ್ರ 28 ಕ್ಷೇತ್ರಗಳಲ್ಲಿ ಅತಿ ಹೆಚ್ಚು ಗೆಲ್ಲಲು ಸಾಧ್ಯವಿದೆ ಎಂದು ತಿಳಿಸಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ಏನಾದರೂ ತಪ್ಪು ನಿರ್ಣಯ ತೆಗೆದುಕೊಂಡರೆ ಪಕ್ಷದ ಚೌಕಟ್ಟಿನಲ್ಲಿ ಚರ್ಚೆಯಾಗಬೇಕು. ಬಹಿರಂಗವಾಗಿ ಹೇಳಿಕೆ ನೀಡಬಾರದು. ಬಹಿರಂಗ ಹೇಳಿಕೆ ನೀಡಿದರೆ ಶಿಸ್ತಿನ ಕ್ರಮ ಅನಿವಾರ್ಯ. ಮೈತ್ರಿ ಧರ್ಮವನ್ನು ನಾವು ಪಾಲಿಸಬೇಕು ಎಂದರು.
ಎಲ್ಲರ ಜೊತೆ ಚರ್ಚೆ ಮಾಡಿಯೇ ಜಿÇÉಾ ಉಸ್ತುವಾರಿ ಸಚಿವರ ನೇಮಕ ಮಾಡಲಾಗಿದೆ. ಮೂರ್ನಾಲ್ಕು ಕಡೆಗಳಲ್ಲಿ ಸ್ಥಳೀಯರನ್ನು ಹಾಕಬೇಡಿ ಎಂಬ ಅಭಿಪ್ರಾಯ ಬಂದಿತ್ತು. ಎರಡು ಪಕ್ಷದ ವರಿಷ್ಠರು ಕುಳಿತು ಚರ್ಚೆ ಮಾಡಿ ನೇಮಕ ಮಾಡಲಾಗಿದೆ.
-ಡಿ.ಕೆ.ಶಿವಕುಮಾರ್