ಮಗಳಿಗೆ ನಿತ್ಯ ಹಿಂಸೆ ನೀಡುತ್ತಿದ್ದ ಮದ್ಯವ್ಯಸನಿ ಅಳಿಯನ ಕೊಲೆಗೆ ಯತ್ನಿಸಿದ ಅತ್ತೆ ಬಂಧನ
Team Udayavani, Apr 13, 2022, 3:02 PM IST
ಬೆಂಗಳೂರು: ಮದ್ಯದ ಅಮಲಿನಲ್ಲಿ ಮಗಳು ಹಾಗೂ ಮೊಮ್ಮಕ್ಕಳ ಮೇಲೆ ಹಲ್ಲೆ ನಡೆಸುತ್ತಿದ್ದ ಅಳಿಯನಿಗೆ ಅತ್ತೆಯೇ ಕಬ್ಬಿಣದ ರಾಡ್ನಿಂದ ಹೊಡೆದು ಕೊಲೆಗೈಯಲು ಯತ್ನಿಸಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಂದ್ರಹಳ್ಳಿ ನಿವಾಸಿ ಕೇಶವ್ (44) ಹಲ್ಲೆಗೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ. ಕೃತ್ಯ ಎಸಗಿದ ಆತನ ಅತ್ತೆ ಪಾರ್ವತಮ್ಮ (60)ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಪಾರ್ವತಮ್ಮ ಅವರ ಪುತ್ರಿ ಶಕುಂತಲಾರನ್ನು 20 ವರ್ಷಗಳ ಹಿಂದೆ ಕೇಶವ್ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಅತ್ತೆ ಪಾರ್ವತಮ್ಮನ ಜತೆ ಯಲ್ಲಿಯೇ ದಂಪತಿ ಮತ್ತು ಮಕ್ಕಳು 15 ವರ್ಷಗಳಿಂದ ಅಂದ್ರಹಳ್ಳಿಯಲ್ಲಿ ವಾಸವಾಗಿದ್ದಾರೆ. ನಗರದ ಫುಡ್ ಪ್ಯಾಕೆಜಿಂಗ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕೇಶವ್ ಮದ್ಯದ ವ್ಯಸನಿಯಾಗಿದ್ದು, ನಿತ್ಯ ಪತ್ನಿ, ಮಕ್ಕಳ ಮೇಲೆ ಹಲ್ಲೆ ನಡೆಸುತ್ತಿದ್ದ. ಪತ್ನಿ ಜತೆ ವಿನಾಕಾರಣ ಜಗಳ ತೆಗೆದು ರಂಪಾಟ ಮಾಡುತ್ತಿದ್ದ. ಅದರಿಂದ ಶಕುಂತಲಾ ತಾಯಿ ಪಾರ್ವತಮ್ಮ ಕೂಡ ಬೇಸತ್ತಿದ್ದರು.
ಶನಿವಾರ ಕೂಡ ಮದ್ಯ ಸೇವಿಸಿ ಬಂದಿದ್ದ ಕೇಶವ್ ಪತ್ನಿ ಜತೆ ಜಗಳ ತೆಗದು ಆಕೆಗೆ ಹಲ್ಲೆ ನಡೆಸಲು ಮುಂದಾಗಿದ್ದ. ಅದರಿಂದ ಆಕ್ರೋಶಗೊಂಡ ಪಾರ್ವತಮ್ಮ ಕಬ್ಬಿ ಣದ ರಾಡ್ನಿಂದ ಕೇಶವ್ ತಲೆಗೆ ಹೊಡೆದಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಕೇಶವ್ ನನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಕೇಶವ್ ಸ್ಥಿತಿ ಗಂಭೀರವಾಗಿದ್ದು, ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪ್ರಕರಣ ದಾಖಲಾಸಿಕೊಂಡು ಪಾರ್ವತಮ್ಮರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.