ಲೋಕಸಭೆ ಚುನಾವಣೆ: ನಿರ್ಧಾರ ವರಿಷ್ಠರಿಗೆ
Team Udayavani, Mar 5, 2019, 12:30 AM IST
ಬೆಂಗಳೂರು: ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಸ್ಥಾನ ಹೊಂದಾಣಿಕೆ ಬಗ್ಗೆ ಕಾಂಗ್ರೆಸ್-ಜೆಡಿಎಸ್ ನಡುವೆ ಒಮ್ಮತ ಮೂಡಿಲ್ಲ. ಈ ಬಗ್ಗೆ ಸೋಮವಾರ ಬೆಂಗಳೂರಿನಲ್ಲಿ ನಡೆದಿದ್ದ ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಜೆಡಿಎಸ್ 12 ಸೀಟುಗಳನ್ನು ನೀಡಬೇಕು ಎಂದು ಪಟ್ಟುಹಿಡಿದಿದೆ. ಹಾಲಿ ಸಂಸದರು ಇರುವ ಹತ್ತು ಕ್ಷೇತ್ರಗಳಲ್ಲಿ ಯಾವುದನ್ನೂ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ನ ರಾಜ್ಯ ನಾಯಕರು ಹಠ ಹಿಡಿದಿರುವುದರಿಂದ ಎರಡನೇ ಸುತ್ತಿನ ಮಾತುಕತೆಯಲ್ಲೂ ಸ್ಥಾನ ಹೊಂದಾಣಿಕೆ ಬಗ್ಗೆ ಒಮ್ಮತ ಸಾಧ್ಯವಾಗಲಿಲ್ಲ. ಹೀಗಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿ ಹಾಗೂ ಜೆಡಿಎಸ್ ಅಧ್ಯಕ್ಷ ಎಚ್.ಡಿ.ದೇವೇಗೌಡರು ಮಾತುಕತೆ ನಡೆಸಿದ ನಂತರವಷ್ಟೇ “ಫೈನಲ್’ ಆಗಲಿದೆ. ಈ ಹಿಂದೆಯೂ ಕಾಂಗ್ರೆಸ್ ಪಕ್ಷದ ಸಭೆಯಲ್ಲೂ, ಸೀಟು ಹೊಂದಾಣಿಕೆ ಅಂತಿಮ ನಿರ್ಧಾರವನ್ನು ರಾಹುಲ್ಗಾಂಧಿ-ದೇವೇಗೌಡರ ತೀರ್ಮಾನಕ್ಕೆ ಬಿಡಲಾಗಿತ್ತು.
ಕುಮಾರಕೃಪ ಅತಿಥಿಗೃಹದಲ್ಲಿ ಮಂಗಳವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಡಿಸಿಎಂ ಡಾ.ಜಿ.ಪರಮೇಶ್ವರ, ಮಾಜಿ ಸಿಎಂ ಸಿದ್ದರಾಮಯ್ಯ, ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಸಮಾಲೋಚನೆ ನಡೆಸಿದರು.
ಕಾಂಗ್ರೆಸ್ನ ಹಾಲಿ ಸಂಸದರು ಇರುವ ಹತ್ತು ಕ್ಷೇತ್ರ, ಜೆಡಿಎಸ್ನ ಎರಡು ಕ್ಷೇತ್ರ ಯಥಾಸ್ಥಿತಿ ಇರಲಿ. ಉಳಿದ 18 ಕ್ಷೇತ್ರಗಳಲ್ಲಿ ಸೀಟು ಹಂಚಿಕೆ ಮಾತುಕತೆ ನಡೆಯಲಿ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರತಿಪಾದಿಸಿದರು. ಒಂದೊಮ್ಮೆ ಕಾಂಗ್ರೆಸ್ ಗೆದ್ದ ಕ್ಷೇತ್ರ ಬಿಟ್ಟುಕೊಟ್ಟರೆ, ಜೆಡಿಎಸ್ ಗೆದ್ದ ಕ್ಷೇತ್ರ ಬಿಟ್ಟುಕೊಡಬೇಕು ಎಂಬ ಒತ್ತಾಯ ಪಕ್ಷದ ಜಿಲ್ಲಾ ನಾಯಕರಲ್ಲಿ ಕೇಳಿಬರಬಹುದು. ಆಗ, ಕಷ್ಟವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.
ವಾಸ್ತವಾಂಶ ಆಧಾರ: ಕಳೆದ ಚುನಾವಣೆ ಸಂದರ್ಭಕ್ಕೂ ಈಗಿನ ಸಂದರ್ಭಕ್ಕೂ ವ್ಯತ್ಯಾಸವಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜೆಡಿಎಸ್ ನಾಯಕ ಡ್ಯಾನಿಶ್ ಅಲಿ ಪ್ರತಿಪಾದಿಸಿದರು. ಹಾಲಿ ಸಂಸದರು ಇರುವ ಕ್ಷೇತ್ರಗಳಲ್ಲಿ ಎಲ್ಲರೂ ಗೆಲ್ಲುತ್ತಾರಾ ಎಂಬುದು ಮುಖ್ಯ. ಈಗಿನ ವಾಸ್ತವಾಂಶದ ಶಕ್ತಿ ಸಾಮರ್ಥ್ಯದ ಆಧಾರದಲ್ಲಿ ಚರ್ಚೆ ನಡೆಯಬೇಕು ಎಂದು ಇಬ್ಬರು ನಾಯಕರು ಕಾಂಗ್ರೆಸ್ ನಾಯಕರಿಗೆ ಮನವರಿಕೆ ಮಾಡಲು ಯತ್ನಿಸಿದ್ದಾರೆ.
ಹಾಸನ, ಮಂಡ್ಯ, ಶಿವಮೊಗ್ಗ, ಮೈಸೂರು, ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ, ತುಮಕೂರು ಕ್ಷೇತ್ರ ಬಿಟ್ಟುಕೊಡಬೇಕು ಎಂದು ಸಿಎಂ ಮತ್ತು ಡ್ಯಾನಿಶ್ ಅಲಿ ವಾದಿಸಿದರು. ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ ಕ್ಷೇತ್ರ ಬಿಟ್ಟುಕೊಡುವುದು ಕಷ್ಟ. ಸಮನ್ವಯ ಸಮಿತಿ ಅಧ್ಯಕ್ಷರು ಸಭೆಯಲ್ಲಿ ಈ ಮಾತು ಹೇಳಿದ ಬಳಿಕ ಸ್ಥಾನ ಹೊಂದಾಣಿಕೆ ಕುರಿತ ಮಾತುಕತೆಯಲ್ಲಿ ಒಮ್ಮತ ಏರ್ಪಡದ ಕಾರಣ ಹೈಕಮಾಂಡ್ಗೆ ಬಿಡುವ ತೀರ್ಮಾನ ಕೈಗೊಳ್ಳಲಾಯಿತು ಎನ್ನಲಾಗಿದೆ.
ಮಂಡ್ಯ ಬಗ್ಗೆ ಚರ್ಚೆ: ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಟಿಕೆಟ್ಗೆ ಚಿತ್ರನಟ ದಿ.ಅಂಬರೀಶ್ ಪತ್ನಿ ಸುಮಲತಾ ಬೇಡಿಕೆ ಇಟ್ಟಿರುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಸಮನ್ವಯ ಸಮಿತಿ ಸಭೆಯ ನಡುವೆಯೇ ಕೆಪಿಸಿಸಿ ಆಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಕರೆಸಿಕೊಂಡು ಚರ್ಚಿಸಲಾಯಿತು. ಜತೆಗೆ ಚುನಾವಣೆಗೆ ಸಂಬಂಧಿಸಿದಂತೆ ಲೋಕಸಭೆ ಕ್ಷೇತ್ರಾವಾರು, ಶಾಸಕರು,ಸಂಸದರು, ಜಿಲ್ಲಾಧ್ಯಕ್ಷರ ಜತೆ ಸಭೆ ನಡೆಸಿ ಸಂಗ್ರಹಿಸಿದ್ದ ಮಾಹಿತಿಯನ್ನು ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ದಿನೇಶ್ ಗುಂಡೂರಾವ್ಗೆ ನೀಡಿದರು.ಬಳಿಕ ಮಾತನಾಡಿದ ಕೆ.ಸಿ.ವೇಣುಗೋಪಾಲ್ ಇನ್ನೆರಡು ದಿನಗಳಲ್ಲಿ ಸೀಟು ಹಂಚಿಕೆ ಇತ್ಯರ್ಥವಾಗಲಿದೆ ಎಂದರು.
ಆದರೆ ಡ್ಯಾನಿಶ್ ಅಲಿ “ಇನ್ನೂ ಚರ್ಚೆಯ ಅವಶ್ಯಕತೆ ಇದೆ. ದೇವೇಗೌಡರು ಮತ್ತು ರಾಹುಲ್ಗಾಂಧಿಯವರು ಮಾತನಾಡಿ ಇನ್ನೊಂದು ವಾರದಲ್ಲಿ ಸ್ಥಾನಗಳ ಹಂಚಿಕೆ ಅಂತಿಮಗೊಳಿಸಲಿದ್ದಾರೆ ಎಂದರು.
ಅಂತಿಮವಾಗಿಲ್ಲ: ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಾತನಾಡಿ, ಜೆಡಿಎಸ್ ಮತ್ತು ಕಾಂಗ್ರೆಸ್ ಒಟ್ಟಾಗಿ ಸ್ಪರ್ಧೆ ನಡೆಸಿದರೆ, 20 ಸ್ಥಾನಕ್ಕೂ ಹೆಚ್ಚು ಸ್ಥಾನ ಗೆಲ್ಲಬಹುದು. ಸೋಮವಾರದ ಸಭೆಯಲ್ಲಿ ಒಮ್ಮತದ ಚರ್ಚೆಯಾಗಿದೆ. ಹೈಕಮಾಂಡ್ ಮಟ್ಟದಲ್ಲಿ ಸೀಟು ಹಂಚಿಕೆ ಅಂತಿಮವಾಗಲಿದೆ. ಸೂಕ್ತ ನಿರ್ಧಾರ ಕೈಗೊಳ್ಳುವಲ್ಲಿ ನಾವು ಸಫಲರಾಗಿದ್ದೇವೆ. ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ನಿಟ್ಟಿನಲ್ಲಿ ನಾವು ಫಲಪ್ರದ ಮಾತುಕತೆ ನಡೆಸಿದ್ದೇವೆ. ನಾವು ಮುಖ್ಯವಾಗಿ ಚುನಾವಣೆಯಲ್ಲಿ ಗೆಲ್ಲಬೇಕು ಎಂದರು.
ಸ್ಥಾನ ಹೊಂದಾಣಿಕೆ ನಿಟ್ಟಿನಲ್ಲಿ ಉತ್ತಮವಾಗಿಯೇ ಮಾತುಕತೆ ನಡೆದಿದೆ. ಆದರೆ ನಿರ್ಧಾರ ಅಂತಿಮವಾಗಿಲ್ಲ. ರಾಹುಲ್ ಗಾಂಧಿ ಮತ್ತು ದೇವೇಗೌಡರ ನಡುವೆ ಅಂತಿಮ ಹಂತದ ಮಾತುಕತೆ ಬಳಿಕ ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆ.
– ಸಿದ್ದರಾಮಯ್ಯ, ಸಮನ್ವಯ ಸಮಿತಿ ಅಧ್ಯಕ್ಷ
ಲೋಕಸಭೆ ಸೀಟು ಹಂಚಿಕೆ ಯಾವುದೇ ಗೊಂದಲ ಇಲ್ಲ. ಸಮನ್ವಯ ಸಮಿತಿಯಲ್ಲಿ ಸಮಗ್ರವಾಗಿ ಚರ್ಚಿಸಿದ್ದೇವೆ. ಎಲ್ಲವೂ ಸುಸೂತ್ರವಾಗಿ ಇತ್ಯರ್ಥವಾಗುತ್ತದೆ.
– ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಎರಡೂ ಪಕ್ಷದ ನಾಯಕರು ಸೀಟು ಹಂಚಿಕೆ ಬಗ್ಗೆ ಚರ್ಚೆ ಮಾಡಿದ್ದೇವೆ. ಕಳೆದ ವಾರ ರಾಜ್ಯ ನಾಯಕರು ಮಾತನಾಡಿದ್ದಾರೆ. ಆ ಸಭೆಯಲ್ಲಿ ನಡೆದ ವಿಚಾರಗಳನ್ನು ಸಮನ್ವಯ ಸಮಿತಿಯಲ್ಲೂ ಚರ್ಚೆ ಮಾಡಿದ್ದೇವೆ. ಇನ್ನೂ ಸ್ವಲ್ಪ ಚರ್ಚೆಯ ಅವಶ್ಯಕತೆ ಇದೆ. ದೇವೇಗೌಡರು ಹಾಗೂ ರಾಹುಲ್ಗಾಂಧಿಯವರು ಮಾತನಾಡಿ ಇನ್ನೊಂದು ವಾರದಲ್ಲಿ ಅಂತಿಮಗೊಳಿಸಲಿದ್ದಾರೆ. ಬಿಜೆಪಿಯ ಶಕ್ತಿಕುಂದಿಸಲು ನಮ್ಮ ಬಳಿ ಹಲವು ಫಾರ್ಮುಲಾ ಇವೆ.
-ಡ್ಯಾನಿಶ್ ಅಲಿ, ಜೆಡಿಎಸ್ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ
ಇನ್ನೆರಡು ದಿನಗಳಲ್ಲಿ ಸೀಟು ಹಂಚಿಕೆಯಾಗಲಿದೆ. ಸಮನ್ವಯ ಸಮಿತಿಯಲ್ಲಿ ಎಲ್ಲ ವಿಚಾರಗಳು ಚರ್ಚೆಯಾಗಿವೆ. ಜೆಡಿಎಸ್ 12 ಸೀಟು ಕೇಳುವುದರಲ್ಲಿ ತಪ್ಪಿಲ್ಲ. ಅಂತಿಮವಾಗಿ ಎಲ್ಲರೂ ಕುಳಿತು ತೀರ್ಮಾನ ತೆಗೆದುಕೊಳ್ಳುತ್ತೇವೆ.
– ಕೆ.ಸಿ.ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ