ಹಜ್ ಯಾತ್ರಿಗಳಿಗೆ ಬೀಳ್ಕೊಡುಗೆ
Team Udayavani, Jul 18, 2019, 3:03 AM IST
ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳ ಮಸೀದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೇಶ್ಇಮಾಮ್ ಹಾಗೂ ಮೌಜನ್ಗಳು ಸೇರಿ ಹಜ್ ಯಾತ್ರೆಗೆ ಹೊರಟ 153 ಮಂದಿಯನ್ನು ಬುಧವಾರ ಬೀಳ್ಕೊಡಲಾಯಿತು.
ಹಜ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನದೀಮ್ ಜಾವಿದ್, ಹಜ್ ಯಾತ್ರಾರ್ಥಿಗಳನ್ನು ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಸೀದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೇಶ್ಇಮಾಮ್ ಹಾಗೂ ಮೌಜನ್ಗಳ ಸಂಭಾವನೆ ಕಡಿಮೆ ಇರುವುದರಿಂದ ಅವರಿಗೆ ಹಜ್ ಯಾತ್ರೆ ಕೈಗೊಳ್ಳುವ ಆರ್ಥಿಕ ಶಕ್ತಿ ಇರುವುದಿಲ್ಲ.
ಆದ್ದರಿಂದ ಸಚಿವರ ಜಮೀರ್ ಅಹ್ಮದ್ ಖಾನ್ ಅವರು ಪ್ರತಿ ವರ್ಷ ತಮ್ಮ ಸ್ವಂತ ಖರ್ಚಿನಲ್ಲಿ ರಾಜ್ಯಾದ್ಯಂತ ಆಯ್ದ ಪೇಶ್ಇಮಾಮಮ್ ಹಾಗೂ ಮೌಜನ್ಗಳನ್ನು ಹಜ್ ಯಾತ್ರೆಗೆ ಕಳಿಸುತ್ತಿದ್ದಾರೆ ಎಂದು ಹೇಳಿದರು.
ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ಸಚಿವರು ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಈ ವರ್ಷ153 ಮಂದಿಯನ್ನು ಹಜ್ ಯಾತ್ರೆಗೆ ಕಳುಹಿಸಿಕೊಡುತ್ತಿದ್ದಾರೆ ಎಂದು ತಿಳಿಸಿದರು. ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಜೆಡ್.ಜಮೀರ್ ಅಹಮದ್ ಖಾನ್, ಉತ್ತರ ಪ್ರದೇಶ ಕಾಂಗ್ರೆಸ್ ಮುಖಂಡರಾದ ಅಲ್ಲು ಮಿಯಾಮ್, ರಫೀಕ್ ವಾರ್ಸಿ ಸೇರಿದಂತೆ ಧಾರ್ಮಿಕ ಗುರುಗಳು ಉಪಸ್ಥಿತರಿದ್ದರು.