ಶ್ರಮಜೀವಿ ಅಪ್ಪನ “ಆಶಾ’ಕಿರಣ
Team Udayavani, Apr 23, 2019, 4:42 AM IST
ಬೆಂಗಳೂರು: ನಿತ್ಯ ಹೊರುವ ಸಿಮೆಂಟ್ ಮೂಟೆಗಳ ಮೇಲೆ ಅಪ್ಪನ ಕೂಲಿ ಅವಲಂಬಿಸಿದೆ. ಆ ಕೂಲಿಯಿಂದಲೇ ಮನೆ ನಡೆಯುತ್ತದೆ. ಹೀಗೆ ಸಿಮೆಂಟ್ ಮೂಟೆಗಳನ್ನು ಹೊರುವ ಅಪ್ಪನಿಗೆ ಸೋಮವಾರ ಮಗಳು ಚಿನ್ನದ ಪದಕಗಳನ್ನು ಹೊತ್ತೂಯ್ದು ಕೊಟ್ಟಳು!
ಆ “ಚಿನ್ನದ ಹುಡುಗಿ’ ಹಾಸನದ ಕಲ್ಲಹಳ್ಳಿ ಗ್ರಾಮದ ಕೆ.ಎನ್. ಆಶಾ. ಸೋಮವಾರ ನಡೆದ ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಎಂಎ ಕನ್ನಡದಲ್ಲಿ ಆಶಾ ಎರಡನೇ ಅತಿ ಹೆಚ್ಚು ಅಂದರೆ ಆರು ಚಿನ್ನದ ಪದಕಗಳನ್ನು ಕೊಳ್ಳೆಹೊಡೆದಳು. ಈ ಮೂಲಕ ಉಪ ರಾಷ್ಟ್ರಪತಿಗಳೂ ಸೇರಿದಂತೆ ನೆರೆದವರೆಲ್ಲರ ಮೆಚ್ಚುಗೆಗೆ ಪಾತ್ರಳಾದಳು.
ಆಶಾ ಅತ್ಯಂತ ಬಡತನದ ಹಿನ್ನೆಲೆಯಿಂದ ಬಂದವಳು. ತಾನು ಸೇರಿದಂತೆ ಏಳು ಜನ ಮಕ್ಕಳು. ಅದರಲ್ಲಿ ಆರು ಹೆಣ್ಣುಮಕ್ಕಳು. ಕೇವಲ ಅರ್ಧ ಎಕರೆ ಜಮೀನು ಇದೆ. ಅದರಲ್ಲಿ ಇಡೀ ಕುಟುಂಬ ನಿರ್ವಹಣೆ ಅಸಾಧ್ಯ. ಆದ್ದರಿಂದ ತಂದೆಯ ದಿನಗೂಲಿಯೇ ಆಧಾರ. ಆ ಕುಟುಂಬಕ್ಕೆ ಚಿನ್ನದ ಪದಕಗಳನ್ನು ಹೊತ್ತೂಯ್ದ ಹುಡುಗಿ ಈಗ “ಆಶಾ ಕಿರಣ’. ಘಟಿಕೋತ್ಸವದ ನಂತರ ಚಿನ್ನದ ಹುಡುಗಿ “ಉದಯವಾಣಿ’ಯೊಂದಿಗೆ ತನ್ನ ಸಾಧನೆ ಹಾದಿಯನ್ನು ಹಂಚಿಕೊಂಡಿದ್ದು ಹೀಗೆ…
“ತಂದೆ ಹಾಸನದಲ್ಲಿಯೇ ನಿತ್ಯ 300-400 ಸಿಮೆಂಟ್ ಮೂಟೆಗಳನ್ನು ಹೊತ್ತು ನಮ್ಮನ್ನು ಕಲಿಸಿದ್ದಾರೆ. ನಾವು ಆರು ಜನ ಇದ್ದುದರಿಂದ ಪಿಯುಸಿ ಮುಗಿಸಿದ ನಂತರ ಶಿಕ್ಷಣ ವೆಚ್ಚ ಭರಿಸಲಿಕ್ಕೂ ದುಡ್ಡು ಇರಲಿಲ್ಲ. ಈ ಮಧ್ಯೆ ತಮ್ಮ ಡಿಪ್ಲೊಮಾ ಓದುತ್ತಿದ್ದ.
ಹಾಗಾಗಿ, ಅಂಚೆ ತೆರಪು (ಕರಸ್ಪಾಂಡನ್ಸ್) ಶಿಕ್ಷಣದಲ್ಲಿ ಪದವಿ ಪೂರೈಸಿದೆ. ಈ ಮಧ್ಯೆ ಒಂದು ವರ್ಷ ಹಾಸನದಲ್ಲೇ ಗಾರ್ಮೆಂಟ್ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗುತ್ತಿದ್ದೆ. ಮಾಸಿಕ ಎರಡು ಸಾವಿರ ರೂ. ಸಿಗುತ್ತಿತ್ತು. ಅದರಲ್ಲಿ ಹಣ ಕೂಡಿಟ್ಟು, ಎಂಎಗೆ ಹಚ್ಚಿದೆ. ಕಷ್ಟಪಟ್ಟು ಓದಿದ್ದರ ಫಲವೇ ಈ ಚಿನ್ನದ ಪದಕಗಳು’ ಎಂದು ಹೇಳಿದರು.
“ಈ ಸಾಧನೆ ಅಪ್ಪನಿಗೆ ಸಹಜವಾಗಿಯೇ ಖುಷಿ ತಂದಿದೆ. ನಾನು ಯಾವುದಾದರೂ ಸರ್ಕಾರಿ ಕೆಲಸಕ್ಕೆ ಸೇರಬೇಕು ಎಂಬುದು ಅಪ್ಪನ ಆಸೆ. ನಾನು ಕೆಎಎಸ್ ಮಾಡಬೇಕು ಅಂದುಕೊಂಡಿದ್ದೇನೆ’ ಎಂದ ಅವರು, “ಯಾವುದೇ ಸ್ಕಾಲರ್ಶಿಪ್ ಇರಲಿಲ್ಲ. ಹಾಸ್ಟೆಲ್ನಲ್ಲಿ ಇದ್ದಾಗ ಮಾಸಿಕ “ಪಾಕೆಟ್ ಮನಿ’ ಅಂತ 750 ರೂ. ಬರುತ್ತಿತ್ತು. ಅದರಲ್ಲಿಯೇ ನನ್ನ ಖರ್ಚು-ವೆಚ್ಚ ನೀಗುತ್ತಿತ್ತು’ ಎಂದು ಹೇಳಿದರು.
ಕೋಲಾರದ ಚಿನ್ನ!: ಅದೇ ರೀತಿ, ಕೆ.ಎಂ. ಶ್ರೀಗುರು ರಾಘವೇಂದ್ರ ಕೋಲಾರದ “ಚಿನ್ನದ ಹುಡುಗ’. ಕೆಲವೇ ವರ್ಷಗಳ ಹಿಂದಿನ ಮಾತು, ಎಸ್ಸೆಸ್ಸೆಲ್ಸಿಯಲ್ಲಿ ಕೇವಲ ಶೇ. 47 ಅಂಕ ಪಡೆದು ಎಲ್ಲರ ಅಪಹಾಸ್ಯಕ್ಕೆ ಒಳಗಾಗಿದ್ದರು. ಸ್ನೇಹಿತರೆಲ್ಲಾ ಗೇಲಿ ಮಾಡುತ್ತಿದ್ದರು. ಇದರಿಂದ ಹಠಕ್ಕೆ ಬಿದ್ದು ಓದಿದ ರಾಘವೇಂದ್ರ, ಪಿಯುಸಿಯಲ್ಲಿ ಶೇ. 85 ಅಂಕ ಗಳಿಸಿದರು.
ಪದವಿಯಲ್ಲಿ ರಾಜ್ಯಕ್ಕೆ ಮೊದಲ 25ನೇ ರ್ಯಾಂಕ್ನಲ್ಲಿ ಒಬ್ಬರಾದರು. ಈಗ ಎಂಎ ಅರ್ಥಶಾಸ್ತ್ರದಲ್ಲಿ ಐದು ಚಿನ್ನದ ಪದಕಗಳನ್ನು ಗಳಿಸಿ ಗಮನಸೆಳೆದರು. ಇವರು ಕೂಡ ಕೃಷಿ ಹಿನ್ನೆಲೆಯಿಂದ ಬಂದವರು. ಏಳು ಜನ ಮಕ್ಕಳಲ್ಲಿ ಕೊನೆಯವರು ರಾಘವೇಂದ್ರ. ಪಿಎಚ್ಡಿ ಮಾಡಿ, ಐಎಎಸ್ ಮಾಡುವ ಗುರಿ ಹೊಂದಿರುವುದಾಗಿ ತಿಳಿಸಿದರು.
ಎಸ್ಸೆಸ್ಸೆಲ್ಸಿಯಿಂದ್ಲೂ ಫಸ್ಟ್!: ರಾಯಚೂರು ಜಿಲ್ಲೆ ಸಿಂಧನೂರಿನ ಅನುಷಾ ಯರಮರಸ್, ಎಸ್ಸೆಸ್ಸೆಲ್ಸಿಯಿಂದಲೂ ಊರಿಗೇ ಫಸ್ಟ್. ಈಗ ಎಂಎಸ್ಸಿ ಭೌತಶಾಸ್ತ್ರದಲ್ಲಿ ಐದು ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದಾಳೆ. ಎಸ್ಸೆಸ್ಸೆಲ್ಸಿಯಿಂದಲೂ ನಾನು ಶಾಲೆ ಮತ್ತು ಊರಿಗೆ ಮೊದಲ ಸ್ಥಾನದಲ್ಲಿದ್ದೆ.
ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದರಿಂದ ಕಾಲೇಜು ವತಿಯಿಂದ ಚಿನ್ನದ ಪದಕ ನೀಡಿದ್ದರು. ನಂತರ ಬಿಎಸ್ಸಿಯಲ್ಲಿ ಶೇ.97 ಅಂಕ ಗಳಿಸುವ ಮೂಲಕ 3ನೇ ರ್ಯಾಂಕ್ ಬಂದಿತು. ಎಂಎಸ್ಸಿ ಭೌತಶಾಸ್ತ್ರದಲ್ಲಿ ಐದು ಚಿನ್ನದ ಪದಕಗಳು ಬಂದಿವೆ. ಎಂಎಸ್ಸಿ ಆಗಿದ್ದರೂ ನಾಗರಿಕ ಸೇವೆ ಮಾಡಬೇಕು ಎಂಬುದು ನನ್ನ ಆಸೆ. ಆದ್ದರಿಂದ ಐಎಎಸ್ ಮಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ