ಆ.16 ರಿಂದ ಪ್ರತಿ ಮನೆ ಬಾಗಿಲಿಗೇ ವೈದ್ಯರು: ಸಚಿವ ಆರ್.ಅಶೋಕ್
Team Udayavani, Aug 10, 2021, 3:18 PM IST
ಬೆಂಗಳೂರು: ಕೋವಿಡ್ ಮೂರನೇ ಅಲೆ ಸಾಧ್ಯತೆ ಮುನ್ಸೂಚನೆ ಅರಿಯುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಸರ್ಕಾರ, ಕೋವಿಡ್ ಸೋಂಕು ಮೂಲದಲ್ಲೇ ನಿಯಂತ್ರಿಸಲು ಮುಂದಾಗಿದೆ. ಇದಕ್ಕಾಗಿ ಪಾಲಿಕೆ ವ್ಯಾಪ್ತಿಯ ಪ್ರತಿಯೊಂದು ಮನೆಗೂ ವೈದ್ಯರ ತಂಡವನ್ನು ಕಳುಹಿಸಿ ಆರೋಗ್ಯ ತಪಾಸಣೆ ನಡೆಸುವ “ಮನೆ ಬಾಗಿಲಿಗೆ ಪಾಲಿಕೆ ವೈದ್ಯರು’ ಎಂಬ ವಿನೂತನ ಯೋಜನೆಯನ್ನು ಜಾರಿಗೊಳಿಸುತ್ತಿದೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳ ಜತೆಗೆ ಸಭೆ ನಡೆಸಿ ಹಲವು ಯೋಜನೆಗಳನ್ನು ಜಾರಿಗೆ ತರಲು ಸೂಚಿಸಿದರು. ಆ.15ರ ಬಳಿಕ ನಗರದಲ್ಲಿ ಹಲವು ಕಠಿಣ ಕ್ರಮಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಿದರು. ಅಲ್ಲದೆ, ಮನೆ ಬಾಗಿಲಿಗೆ ವೈದ್ಯರು ಯೊಜನೆ ಬಗ್ಗೆ ಮಾಹಿತಿ ನೀಡಿದರು.
ಸಭೆ ಬಳಿಕ ಮಾತನಾಡಿದ ಸಚಿವ ಆರ್. ಅಶೋಕ್, ಪಾಲಿಕೆ ವ್ಯಾಪ್ತಿಯಲ್ಲಿ ಹೊಸದಾಗಿ ನಗರದ ಪ್ರತಿ ಮನೆಗೂ ಭೇಟಿ ನೀಡಲು
ವೈದ್ಯಾಧಿಕಾರಿಗಳ 108 ತಂಡ ಹಾಗೂ ವಾಹನಗಳನ್ನು ಬಿಡುಗಡೆ ಮಾಡಲಿದ್ದೇವೆ. ಆ.16ರಿಂದ ವೈದ್ಯರ ತಂಡ ಕೆಲಸ ಆರಂಭಿಸಲಿದೆ. “ಮನೆ
ಬಾಗಿಲಿಗೆ ಪಾಲಿಕೆ (ಕಾರ್ಪೊರೇಷನ್) ವೈದ್ಯರು’ಎಂಬ ಯೋಜನೆಯಡಿ ಪ್ರತಿ ಮನೆಗೂ ಹೋಗಿ ಮನೆಯ ಎಲ್ಲ ಸದಸ್ಯರ ಆರೋಗ್ಯ ಪರಿಸ್ಥಿತಿಯ ಬಗ್ಗೆ ಪರೀಕ್ಷೆ ಮಾಡಲಿದ್ದಾರೆ. ಲಸಿಕೆ ಮಾಹಿತಿಯನ್ನು ಪಡೆದು ಎಲ್ಲವನ್ನು ತಂತ್ರಾಂಶದಲ್ಲಿ ಅಪ್ಲೋಡ್ ಮಾಡುವ ಕೆಲಸ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ವಾರ್ಡ್ಗೆ ಒಬ್ಬರಂತೆ 198 ವೈದ್ಯರು: ಪಾಲಿಕೆ ವ್ಯಾಪ್ತಿಯ ಬೊಮ್ಮನಹಳ್ಳಿ, ಮಹದೇವಪುರ ಹಾಗೂ ಯಲಹಂಕ ವಲಯ ವ್ಯಾಪ್ತಿಯಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳಿದ್ದು, ಉಳಿದೆಡೆ ಕಡಿಮೆ ಪ್ರಮಾಣದಲ್ಲಿದೆ. ಕೋವಿಡ್ ಸೋಂಕು ದೃಢವಾಗಿದೆ ಎಂಬ ಮಾಹಿತಿ ತಿಳಿದ ಆರು ಗಂಟೆಯೊಳಗೆ ವೈದ್ಯರ ತಂಡ ಸ್ಥಳಕ್ಕೆ ಭೇಟಿ ನೀಡಲಿದೆ. ಕೋವಿಡ್ ಪಾಸಿಟಿವ್ ಇದ್ದರೂ, ಇಲ್ಲದಿದ್ದರೂ, ವೈದ್ಯರ ತಂಡ ಮನೆ ಬಾಗಿಲಿಗೆ ಭೇಟಿ
ನೀಡಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಎರಡು ವಾರ್ಡ್ಗಳಲ್ಲಿ ಪ್ರತಿ ಮನೆಗೂ ಪೈಲೆಟ್ ಯೋಜನೆ ಜಾರಿಯಾಗಲಿದೆ.
ಇದರಿಂದ ನಗರದ ಜನರ ಪೂರ್ಣ ಚಿತ್ರಣ ಸಿಗಲಿದೆ. ರೋಗಿಗಳ ರಕ್ಷಣೆ, ರೋಗ ಬಾರದಂತೆ ತಡೆಗಟ್ಟಲು, ಜನರಲ್ಲಿ ಆತ್ಮ ಸ್ಥೈರ್ಯ ತುಂಬಲು “ಮನೆಬಾಗಿಲಿಗೆವೈದ್ಯರು’ಯೋಜನೆರೂಪಿಸಲಾಗಿದೆ.ಸರ್ಕಾರದ ನಿರ್ದೇಶನದಂತೆ ವಾರ್ಡ್ಗೆ ಒಬ್ಬರಂತೆ, 198 ವೈದ್ಯರನ್ನು 60 ಸಾವಿರ ರೂ. ಸಂಬಳ ನೀಡಿ ಗುತ್ತಿಗೆಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಕೋವಿಡ್ಗಾಗಿ ವೈದ್ಯರು ಮೀಸಲು: ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲೂ ಇಬ್ಬರು ವೈದ್ಯರು ಇರಲಿದ್ದಾರೆ. ಕೋವಿಡ್ ಸೋಂಕಿತರಿಗೆ ಕೊಟ್ಟ ಮೆಡಿಕಲ್ ಕಿಟ್ ನಿಂದ ಏನಾದರೂ ಅಡ್ಡ ಪರಿಣಾಮಗಳಾದರೆ, ಬೇರೆ (ಔಷಧಿ)ಮೆಡಿಸಿನ್ ಸಲಹೆ ನೀಡಲು ಪ್ರತಿ ಕ್ಷೇತ್ರದಲ್ಲಿ ಇಬ್ಬರು ಹೆಚ್ಚುವರಿ ವೈದ್ಯರು ಕೋವಿಡ್ಗಾಗಿಯೇ ಮೀಸಲಾಗಿ ಇರಲಿದ್ದಾರೆ. ವೈದ್ಯರ ಹೆಸರು, ಮೊಬೈಲ್ ಸಂಖ್ಯೆಯನ್ನು ಕಿಟ್ನಲ್ಲಿಯೇ ನಮೂದಿಸಿ ಇಡಲಾ
ಗುತ್ತದೆ. ಸೋಂಕಿರುವವರು ಏನಾದರು ಸಮಸ್ಯೆಯಾದರೆ, ಆ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿ ಕೊಳ್ಳಬಹುದು ಎಂದು ತಿಳಿಸಿದರು.
ಬಿಬಿಎಂಪಿ ಮುಖ್ಯ ಆಯುಕ್ತರು ಗೌರವ್ ಗುಪ್ತ, ವಿಶೇಷ ಆಯುಕ್ತರಾದಡಿ. ರಂದೀಪ್,ದಯಾನಂದ್, ತುಳಸಿಮದ್ದಿನೇನಿ, ರೆಡ್ಡಿ ಶಂಕರ ಬಾಬು,ಬಸವರಾಜು, ರವೀಂದ್ರ, ಮನೋಜ್ ಜೈನ್ ಇತರರು ಇದ್ದರು.
ಇದನ್ನೂ ಓದಿ:ಈಶ್ವರಪ್ಪನಿಗೆ ಸಂಸ್ಕಾರ, ಸಂಸ್ಕೃತಿ ಏನೆಂಬುದು ಗೊತ್ತಿಲ್ಲ : ಸಿದ್ದರಾಮಯ್ಯ ಕಿಡಿ
ದೇವಸ್ಥಾನಗಳಿಗೂ ನಿರ್ಬಂಧ
ಆಗಸ್ಟ್ ತಿಂಗಳಲ್ಲಿ ಸಾಲು ಸಾಲು ಹಬ್ಬಗಳು ಬರಲಿವೆ. ದೇವಸ್ಥಾನಗಳಿಗೆ ಹೆಚ್ಚು ಜನ ಬರುವ ಸಾಧ್ಯತೆ ಇದೆ. ಹೀಗಾಗಿ, ದೇವಸ್ಥಾನಗಳಿಗೆ
ನಿರ್ಬಂಧ ಮಾಡುವ ಬಗ್ಗೆ ಹೆಚ್ಚಿನ ಗಮನಕೊಡಲಾಗುವುದು.ನಿರಂತರ ಹಬ್ಬ ಬರುವುದರಿಂದ ಮುಂಜಾಗ್ರತ ಕ್ರಮಕೈಗೊಳ್ಳ ಬೇಕಿದೆ. ಈ ತಿಂಗಳು ಪೂರ್ತಿ ನಿಯಮ ತರುವ ಬಗ್ಗೆ ಆಡಳಿತ ಮಂಡಳಿಯ ಬಗ್ಗೆ ಚರ್ಚೆ ಮಾಡಲಾ ಗುವುದು. ಮಾರುಕಟ್ಟೆ ಪ್ರದೇಶದಲ್ಲಿಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸುವ ಬಗ್ಗೆ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತಕ್ರಮ ಕೈಗೊಳ್ಳಲಾ ಗುವುದು ಎಂದು ತಿಳಿಸಿದರು
ಈಜುಕೊಳ,ಜಿಮ್ ಬಂದ್
ಪಾಲಿಕೆ ವ್ಯಾಪ್ತಿಯಲ್ಲಿರುವ ಅಪಾರ್ಟ್ಮೆಂಟ್ಸ್ ಗಳಲ್ಲಿ ಹೆಚ್ಚು ಕೋವಿಡ್ ಪ್ರಕಣಗಳು ಕಂಡುಬರುತ್ತಿದೆ. ಎಲ್ಲಿ ಮೂರು ಕೋವಿಡ್ ಪ್ರಕರಣಗಳು ಕಂಡು ಬರುತ್ತವೆಯೋ ಅಲ್ಲಿ ಕಂಟೈನ್ಮೆಂಟ್ ವಲಯವನ್ನಾಗಿ ಮಾಡಲಾಗುತ್ತಿದೆ. ಅಲ್ಲದೆ, ಅಪಾರ್ಟ್ಮೆಂಟ್ಸ್ ನಲ್ಲಿರುವ ಎಲ್ಲರಿಗೂ ಕೋವಿಡ್
ಪರೀಕ್ಷೆ ಮಾಡಲಾಗುತ್ತಿದೆ. ಈಜುಕೊಳ, ಉದ್ಯಾನ,ಜಿಮ್ಗಳಿಗೆ ನಿರ್ಬಂಧವಿದ್ದು, ಅದನ್ನು ಸರಿಯಾಗಿ ಪಾಲಿಸಲು ಹಾಗೂ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಲಾಗುತ್ತದೆ ಎಂದು ಹೇಳಿದರು.
ಪಾಸಿಟಿವಿಟಿ ರೇಟ್ ಶೇ.0.64ಕ್ಕೆ
ನಗರದಲ್ಲಿ ಕಳೆದ 40 ದಿನಗಳಲ್ಲಿ 400 ಪ್ರಕರಣ ಕಂಡು ಬರುತ್ತಿದೆ.ಸೋಂಕು ಪಾಸಿಟಿವಿಟಿ ರೇಟ್ ಶೇ.0.9 ರಿಂದ ಶೇ.064ಕ್ಕೆ ಇಳಿಕೆಯಾಗಿದೆ. ಬೊಮ್ಮನಹಳ್ಳಿ,ಯಲಹಂಕ,ಮಹದೇವಪುರದಲ್ಲಿ ಹೆಚ್ಚು ಪ್ರಕರಣಗಳು ಕಂಡು ಬರುತ್ತಿವೆ.159 ಕ್ಲಸ್ಟರ್ ಗಳನ್ನು ಗುರುತಿಸಲಾಗಿದೆ. ಕೋವಿಡ್ ಸೋಂಕು ದೃಢಪಟ್ಟವರಿಗೆ ಟ್ರಯಾಜಿಂಗ್ ಮಾಡುವ ವ್ಯವಸ್ಥೆಯಿದೆ. ಸರ್ಕಾರಿ ಆಸ್ಪತ್ರೆಯಲ್ಲಿ 189 ಕೋವಿಡ್ ಸೋಂಕಿತರು ಇದ್ದು ಖಾಸಗಿ ಆಸ್ಪತ್ರೆಯಲ್ಲಿ 462 ರಷ್ಟಿದ್ದಾರೆ.89 ಮಂದಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಲಸಿಕೆ ವಿವರ ಬಿಬಿಎಂಪಿ:
1ನೇ ಡೋಸ್ 60,54,264 (67%)
2ನೇ ಡೋಸ್ 17,07,678 (19%)
ಬೆಂಗಳೂರು ನಗರ ಜಿಲ್ಲೆ :
1ನೇ ಡೋಸ್ 9,78,671 (92%)
2ನೇ ಡೋಸ್ 2,13,976 (22%)