ಜೆ.ಪಿ.ನಗರ ಮನೆಯೇ ಸಿಎಂ ಅಧಿಕೃತ ನಿವಾಸ
Team Udayavani, May 21, 2018, 7:30 AM IST
ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮುಖ್ಯಮಂತ್ರಿಗಳ ಅಧಿಕೃತ ನಿವಾಸವನ್ನು ಅನುಗ್ರಹ ಅಥವಾ ಕಾವೇರಿಗೆ ಸ್ಥಳಾಂತರಿಸದೆ ಜೆ.ಪಿ.ನಗರದ ತಮ್ಮ ನಿವಾಸದಲ್ಲೇ ಮುಂದುವರಿಸಲು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಂದುವರಿಯುತ್ತೇನೆ. ಆದರೆ, ಅಧಿಕೃತ ನಿವಾಸ ಅನುಗ್ರಹ ಅಥವಾ ಕಾವೇರಿಗೆ ಬರುವುದಿಲ್ಲ. ಜೆ.ಪಿ.ನಗರದಲ್ಲಿರುವ ತಮ್ಮ ಮನೆಯನ್ನೇ ಅಧಿಕೃತ ನಿವಾಸವಾಗಿ ಮಾಡಿಕೊಳ್ಳುತ್ತೇನೆಂದು ಕುಮಾರಸ್ವಾಮಿ ಅವರು ಭಾನುವಾರ ತಮ್ಮನ್ನು ಭೇಟಿಯಾದ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಮತ್ತು ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ರಾಜು ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಜೆ.ಪಿ.ನಗರದ ತಮ್ಮ ನಿವಾಸವನ್ನು ಇತ್ತೀಚೆಗೆ ನವೀಕರಿಸಿದ್ದ ಕುಮಾರಸ್ವಾಮಿ ಅವರು ವಾಸ್ತು ಪ್ರಕಾರ ಅದನ್ನು ಸಿದಟಛಿಪಡಿಸಿದ್ದರು. ಮೇಲಾಗಿ ಅನುಗ್ರಹ ಮತ್ತು ಕಾವೇರಿ ನಿವಾಸಗಳ ವಾಸ್ತು ಬಗ್ಗೆ ಹಲವು ಮಾತುಗಳಿವೆ. ಈ ಕಾರಣಕ್ಕಾಗಿ ಕುಮಾರಸ್ವಾಮಿ ಆ ಎರಡೂ ಮನೆಗಳನ್ನು ಬಿಟ್ಟು ಜೆ.ಪಿ.ನಗರದ ತಮ್ಮ ನಿವಾಸದಲ್ಲೇ
ಮುಂದುವರಿಯಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕುಮಾರಸ್ವಾಮಿ ಭೇಟಿ ಮಾಡಿದ ಸಿಎಸ್ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು
ಭಾನುವಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎಸ್.ರಾಜು ಭೇಟಿ ಮಾಡಿ ಚರ್ಚಿಸಿದರು. ಕುಮಾರಸ್ವಾಮಿ ಅವರ ಜೆ.ಪಿ.ನಗರ ನಿವಾಸಕ್ಕೆ ತೆರಳಿದ ಇಬ್ಬರೂ ಅಧಿಕಾರಿಗಳು, ಬುಧವಾರದ ಪ್ರಮಾಣವಚನ ಸ್ವೀಕಾರ, ಅದಕ್ಕೆ ಬೇಕಾದ ಸಿದ್ಧತೆಗಳು, ಪ್ರಮಾಣ ವಚನ ಸ್ವೀಕರಿಸಿದ ನಂತರದ ನಡವಳಿಕೆಗಳ ಕುರಿತು ಸಮಾಲೋಚನೆ ಮಾಡಿದ್ದಾರೆ. ಅಲ್ಲದೆ, ಕಾನೂನು ಸುವ್ಯವಸ್ಥೆ ಬಗ್ಗೆಯೂ ಮಾಹಿತಿ ನೀಡಿದರು.