ಪ್ರೇಯಸಿಯ ಪತಿಯನ್ನು ಇರಿದು ಕೊಂದ ಪಾಗಲ್ ಪ್ರೇಮಿ ಸೆರೆ
Team Udayavani, May 20, 2023, 10:50 AM IST
ಮಹದೇವಪುರ: ಪ್ರೇಮಿಯೊಬ್ಬ ಪ್ರೇಯಸಿಯ ಪತಿಯನ್ನೇ ಚಾಕುವಿನಿಂದ ಇರಿದು ಹತ್ಯೆ ಮಾಡಿ ಪೊಲೀಸರ ಅತಿಥಿಯಾಗಿರುವ ಘಟನೆ ಮಹದೇವಪುರದಲ್ಲಿ ನಡೆದಿದೆ.
ಅನ್ವರ್ ಖಾನ್ ಬಂಧಿತ. ಉದಯ್ ಕುಮಾರ್ ಕೊಲೆಯಾದವ.
ಉದಯ್ ಕುಮಾರ್ ಅವರ ಪತ್ನಿ ಪ್ರಿಯಾ ಮತ್ತು ಅನ್ವರ್ ಖಾನ್ ನಡುವೆ ಪ್ರೇಮ ಸಂಬಂಧವಿತ್ತು. ಆದರೆ, ತನಗೆ ಮದುವೆಯಾಗಿ ಮಕ್ಕಳಿವೆ ಎಂದು ಪ್ರಿಯಾ ಅನ್ವರ್ ಪ್ರೀತಿಯನ್ನು ನಿರಾಕರಿಸಿದ್ದಳು. ಆದರೆ ಅನ್ವರ್ ಜತೆ ಸ್ನೇಹ ಮುಂದುವರಿಸಿದ್ದಳು. ಈ ನಡುವೆ ನನ್ನ ಪತಿ ಉದಯ್ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಾನೆ ಎಂದು ಅನ್ವರ್ ಬಳಿ ಪ್ರಿಯಾ ಕಷ್ಟ ತೋಡಿಕೊಂಡಿದ್ದಳು. ಉದಯ್ ಕುಮಾರ್ ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿದ್ದ. ಇದನ್ನೇ ನೆಪ ಮಾಡಿಕೊಂಡ ಅನ್ವರ್, ನನ್ನ ಬೈಕ್ ರಿಪೇರಿ ಮಾಡಿಸಬೇಕು. ನಿನ್ನ ಪತಿಯ ಫೋನ್ ನಂಬರ್ ಕೊಡು ಎಂದು ಪ್ರಿಯಾಳಿಂದ ನಂಬರ್ ಪಡೆದುಕೊಂಡಿದ್ದ.
ಬಳಿಕ ಕಳೆದ ರಾತ್ರಿ ಅನ್ವರ್ ಫೋನ್ ಮಾಡಿ ಬೈಕ್ ರಿಪೇರಿ ಇದೆ ಎಂದು ಉದಯ್ನನ್ನು ತಾನಿದ್ದಲ್ಲಿಗೆ ಕರೆಸಿಕೊಂಡಿದ್ದ. ಉದಯ್ ಈತನ ಬಳಿಗೆ ಬರುತ್ತಿದ್ದಂತೆ “ಏಕೆ ನೀನು ನಿನ್ನ ಪತ್ನಿಗೆ ಕುಡಿದು ಹಿಂಸೆ ಕೊಡುವೆ’ ಎಂದು ಅವಾಜ್ ಹಾಕಿದ್ದ. ಇದರಿಂದ ಸಿಟ್ಟಿಗೆದ್ದ ಉದಯ…, “ನನ್ನ ಪತ್ನಿ ಬಗ್ಗೆ ಇದೆಲ್ಲ ಕೇಳಲು ನೀನು ಯಾರು’ ಎಂದು ಬೆದರಿಸಿದ್ದ. ಇಬ್ಬರ ನಡುವೆ ನಡೆದ ಮಾತಿನ ಚಕಮಕಿ ತಾರಕಕ್ಕೇರಿ ಅನ್ವರ್ ತನ್ನ ಬಳಿ ಇದ್ದ ಚಾಕುವಿನಿಂದ ಇರಿದು ಉದಯ್ ನನ್ನು ಹತ್ಯೆ ಮಾಡಿದ್ದ.
ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉದಯ್ ಪತ್ನಿ ಪ್ರಿಯಾ ಪ್ರಕರಣದಲ್ಲಿ ಶಾಮೀಲಾಗಿರುವ ಅನುಮಾನ ವ್ಯಕ್ತವಾಗಿದ್ದು, ತನಿಖೆ ಮುಂದುವರಿಸಿದ್ದಾರೆ.