ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ಧತೆ
Team Udayavani, Aug 14, 2018, 5:07 PM IST
ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಗೆ ನಗರದ ಮಹಾತ್ಮಾ ಗಾಂಧಿ ರಸ್ತೆಗೆ ಹೊಂದಿಕೊಂಡಿರುವ μàಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸಕಲ ಸಿದ್ಧತೆ ನಡೆಯುತ್ತಿದ್ದು, ಆ.15ರಂದು ಬೆಳಗ್ಗೆ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಒಂದು ವಾರದ ಹಿಂದೆಯೇ ಮೈದಾನದಲ್ಲಿ ಶಾಮಿಯಾನ ಹಾಕಲಾಗಿದ್ದು, ವೇದಿಕೆ ಸೇರಿದಂತೆ ಅಗತ್ಯ ತಯಾರಿ ಬರದಿಂದ ಸಾಗಿದೆ.
ಸ್ವಾತಂತ್ರ್ಯ ದಿನದ ಹಿನ್ನೆಲೆ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ನಗರ ಜಿಲ್ಲಾಧಿಕಾರಿ ಬಿ.ಎಂ.ವಿಜಯ್ ಶಂಕರ್ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯಂದು ಬೆಳಗ್ಗೆ 8.58ಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೈದಾನಕ್ಕೆ ಆಗಮಿಸಲಿದ್ದಾರೆ. 9 ಗಂಟೆಗೆ ಧ್ವಜಾರೋಹಣ ನೆರವೇರಿ ಸಲಿದ್ದು, ಈ ಸಂದರ್ಭದಲ್ಲಿ ವಾಯುಪಡೆಯು ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲಿದೆ. ಆನಂತರ ಪರೇಡ್ ಗೌರವ ವಂದನೆ ಸ್ವೀಕರಿಸಿ ನಾಡಿನ ಜನತೆಯನ್ನು ಉದ್ದೇಶಿಸಿ ಮುಖ್ಯಮಂತ್ರಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಈ ಬಾರಿ ವೀಕ್ಷಕರ ಗ್ಯಾಲರಿಯನ್ನು ವಿಸ್ತರಿಸಿದ್ದು, ಸಾರ್ವಜನಿಕರಿಗಾಗಿ 7,000 ಆಸನಗಳನ್ನು ಸೇರಿದಂತೆ ಒಟ್ಟು 11,450 ಆಸನ ವ್ಯವಸ್ಥೆ ಮಾಡಲಾಗಿದೆ. “ಹಸಿರು ಕರ್ನಾಟಕಯೋಜನೆ’ಯನ್ನು ಸಸಿ ನೆಡುವ ಹಾಗೂ ವಿತರಿಸುವ ಮೂಲಕ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ಕುಮಾರ್ ಮಾತ ನಾಡಿ, ಕಳೆದ ಎರಡು ವಾರದಿಂದ ಮಾಣೆಕ್ ಷಾ ಪರೇಡ್ ಮೈದಾನ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭದ್ರತಾ ತಪಾಸಣೆ ನಡೆಸಿದ್ದು, ಸಾರ್ವಜನಿಕರಿಗೆ ಮೊಬೈಲ್, ಹೆಲ್ಮೆಟ್, ಕ್ಯಾಮರಾ ಹಾಗೂ ಕೊಡೆಯನ್ನು ನಿಷೇಧಿಸಲಾಗಿದೆ ಎಂದರು.
ತಾಲೀಮು ಜೋರು: ಕಳೆದ ಮೂರು ದಿನಗಳಿಂದ ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಠಿಣ ತಾಲೀಮು ನಡೆಯುತ್ತಿದೆ. ಈ ಬಾರಿ ಪರೇಡ್ನಲ್ಲಿ ಗೋವಾ ಪೊಲೀಸ್, ಸ್ಕೌಟ್, ಗೈಡ್ಸ್, ಎನ್ಎಸ್ಎಸ್, ಸೇವಾದಳ ಹಾಗೂ ವಿವಿಧ ಶಾಲಾ ಮಕ್ಕಳನ್ನು ಒಳಗೊಂಡಂತೆ 34
ತಂಡಗಳು ಭಾಗವಹಿಸಲಿವೆ. 2,000 ಶಾಲಾ ಮಕ್ಕಳಿಂದ ಮೂರು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಯೋಗಪಟು ಮಾನ್ಸಿ ಗುಲಾಟಿ ಅವರಿಂದ ಏಳು ನಿಮಿಷಗಳ ಯೋಗ ಪ್ರದರ್ಶನ ನಡೆಯಲಿದೆ.
ಬಿಗಿ ಭದ್ರತೆ: ಅಹಿತಕರ ಘಟನೆ ನಡೆಯಂತೆ ಎಚ್ಚರ ವಹಿಸಲು ಒಂಬತ್ತು ಡಿಸಿಪಿ, 16 ಎಸಿಪಿ, 46 ಪಿಐ, 102 ಪಿಎಸ್ಐ, 77 ಎಎಸ್ಐ, 540 ಪೇದೆಗಳು, 75 ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ 114 ಮμ¤ ಪೊಲೀಸರನ್ನು ನಿಯೋಜಿಸಲಾಗಿದೆ . ಮೈದಾನದ ಬಂದೋಬಸ್ತ್ಗೆ ಒಂಬತ್ತು ಕೆಎಸ್ಆರ್ಪಿ, ಐದು ಸಿಎಆರ್ ತುಕಡಿಗಳು ಕಾರ್ಯಚರಣೆ ನಡೆಸಲಿವೆ. ಜತೆಗೆ 50 ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇನ್ನು ತುರ್ತು ಸೇವೆಗೆ 3 ಅಗ್ನಿ ಶಾಮಕ ವಾಹನ, ಎರಡು ಆ್ಯಂಬುಲೆನ್ಸ್, ಗರುಡ ಫೋರ್ಸ್ ಇರಲಿವೆ. ಜತೆಗೆ ವೈದ್ಯಕೀಯ ವ್ಯವಸ್ಥೆಯನ್ನು ಮಾಡಲಾಗಿದೆ. ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಸಂಚಾರ ನಿರ್ಬಂಧ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಹಿನ್ನೆಲೆಯಲ್ಲಿ ಆ.15ರಂದು ಬೆಳಗ್ಗೆ 8.30 ರಿಂದ 10.30ರವರೆಗೆ ಕಬ್ಬನ್ ರಸ್ತೆಯ ಬಿಆರ್ವಿ ಜಂಕ್ಷನ್ನಿಂದ ಕಾಮರಾಜ ರಸ್ತೆ ಜಂಕ್ಷನ್ವರೆಗೂ ಎರಡೂ ದಿಕ್ಕುಗಳಲ್ಲಿ ಸಂಚಾರ ನಿರ್ಬಂಧಿಸಿದ್ದು, ಪರ್ಯಾಯ ಮಾರ್ಗ ಸೂಚಿಸಲಾಗಿದೆ.
ಕಬ್ಬನ್ ಪಾರ್ಕ್ ಕಡೆಯಿಂದ ಹಾಗೂ ಇನ್ ಫೆಂಟ್ರಿ ರಸ್ತೆ ಮೂಲಕ ಮಣಿಪಾಲ್ ಸೆಂಟರ್ ಕಡೆಗೆ ಸಂಚರಿಸುವ ವಾಹನಗಳು ಇನ್ಫೆಂಟ್ರಿ ರಸ್ತೆಗೆ ಬಂದು ಸಫೀನಾ ಪ್ಲಾಜಾದ ಬಳಿ ಎಡತಿರುವು ಪಡೆದು ಮೈನ್ಗಾರ್ಡ್ ರಸ್ತೆ- ಆಲೀಸ್ ಸರ್ಕಲ್-ಡಿಸ್ಪೆನ್ಸರಿ ರಸ್ತೆ- ಕಾಮರಾಜ ರಸ್ತೆ ಮತ್ತು ಡಿಕೆನ್ಸನ್
ರಸ್ತೆ ಜಂಕ್ಷನ್ನಲ್ಲಿ ಬಲಕ್ಕೆ ತಿರುವು ಪಡೆದು ಕಾಮರಾಜ ರಸ್ತೆ ಜಂಕ್ಷನ್ ಬಳಿ ಎಡಕ್ಕೆ ತಿರುವು ಪಡೆದು ಮಣಿಪಾಲ್ ಸೆಂಟರ್ಗೆ ಹೋಗಬಹುದು.
ಮಣಿಪಾಲ್ ಸೆಂಟರ್ ಕಡೆಯಿಂದ ಬಿಆರ್ವಿ ಜಂಕ್ಷನ್ ಕಡೆ ಹೋಗುವ ವಾಹನಗಳು ಕಾಮರಾಜ ರಸ್ತೆ ಹಾಗೂ ಕಬ್ಬನ್ ರಸ್ತೆ ಜಂಕ್ಷನ್ನಲ್ಲಿ ಎಡ ತಿರುವು ಪಡೆದು, ಕಾವೇರಿ ಆರ್ಟ್ಸ್ ಹಾಗೂ ಕ್ರಾಪ್ಟ್ ಜಂಕ್ಷನ್ ನಲ್ಲಿ ಬಲಕ್ಕೆ ತಿರುಗಿ ಎಂ.ಜಿ ರಸ್ತೆ ಮುಖಾಂತರ ಮುಂದೆ ಸಾಗಬಹುದು.
ಪಾರ್ಕಿಂಗ್ ವ್ಯವಸ್ಥೆ ಎಲ್ಲೆಲ್ಲಿ? ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯವ್ಯಕ್ತಿಗಳ ಕಾರ್ಗಳಿಗೆ ಪಾಸ್ಗಳನ್ನು ವಿತರಿಸಲಾಗಿದೆ. ಹಳದಿ ಹಾಗೂ ಬಿಳಿ ಬಣ್ಣದ ಕಾರ್ ಪಾಸ್ ಹೊಂದಿದವರು ಕಬ್ಬನ್ ರಸ್ತೆಯ ಮೂಲಕ ಕ್ರಮವಾಗಿ ಪ್ರವೇಶ ದ್ವಾರ -1 ಹಾಗೂ ಪ್ರವೇಶ ದ್ವಾರ-2 ಮೂಲಕ ಒಳಪ್ರವೇಶಿಸಿ ಮೈದಾನದ ಪಶ್ಚಿಮ ಭಾಗದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಹಸಿರು ಪಾಸ್ ಹೊಂದಿದವರು ಹಾಗೂ ಪಾಸ್ ಇಲ್ಲದ ಕಾರುಗಳಿಗೆ ಶಿವಾಜಿ ನಗರ ಬಸ್ ನಿಲ್ದಾಣದ 1ನೇ ಮಹಡಿಯಲ್ಲಿ ನಿಲ್ಲಿಸಲು ಸೂಚಿಸಲಾಗಿದೆ. ಪಿಂಕ್ ಪಾಸ್ ಹೊಂದಿದವರು ಹಾಗೂ ಎಲ್ಲಾ ದ್ವಿಚಕ್ರ ವಾಹನ ಮೈನ್ಗಾರ್ಡ್ ಕ್ರಾಸ್ ರಸ್ತೆ, ಸಫೀನಾ ಪ್ಲಾಜಾ ಮುಂಭಾಗ, ಕಾಮರಾಜ ರಸ್ತೆಯ ಆರ್ಮಿ ಪಬ್ಲಿಕ್ ಶಾಲೆ ಮುಂಭಾಗ ಹಾಗೂ ಆರ್.ಎಸ್.ಐ ಗೇಟ್ ಮುಂಭಾಗ ನಿಲುಗಡೆ ಮಾಡಲು ಸೂಚಿಸಲಾಗಿದೆ.
ಶಾಲಾ ಮಕ್ಕಳನ್ನು ಹಾಗೂ ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರನ್ನು ಕರೆತರುವ ಎಲ್ಲಾ ಬಸ್ಗಳು ಕಬ್ಬನ್ ರಸ್ತೆಯ ಪ್ರವೇಶ ದ್ವಾರ-1 ರಲ್ಲಿ ಅವರನ್ನು ಇಳಿಸಿ ಆನಂತರ ಅನಿಲ್ಕುಂಬ್ಳೆ ವೃತ್ತದಿಂದ ಮೆಟ್ರೋ ನಿಲ್ದಾಣದವರೆಗೂ ಎಂ.ಜಿ ರಸ್ತೆಯ ಎಡ ಭಾಗದಲ್ಲಿ ನಿಲ್ಲಿಸಬೇಕು.
ನಾಲ್ಕು ದ್ವಾರಗಳಲ್ಲಿ ಪ್ರವೇಶ ಆದ್ಯತೆ ಮೈದಾನ ಪ್ರವೇಶಿಸಲು 4ಪ್ರವೇಶ ದ್ವಾರಗಳನ್ನು ಮಾಡಿದ್ದು, ಭದ್ರತೆ ದೃಷ್ಟಿಯಿಂದ ಎಲ್ಲಾ ದ್ವಾರಗಳ ಬಳಿ ಪೊಲೀಸರು ತಪಾಸಣೆ ನಡೆಸಲಿದ್ದು, ಎಲ್ಲರೂ ಸಹಕರಿಸುವಂತೆ ಪೊಲೀಸ್ ಆಯುಕ್ತರು ಟಿ.ಸುನೀಲ್ಕುಮಾರ್ ಮನವಿ ಮಾಡಿದ್ದಾರೆ.
ಜಿ-1 ಸ್ವಾತಂತ್ರ್ಯ ಹೋರಾಟಗಾರರು, ಗಣ್ಯ ವ್ಯಕ್ತಿಗಳು, ರಕ್ಷಣಾ ಇಲಾಖೆ ಅಧಿಕಾರಿಗಳು. ಜಿ-2 ಅತಿಗಣ್ಯ ವ್ಯಕ್ತಿಗಳು. ಜಿ-3 ಇತರೆ ಇಲಾಖೆ ಅಧಿಕಾರಿಗಳು, ನಿವೃತ್ತ ನಾಧಿಕಾರಿಗಳು, ಬಿಎಸ್ಎಫ್ ಯೋಧರು. ಜಿ-4 ಸಾರ್ವಜನಿಕರು.
ವಾಹನ ನಿಲುಗಡೆ ನಿಷೇಧಿತ ರಸ್ತೆಗಳು ಕಾಮರಾಜ ರಸ್ತೆ, ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿ ನಗರ ಬಸ್ ನಿಲ್ದಾಣವರೆಗೆ, ಕಬ್ಬನ್ ರಸ್ತೆ, ಸಿಟಿಒ ವೃತ್ತ, ಕೆ.ಆರ್. ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ರಸ್ತೆವರೆಗೂ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ