Kidnapping: ಕಂಪ್ಯೂಟರ್ ಡೀಲರ್ ಕಿಡ್ನಾಪ್: ಮೂವರ ಬಂಧನ
Team Udayavani, Sep 11, 2023, 1:48 PM IST
ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಲ್ಯಾಪ್ಟಾಪ್-ಕಂಪ್ಯೂಟರ್ ಡೀಲರೊ ಬ್ಬರನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇರಿಸಿದ್ದ ರೌಡಿಶೀಟರ್ ಸೇರಿ ಮೂವರನ್ನು ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಲ್ಲಸಂದ್ರದ ಹನುಮಗಿರಿನಗರದ ಕಿರಣ್ ಕುಮಾರ್(35), ಸಾರ್ವಭೌಮ ನಗರದ ಸೋಮಶೇಖರ್(36), ತ್ಯಾಗರಾ ಜನಗರದ ರೌಡಿ ಅರುಣ್ ಕುಮಾರ್ ಅಲಿಯಾಸ್ ಸುನಾಮಿ(32) ಬಂಧಿತರು.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಾರು, ದೊಣ್ಣೆ, ಮೊಬೈಲ್ ಜಪ್ತಿ ಮಾಡಲಾಗಿದೆ. ಮತ್ತೂಬ್ಬ ಆರೋಪಿ ಅನಿಲ್ ಕುಮಾರ್ ಎಂಬಾತ ತಲೆಮರೆಸಿಕೊಂಡಿದ್ದಾನೆ.
ಆರೋಪಿಗಳು ಇಟ್ಟುಮಡು ನಿವಾಸಿ ಲ್ಯಾಪ್ಟಾಪ್, ಕಂಪ್ಯೂಟರ್ ಡೀಲರ್ ಸಂದೀಪ್ ಕುಮಾರ್(32) ಎಂಬಾತ ನನ್ನು ಆ.30ರಂದು ಅಪಹರಿಸಿ ತಮಿಳು ನಾಡಿಗೆ ಕರೆದೊಯ್ದು 50 ಲಕ್ಷ ರೂ.ಗೆ ಬೇಡಿಕೆ ಇರಿಸಿದ್ದರು. ಆರೋಪಿಗಳಿಂದ ತಪ್ಪಿಸಿಕೊಂಡು ಬಂದ ಸಂದೀಪ್ ಪೊಲೀಸರಿಗೆ ದೂರು ನೀಡಿದ್ದರು.
ಆ.30ರಂದು ಮುಂಜಾನೆ ಸ್ನೇಹಿತ ಅನಿಲ್ ಕುಮಾರ್, ಸಂದೀಪ್ಗೆ ಕರೆ ಮಾಡಿ ಮನೆಗೆ ಹೊರಗೆ ಬರುವಂತೆ ಕರೆದಿದ್ದ. ಸಂದೀಪ್ ಮನೆಯಿಂದ ಹೊರಗೆ ಬರುತ್ತಿದ್ದಂತೆ ಬಂಧಿತ ಮೂವರು ಆರೋಪಿಗಳು ಟೀ ಕುಡಿ ಯೋಣ ಬಾ ಎಂದು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ಸಂದೀಪ್ನ ಮೊಬೈಲ್ ಕಸಿದುಕೊಂಡು ಸಿಮ್ ತೆಗೆದು ಹೊರಕ್ಕೆ ಎಸೆದು 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಸಂದೀಪ್ ಹಣ ಇಲ್ಲ ಎಂದಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕೈಗಳಿಂದ ಹಲ್ಲೆ ಮಾಡಿದ್ದಾರೆ.
ಬಳಿಕ ಆರೋಪಿಗಳು ತಮಿಳುನಾಡಿನ ಡೆಂಕಣಿಕೋಟೆ ಕಡೆಗೆ ಕರೆದೊಯ್ದು ಫಾರ್ಮ್ ಹೌಸ್ನಲ್ಲಿ ಕೂಡಿ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅಷ್ಟೊಂದು ಹಣ ಇಲ್ಲ ಎಂದಾಗ ದೊಣ್ಣೆಯಿಂದ ಸಂದೀಪ್ಗೆ ಹಲ್ಲೆ ಮಾಡಿದ್ದಾರೆ. ಹಣ ಕೊಡದಿದ್ದರೆ ಪ್ರಾಣ ತೆಗೆಯುವುದಾಗಿ ಬೆದರಿಕೆ ಹಾಕಿ ದ್ದಾರೆ. ಸಂಜೆ 4.30ಕ್ಕೆ ಫಾರ್ಮ್ ಹೌಸ್ನಿಂದ ಬೇರೆ ಕಡೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಆರೋಪಿ ಅರುಣ್ ಮತ್ತು ಕಿರಣ್ ಊಟಕ್ಕೆ ಹೋಗಿದ್ದರು.
ಕಾರಿನ ಮುಂದಿನ ಆಸನದಲ್ಲಿದ್ದ ಸೋಮಶೇಖರ್ ಮತ್ತು ಅನಿಲ್ ನಿದ್ದೆಗೆ ಜಾರಿದ್ದಾರೆ. ಈ ಸಮಯ ಬಳಸಿಕೊಂಡು ಸಂದೀಪ್ ಕಾರಿನಿಂದ ಕೆಳಗೆ ಇಳಿದು ತಪ್ಪಿಸಿಕೊಂಡು ತಮಿಳುನಾಡಿನ ಅಚ್ಚಿತಾ ಪೊಲೀಸ್ ಠಾಣೆಗೆ ತೆರಳಿ ಘಟನೆ ಬಗ್ಗೆ ವಿವರಿಸಿದ್ದಾರೆ. ಬಳಿಕ ತಾಯಿಗೆ ಫೋನ್ ಮಾಡಿ ವಿಷಯ ತಿಳಿಸಿ ಬೆಂಗಳೂರಿಗೆ ಬಂದು ದೂರು ನೀಡಿದ್ದರು. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಹಣಕಾಸು ವ್ಯವಹಾರ ಸಂಬಂಧ ಕೃತ್ಯ:
ದೂರುದಾರ ಸಂದೀಪ್ ಕುಮಾರ್, ಕಿರಣ್, ಅನಿಲ್ಕುಮಾರ್ ಪರಸ್ಪರ ಪರಿಚಿತರು. ಬಂಧಿತ ಮೂವರ ಪೈಕಿ ಅರುಣ್ ರೌಡಿಶೀಟರ್ ಆಗಿದ್ದು, ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿವೆ. ಸಂದೀಪ್, ಇತರೆ ಇಬ್ಬರು ಆರೋಪಿಗಳ ನಡುವೆ ಹಣಕಾಸು ವ್ಯವಹಾರ ಇತ್ತು. ಈ ವಿಚಾರವಾಗಿ ಆರೋಪಿಗಳು ಸಂದೀಪ್ನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇರಿಸಿದ್ದರು ಎಂದು ಹೇಳಲಾಗಿದೆ.