ಕಾಮುಕರ ಕೀಟಲೆ ಕಪೋಲಕಲ್ಪಿತ!
Team Udayavani, Dec 29, 2017, 12:10 PM IST
ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಸಿಲಿಕಾನ್ ಸಿಟಿ ಖ್ಯಾತಿಗೆ ಕಪ್ಪು ಮಸಿ ಬಳಿದಿದ್ದ ಪ್ರಕರಣ ನಡೆದೇ ಇಲ್ಲ! 2017ರ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಬ್ರಿಗೇಡ್ ಹಾಗೂ ಎಂಜಿ ರಸ್ತೆಯಲ್ಲಿ ಯುವತಿಯರ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪ ಪ್ರಕರಣ ಕೇವಲ ಕಪೋಲಕಲ್ಪಿತ ಎಂದು ಪೊಲೀಸ್ ತನಿಖೆಯಲ್ಲಿ ಬಹುತೇಕ ದೃಢವಾಗಿದೆ.
ಪ್ರಕರಣ ಸಂಬಂಧ ಹಲವು ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರಿಗೆ “ಸಾಮೂಹಿಕ ಲೈಂಗಿಕ ದೌರ್ಜನ್ಯ’ ನಡೆದಿದೆ ಎಂಬುದಕ್ಕೆ ಪೂರಕ ಸಾಕ್ಷ್ಯಗಳು, ದೂರುಗಳು ಲಭ್ಯವಾಗಿಲ್ಲ. ಯಾವೊಬ್ಬ ಯುವತಿಯೂ ಇದುವರೆಗೂ ಹೇಳಿಕೆ ಅಥವಾ ದೂರು ನೀಡಲು ಮುಂದಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣ ಸಂಬಂಧ “ಸಿ’ ರಿಪೋರ್ಟ್ ಸಲ್ಲಿಸಲು ಪೊಲೀಸರು ನಿರ್ಧರಿಸಿದ್ದಾರೆ.
2016ರ ಡಿಸೆಂಬರ್ 31ರಂದು ರಾತ್ರಿ ಗೇಟ್ ವೇ ಹೋಟೆಲ್ ಮುಂಭಾಗ ಯುವತಿಯರ ಮೇಲೆ ಪುಂಡರ ಗುಂಪು ಸಾಮೂಹಿಕ ಲೈಂಗಿಕ ದೌರ್ಜನ್ಯ ನಡೆಸಿದೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಆಧರಿಸಿ ಅಶೋಕ್ನಗರ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಆದರೆ, “ಪ್ರತ್ಯಕ್ಷ ಸಾಕ್ಷಿ’ ಎಂದು ಪೊಲೀಸರು ಪರಿಗಣಿಸಿದ್ದ ಕೋರಮಂಗಲ ನಿವಾಸಿ ಸಯ್ಯದ್ ಅಸಾದ್ ಅಬ್ಟಾಸ್,
“ನನ್ನ ಕಣ್ಣಮುಂದೆ ಹುಡುಗಿಯರ ಜೊತೆ ಯಾರೊಬ್ಬರೂ ಅಸಭ್ಯವಾಗಿ ವರ್ತಿಸಿಲ್ಲ. ಆ ಯುವತಿಯರು ನಮಗೆ ಲೈಂಗಿಕ ಕಿರುಕುಳ ನಡೆದಿದೆ ಎಂದು ಹೇಳಿಲ್ಲ. ಕ್ಯಾಬ್ಗಾಗಿ ಕಾಯುತ್ತಿದ್ದರು,’ ಎಂದು ಜನವರಿ 5ರಂದು ಹೇಳಿಕೆ ನೀಡಿದ್ದಾರೆ. ಜತೆಗೆ ವಿದೇಶಿಗರೂ ಸೇರಿ 100ಕ್ಕೂ ಹೆಚ್ಚು ಮಂದಿಯ ಹೇಳಿಕೆಗಳಲ್ಲೂ ಸಾಮೂಹಿಕ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢವಾಗಿಲ್ಲ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.
ವಿದೇಶಿಗರೂ ಮಾಹಿತಿ ನೀಡಿಲ್ಲ: ಇನ್ನು ಎಂ.ಜಿ ರಸ್ತೆ , ಬ್ರಿಗೇಡ್ ರಸ್ತೆಯ ಪ್ರತಿಷ್ಠಿತ ಹೋಟೆಲ್ಗಳಲ್ಲಿ ಡಿ.31ರಂದು ಉಳಿದುಕೊಂಡಿದ್ದ 30ಕ್ಕೂ ಹೆಚ್ಚು ವಿದೇಶಿಗರಿಂದ ಮಾಹಿತಿ ಕಲೆ ಹಾಕಿದ್ದು, ಕೆಲವರನ್ನು ಪ್ರಶ್ನಿಸಲಾಗಿದೆ. ಆದರೆ, ಎಲ್ಲಿಯೂ ಈ ರೀತಿಯ ಘಟನೆ ಜರುಗಿಲ್ಲ ಎಂದಿದ್ದಾರೆ ಎಂದು ಅಧಿಕಾರಿ ವಿವರಿಸಿದರು.
ಕಬ್ಬನ್ ಪಾರ್ಕ್ ಠಾಣೆ ಪ್ರಕರಣಕ್ಕೂ ಸಾಕ್ಷ್ಯಗಳಿಲ್ಲ: ಅದೇ ರೀತಿ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಪ್ರಕರಣದಲ್ಲಿಯೂ ಬಹುತೇಕ ತನಿಖೆ ಪೂರ್ಣಗೊಂಡಿದೆ. ಆದರೆ, ಯಾವುದೇ ಪೂರಕ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ.
ಆದರೆ, ಸಂತ್ರಸ್ತ ಯುವತಿ ಬಂದು ಹೇಳಿಕೆ ನೀಡಿಲ್ಲ. ಆದರೆ ಮತ್ತೂಂದು ಪ್ರಕರಣದಲ್ಲಿ ಪಾರ್ಟಿಯಲ್ಲಿ ಸರ್ಕಾರಿ ಅಧಿಕಾರಿಯೊಬ್ಬರ ಪತ್ನಿ ಜತೆ ಅಸಭ್ಯವಾಗಿ ವರ್ತಿಸಿದ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಸಿ.ಡಿಯಲ್ಲಿನ ಯುವಕ, ಸಿಟಿ ಕಳಿಸಿದವನೂ ಪತ್ತೆಯಿಲ್ಲ!: ಮತ್ತೂಂದೆಡೆ, ಡಿ.31ರಂದೇ ಯುವಕನೊಬ್ಬ ಯುವತಿಯರ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಅನಾಮಧೇಯ ವ್ಯಕ್ತಿಯೊಬ್ಬರು 2017ರ ಜ.19ರಂದು ಅಶೋಕನಗರ ಪೊಲೀಸ್ ಠಾಣೆಗೆ ವಿಡಿಯೋ ಸಿ.ಡಿಯೊಂದನ್ನು ಕಳಿಸಿದ್ದಾರೆ.
ಬೆಂಗಳೂರಿನ ಅಂಚೆ ಇಲಾಖೆ ಪ್ರಧಾನ ಕಚೇರಿಯಿಂದ ಬಂದಿದ್ದ ಸಿ.ಡಿ ಪರಿಶೀಲಿಸಿದಾಗ 10 ಸೆಕೆಂಡ್ ಅವಧಿಯಲ್ಲಿ ಒಬ್ಬ ಯುವಕನ ಫೋಟೋ ಇದೆ. ಅದನ್ನು ಹೊರತುಪಡಿಸಿ ಮತ್ತೇಮನೂ ಇಲ್ಲ. ಆದಾಗ್ಯೂ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ. ಆದರೆ, ದೂರು ನೀಡಿದ ಅಪರಿಚಿತ ವ್ಯಕ್ತಿಯ ಪತ್ತೆಯಿಲ್ಲ. ಇದರ ಸತ್ಯಾಸತ್ಯತೆ ಪರಿಶೀಲಿಸಲು ವಿಡಿಯೋದಲ್ಲಿರುವ ಯುವಕನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಸಿಸಿಟಿವಿಯಲ್ಲೂ ಏನೂ ಸೆರೆಯಾಗಿಲ್ಲ: “ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯ ಸುತ್ತಮುತ್ತ ಅಳವಡಿಸಲಾಗಿದ್ದ 63 ಸಿಸಿಟಿವಿಗಳ ದೃಶ್ಯಗಳನ್ನು ಪರಿಶೀಲನೆ ನಡೆಸಲಾಗಿದೆ. ಆದರೆ, ಎಲ್ಲ ಸಿಸಿಟಿವಿ ಫುಟೇಜ್ನಲ್ಲೂ ಹೊಸ ವರ್ಷಾಚರಣೆ ಸಂಬಂಧ ಕುಣಿದು ಕುಪ್ಪಳಿಸುತ್ತಿರುವ ದೃಶ್ಯಗಳಿವೆಯೇ ಹೊರತು, ಅಸಭ್ಯವಾಗಿ ನಡೆದುಕೊಂಡಿರುವ ದೃಶ್ಯಗಳು ಸೆರೆಯಾಗಿಲ್ಲ.
ಈ ಸಂಬಂಧ ಅಶೋಕನಗರ ಠಾಣೆ ವ್ಯಾಪ್ತಿಯ ಸುತ್ತಮುತ್ತಲ ಭಾಗಗಳಲ್ಲಿರುವ ಎಲ್ಲ ಬಾರ್ ಮತ್ತು ರೆಸ್ಟೋರೆಂಟ್, ಲಾಡ್ಜ್ಗಳನ್ನು ಪರಿಶೀಲಿಸಲಾಗಿದೆ ಹಾಗೂ ಅಲ್ಲಿನ ಸಿಬ್ಬಂದಿಯನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿನ ಆಟೋ, ಕ್ಯಾಬ್ ಚಾಲಕರು, ಹಳೇ ಪ್ರಕರಣಗಳ ಆರೋಪಿಗಳನ್ನು ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿಕೊಂಡಿದ್ದೇವೆ.
ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ ಮಾಹಿತಿ ನೀಡಿಲ್ಲ. “ಅಂದು ರಾತ್ರಿ ನಾನು ಯಾವುದೇ ರೀತಿಯ ಅಹಿತಕರ ಘಟನೆ ನೋಡಿಲ್ಲ. ಅಂತಹ ಯಾವುದೇ ಅಹಿತಕರ ಘಟನೆ ನನ್ನ ಗಮನಕ್ಕೆ ಬಂದಿಲ್ಲ’ ಎಂಬುದೇ ಎಲ್ಲರ ಹೇಳಿಕೆಯಾಗಿದೆ,’ ಎಂದು ಅಧಿಕಾರಿ ತಿಳಿಸಿದ್ದಾರೆ.
ಕೋರ್ಟಲ್ಲಿ ಕೇಸು ನಿಲ್ಲೋದೇ ಡೌಟು!: “ಸಾಮಾನ್ಯವಾಗಿ ಪ್ರಾಪ್ತ ವಯಸ್ಕರು ಹಾಗೂ ಮಾನಸಿಕ ಸಧೃಡತೆ ಹೊಂದಿರುವವರು ಸಂತ್ರಸ್ತರ ಸ್ಥಾನದಲ್ಲಿದ್ದಾಗ, ಅವರು ದೂರು ನೀಡದಿದ್ದರೆ ಪೊಲೀಸರು ದಾಖಲಿಸಿಕೊಂಡ ಸ್ವಯಂಪ್ರೇರಿತ ಪ್ರಕರಣ ಮಾನ್ಯತೆ ಕಳೆದುಕೊಳ್ಳುತ್ತದೆ. ಜತೆಗೆ ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸಲು ಅಥವಾ ಸಾಬೀತುಪಡಿಸುವುದೂ ಕಷ್ಟ’ ಎಂದು ಹೈಕೋರ್ಟ್ ವಕೀಲ ಎ. ಅರುಣ್ ಶ್ಯಾಮ್ ಅಭಿಪ್ರಾಯಪಡುತ್ತಾರೆ.
“ಕಿಸ್ಸಿಂಗ್ ಕೇಸ್’ನಲ್ಲಿ ಆರು ಜನರ ವಿರುದ್ಧ ಚಾರ್ಜ್ಶೀಟ್!: ಇನ್ನು 2016ರ ಡಿ.31ರಂದು ರಾತ್ರಿ ಕಮ್ಮನಹಳ್ಳಿಯಲ್ಲಿ ಯುವತಿಯೊಬ್ಬರಿಗೆ ಇಬ್ಬರು ದುಷ್ಕರ್ಮಿಗಳು ಪಿಜಿ ಮುಂದೆಯೇ ಬಲವಂತವಾಗಿ ಮುತ್ತುಕೊಟ್ಟ ಪ್ರಕರಣ ಸಂಬಂಧ ಆರು ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಈ ಪ್ರಕರಣದಲ್ಲೂ ಸಂತ್ರಸ್ತೆ ಹೇಳಿಕೆ ದಾಖಲಿಸಿಕೊಳ್ಳಲು ಪೊಲೀಸರು ಹರಸಾಹಸಪಟ್ಟಿದ್ದಾರೆ.
ಕೊಂಚ ಅನುಮಾನ ಬಂದರೂ ವಶಕ್ಕೆ: ಕಳೆದ ಬಾರಿ ಕಪೋಲ ಕಲ್ಪಿತ ಆರೋಪಗಳಿಂದಲೇ ಸಿಲಿಕಾನ್ ಸಿಟಿಯ ಹೆಸರಿಗೆ ಕಪ್ಪು ಚುಕ್ಕೆ ಅಂಟಿಕೊಂಡಿತ್ತು. ಹೀಗಾಗಿ ನಗರ ಪೊಲೀಸರು ಈ ಬಾರಿ ಸಾಕಷ್ಟು ಬಿಗಿ ಬಂದೋಬಸ್ತ್ ಕ್ರಮಗಳನ್ನು ಕೈಗೊಂಡಿದ್ದಾರೆ. ಎಂ.ಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿ 2500ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.
ನ್ಯೂ ಇಯರ್ ಸೆಲಬ್ರೇಷನ್ಗೆ ಮಹಿಳೆಯರಿಗೆ ಪ್ರತ್ಯೇಕ ಪಥ ಮಾಡಲಾಗಿದೆ. ಅಲ್ಲದೆ ಪ್ರತಿಯೊಬ್ಬರ ಚಲನವಲನಗಳೂ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಲಿದ್ದು, ದೊಡ್ಡ ಪರದೆಗಳಲ್ಲಿ ಬಿತ್ತರಗೊಳ್ಳಲಿವೆ. ಯಾರದೇ ನಡವಳಿಕೆ ಬಗ್ಗೆ ಕೊಂಚ ಅನುಮಾನ ಬಂದರೂ ವಶಕ್ಕೆ ಪಡೆಯಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಕಳೆದ ವರ್ಷ ಬ್ರಿಗೇಡ್ ರೋಡ್ ಹಾಗೂ ಎಂಜಿ ರೋಡ್ನಲ್ಲಿ ಅಹಿತಕರ ಘಟನೆಗಳು ನಡೆದಿವೆ ಎಂಬ ಆರೋಪ ಸಂಬಂಧ ಹಲವು ಆಯಾಮಗಳಲ್ಲಿ ತನಿಖೆ ನಡೆದಿದೆ. ಈ ಹಂತದಲ್ಲಿ ಏನೂ ಹೇಳಲು ಸಾಧ್ಯವಿಲ್ಲ. ಈ ಬಾರಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
-ಚಂದ್ರಗುಪ್ತ, ಕೇಂದ್ರ ವಿಭಾಗದ ಡಿಸಿಪಿ
* ಮಂಜುನಾಥ್ ಲಘುಮೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ