ಆದಿತ್ಯನಾಥ ವಿರುದ್ಧ ಹೇಳಿಕೆಗೆ ದಿನೇಶ್ ವಿಷಾದ
Team Udayavani, Apr 16, 2018, 6:30 AM IST
ಬೆಂಗಳೂರು: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಬಗ್ಗೆ ಕೀಳುಮಟ್ಟದ ಪದ ಬಳಕೆಗೆ ರಾಜ್ಯ ವ್ಯಾಪಿ ತೀವ್ರ ಆಕ್ರೋಶ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿದ್ದರಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವಿಷಾದ ವ್ಯಕ್ತಪಡಿಸಿದ್ದಾರೆ.
ತಮ್ಮ ಹೇಳಿಕೆ ಕುರಿತು ಟ್ವೀಟ್ ಮಾಡಿ ಮಾಧ್ಯಮಗಳಿಗೆ ಪತ್ರಿಕ್ರಿಯೆಯನ್ನೂ ನೀಡಿರುವ ಅವರು,ಉತ್ತರ ಪ್ರದೇಶದಲ್ಲಿ ಮಹಿಳೆ
ಮೇಲೆ ಅತ್ಯಾಚಾರವಾಗಿದ್ದರೂ, ಯೋಗಿ ಆದಿತ್ಯನಾಥ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.
ತಾವು ಭಾವೋದ್ವೇಗದಲ್ಲಿ ಆ ರೀತಿಯ ಹೇಳಿಕೆ ನೀಡಿದ್ದು, ಅದಕ್ಕಾಗಿ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದರು.ಆದರೆ, ಉತ್ತರ ಪ್ರದೇಶ ಸಿಎಂ ಆದಿತ್ಯನಾಥ ಸ್ವಾಮೀಜಿ ಅಲ್ಲ. ಅವರು ರಾಜಕಾರಣಿ, ಅವರನ್ನು ನಮ್ಮ ರಾಜ್ಯದ ಸ್ವಾಮೀಜಿಗಳಿಗೆ ಹೋಲಿಕೆ ಮಾಡಿ ನಮ್ಮ ಸ್ವಾಮೀಜಿಗಳ ಗೌರವ ಕಡಿಮೆ ಮಾಡಬೇಡಿ ಎಂದು ಹೇಳಿದ್ದಾರೆ.
ಅತ್ಯಾಚಾರ ನಡೆಸಿದವರ ಬಗ್ಗೆ ಹಾಗೂ ಯೋಗಿ ಆದಿತ್ಯನಾಥ್ ಸರ್ಕಾರದ ಬಗ್ಗೆ ರಾಜ್ಯ ಬಿಜೆಪಿಯವರ ನಿಲುವು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು.
ಇದೇ ವೇಳೆ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಅವರು, ಅವರಂತಹ ಕೀಳುಮಟ್ಟದ ರಾಜಕಾರಣಿ ಬೇರೊಬ್ಬರಿಲ್ಲ. ಅವರ ಬಗ್ಗೆ ಮಾತನಾಡುವುದಿಲ್ಲ ಎಂದರು.