ಆಪರೇಷನ್ ಕಮಲ ಮಾಡಲ್ಲ: ಬಿಎಸ್ವೈ
Team Udayavani, Dec 28, 2018, 6:00 AM IST
ವಿಜಯಪುರ: ಶಾಸಕ ಉಮೇಶ ಕತ್ತಿ ಅವರು ರಾಜ್ಯ ಸರ್ಕಾರ ಪತನದ ಕುರಿತು ನೀಡಿರುವ ಹೇಳಿಕೆ ಸರಿಯಲ್ಲ. ನಾನಾಗಲಿ, ನಮ್ಮ ಪಕ್ಷದ ಯಾವ ನಾಯಕರೂ “ಆಪರೇಷನ್ ಕಮಲ’ ಕುರಿತು ಮಾತನಾಡಿಲ್ಲ ಎಂದು ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಗಂತ ನಾವೇನೂ ಸನ್ಯಾಸಿಗಳಲ್ಲ. ಕಾಂಗ್ರೆಸ್-ಜೆಡಿಎಸ್ ಪತನವಾದರೆ ಆಗ ನಮ್ಮ ಪಕ್ಷ ಮುಂದಿನ ನಡೆ ಇರಿಸಲಿದೆ. ಯಾವುದೇ ಕಾರಣಕ್ಕೂ ಅನ್ಯ ಪಕ್ಷಗಳ ಶಾಸಕರನ್ನು ಪಕ್ಷದತ್ತ ಸೆಳೆಯಲು ಪ್ರಯತ್ನ ಮಾಡುವುದಿಲ್ಲ. ಅವರಾಗೇ ಬಂದರೆ ಸುಮ್ಮನೇ ಇರುವುದಿಲ್ಲ. ಆದರೆ, ಮೈತ್ರಿ ಪಕ್ಷಗಳ ಯಾವ ಶಾಸಕರೂ ನಮ್ಮ ಸಂಪರ್ಕದಲ್ಲಿ ಇಲ್ಲ ಎಂದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ತಲ್ಲೀನವಾಗಿದ್ದೇವೆ. ಸ್ಥಳೀಯ ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಕೇಂದ್ರಕ್ಕೆ ರವಾನಿಸುತ್ತೇವೆ. ಕೇಂದ್ರ ಸಚಿವರಾಗಿ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಉತ್ತಮ ಕೆಲಸ ಮಾಡಿದ್ದಾರೆ. ಜಿಗಜಿಣಗಿ ಹಾಗೂ ನನ್ನ ಮಧ್ಯೆ ಯಾವ ಭಿನ್ನಾಭಿಪ್ರಾಯವೂ ಇಲ್ಲ ಎಂದರು.
ಮೇಕೆದಾಟು ಯೋಜನೆ ಕುರಿತು ಅಮಿತ್ ಶಾ ಬಗ್ಗೆ ನಿತಿನ್ ಗಡ್ಕರಿ ನೀಡಿರುವ ಹೇಳಿಕೆ ಅವರ ವೈಯಕ್ತಿಕ ಹೇಳಿಕೆ ಆಗಿರುವ ಕಾರಣ ಈ ಬಗ್ಗೆ ಏನೂ ಹೇಳಲಾರೆ. ಮೇಕೆದಾಟು ಯೋಜನೆ ಅನುಷ್ಠಾನ ಅತ್ಯಂತ ಅಗತ್ಯ. ಈ ಕುರಿತು ಸರ್ಕಾರಕ್ಕೆ ಎಲ್ಲ ಸಹಕಾರ ನೀಡಲಾಗುವುದು.
– ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ.