ಬೆಂಗಳೂರು ವಿವಿ ಕ್ಯಾಂಪಸ್ನಲ್ಲಿ ನವಿಲು ಸಾವು
Team Udayavani, Feb 26, 2019, 6:28 AM IST
ಬೆಂಗಳೂರು: ಜ್ಞಾನಭಾರತಿ ಆವರಣದಲ್ಲಿ ಸಾಕುನಾಯಿ ಕಚ್ಚಿ ಗಂಡು ನವಿಲು ಮೃತಪಟ್ಟಿದೆ. ಜ್ಞಾನಭಾರತಿ ಆವರಣದಲ್ಲಿ ನೂರಕ್ಕೂ ಅಧಿಕ ನವಿಲುಗಳಿದ್ದು, ನಿತ್ಯವೂ ಕಾಂಪಸ್ನಲ್ಲಿ ಸುತ್ತಾಡುತ್ತಿರುತ್ತವೆ. ಬೆಳಗ್ಗೆ ವಾಯುವಿಹಾರಕ್ಕೆ ಬರುವವರು ನಾಯಿಗಳ ಜತೆ ಬರುತ್ತಾರೆ.
ನವಿಲು ನೃತ್ಯ ಮಾಡುವ ಸಂದರ್ಭದಲ್ಲಿ ನಾಯಿ ದಾಳಿ ಮಾಡಿದೆ ಎಂದು ಬೆಂಗಳೂರು ವಿ.ವಿ ಹಿರಿಯ ಪ್ರಾಧ್ಯಾಪಕರೊಬ್ಬರು ಮಾಹಿತಿ ನೀಡಿದರು. ನವಿಲುಗಳ ರಕ್ಷಣೆಗಾಗಿ ಸೂಕ್ತ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ. ಸಾರ್ವಜನಿಕರಲ್ಲೂ ಅರಿವು ಮೂಡಿಸಬೇಕಿದೆ. ನವಿಲುಗಳು ಗುಂಪುಗುಂಪಾಗಿ ಕ್ಯಾಂಪಸ್ ಒಳಗೆ ವಿಹರಿಸುವುದನ್ನು ನೋಡುವುದೇ ಆನಂದ.
ಈ ನಿಟ್ಟಿನಲ್ಲಿ ನವಿಲು ಉಳಿಸಲು ಒಂದು ಅಭಿಯಾನ ಮಾಡಲಿದ್ದೇವೆ ಎಂದು ಹೇಳಿದರು. ನವಿಲಿನ ಅಂತ್ಯ ಸಂಸ್ಕಾರವನ್ನು ಕ್ಯಾಂಪಸ್ನಲ್ಲೇ ಮಾಡಿದ್ದೇವೆ. ಇನ್ಮುಂದೆ ಈ ರೀತಿ ಆಗದಂತೆ ಸಾರ್ವಜನಿಕರಲ್ಲಿ ಹಾಗೂ ವಾಯುವಿಹಾರಕ್ಕೆ ಬರುವವರಲ್ಲಿ ಅರಿವು ಮೂಡಿಸಲಿದ್ದೇವೆ. ಸತ್ತಿರುವ ನವಿಲಿನ ಚಿತ್ರವನ್ನು ಭಿತ್ತಿ ಪತ್ರದ ರೂಪದಲ್ಲಿ ಎಲ್ಲೆಡೆ ಹಂಚಲಿದ್ದೇವೆ ಎಂದರು.