ಮಳೆ ಕೊಯ್ಲು ಕಡ್ಡಾಯಕ್ಕೆ ಮೇಯರ್ ಸೂಚನೆ
Team Udayavani, Nov 9, 2017, 1:16 PM IST
ಬೆಂಗಳೂರು: ರಾಜಧಾನಿಯಲ್ಲಿ ಮಳೆನೀರು ಕೊಯ್ಲು ಅಳವಡಿಕೆಯನ್ನು ಕಡ್ಡಾಯಗೊಳಿಸಿ ಡಿ.5ರೊಳಗೆ ಜಾರಿಗೊಳಿಸಲು ಕ್ರಮಕೈಗೊಳ್ಳುವಂತೆ ಮೇಯರ್ ಆರ್. ಸಂಪತ್ರಾಜ್ ಅಧಿಕಾರಿಗಳು ಸೂಚನೆ ನೀಡಿದರು.
ಬುಧವಾರ ನಗರದ ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಪಾಲಿಕೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಸ್ವತ್ತುಗಳು, ಉದ್ಯಾನಗಳಲ್ಲಿಯೂ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸುವಂತೆ ಮತ್ತು ಸರ್ಕಾರದ ಆದೇಶದಂತೆ ಪ್ರತಿ ನಾಗರಿಕರು ಮಳೆ ನೀರು ಇಂಗು ಗುಂಡಿ ಅಳವಡಿಸಿದ್ದಾರೆಯೇ ಎಂಬ ಮಾಹಿತಿಯನ್ನು ಡಿ.5ರೊಳಗೆ ಕಲೆ ಹಾಕುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಅಧಿಕಾರಿಗಳ ಅಮಾನತು: ಪಶ್ಚಿಮ ವಲಯ ವ್ಯಾಪ್ತಿಯ ಪ್ರಮುಖ ರಸ್ತೆಗಳನ್ನು ಬೈಕ್ನಲ್ಲಿ ಚಲಿಸಿ ಪರಿಶೀಲನೆ ನಡೆಸಿದ ಮೇಯರ್, ಮೆಜೆಸ್ಟಿಕ್ ಬಳಿಯ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ರಸ್ತೆಗುಂಡಿಗಳನ್ನು ದುರಸ್ತಿಪಡಿಸದ ಹಿನ್ನೆಲೆಯಲ್ಲಿ ಬಿಬಿಎಂಪಿ ಟಿಇಸಿ ವಿಭಾಗದ ಜಂಟಿ ಎಂಜಿನಿಯರ್ ಬಿಜಾಲ್ ರಾಜ್ ಅವರನ್ನು ಕೂಡಲೇ ಅಮಾನತುಗೊಳಿಸುವಂತೆ ಜಂಟಿ ಆಯುಕ್ತರಿಗೆ ಸೂಚನೆ ನೀಡಿದರು.