ಈಶ್ವರಪ್ಪ ಆಪ್ತ ಸಹಾಯಕನ ಮೇಲೆ ಹಲ್ಲೆ ನಡೆಸಿದ್ದವರ ಸೆರೆ
Team Udayavani, Jun 10, 2017, 12:40 PM IST
ಬೆಂಗಳೂರು: ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರ ಆಪ್ತ ಸಹಾಯಕ ಎಸ್.ವಿನಯ್ರನ್ನು ಅಪಹರಿಸಿ, ಹಲ್ಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಮಹಾಲಕ್ಷಿಲೇಔಟ್ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಅಭಿಷೇಕ್, ಸೆಲ್ವಂ, ಕಿಶೋರ್, ಅಯ್ಯಪ್ಪ ಬಂಧಿತರು. ಪ್ರಶಾಂತ ಎಂಬ ಮತ್ತೂಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ.
ಅಪರಿಚಿತ ವ್ಯಕ್ತಿಯೊಬ್ಬ ಕೊಟ್ಟ ಸೂಚನೆ ಮೇರೆಗೆ ಆರೋಪಿಗಳು ವಿನಯ್ ಅಪಹರಣಕ್ಕೆ ಯತ್ನಿಸಿದ್ದರು ಎನ್ನಲಾಗಿದೆ. ಕೃತ್ಯವೆಸಗಲು ಸ್ಪಷ್ಟ ಕಾರಣವೇನೆಂದು ಇದುವರೆಗೂ ತಿಳಿದು ಬಂದಿಲ್ಲ. ಆದರೆ, ವಿನಯ್ ಬಳಿ ಕೆಲ ಗುತ್ತಿಗೆ ದಾಖಲಾತಿಗಳಿದ್ದು, ಇವುಗಳನ್ನು ಕಸಿದುಕೊಳ್ಳುವ ಸಲುವಾಗಿ ಅಪಹರಣಕ್ಕೆ ಯತ್ನಿಸಿದ್ದರು ಎನ್ನಲಾಗಿದೆ. ಪ್ರಮುಖ ಆರೋಪಿ ಸಿಕ್ಕ ಬಳಿಕ ಘಟನೆಗೆ ಪ್ರಮುಖ ಕಾರಣ ತಿಳಿಯಲಿದೆ.
ಹೆಚ್ಚಿನ ವಿಚಾರಣೆಗಾಗಿ ನಾಲ್ವರನ್ನು ಜೂ.12 ರವರೆಗೆ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರ ಪೈಕಿ ಕಿಶೋರ್ ಮತ್ತು ಅಯ್ಯಪ್ಪ ಎಲೆಕ್ಟ್ರಾನಿಕ್ ಸಿಟಿ ಠಾಣೆಯ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದು, ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇನ್ನಿಬ್ಬರು ಆರೋಪಿಗಳು ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.