ನಾಡಿನ 63 ಗಣ್ಯರಿಗೆ ಪ್ರತಿಷ್ಠಿತ ರಾಜ್ಯೋತ್ಸವ ಪುರಸ್ಕಾರ
Team Udayavani, Nov 29, 2018, 6:00 AM IST
ಬೆಂಗಳೂರು: ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು, ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವ, ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್, ನಿರ್ದೇಶಕ ಭಾರ್ಗವ ಸೇರಿದಂತೆ 63 ಗಣ್ಯರಿಗೆ ಈ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಗುರುವಾರ ಸಂಜೆ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸಾಮಾನ್ಯವಾಗಿ ನವೆಂಬರ್ ಒಂದರಂದು ಪ್ರದಾನವಾಗುವ ರಾಜ್ಯೋತ್ಸವ ಪ್ರಶಸ್ತಿ ಈ ಬಾರಿ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜಾರಿಯಲ್ಲಿದ್ದ ಕಾರಣ, 28 ದಿನಗಳಷ್ಟು ತಡವಾಗಿ ಪ್ರಕಟವಾಗಿದೆ.
ಈ ಬಾರಿಯ ಪ್ರಶಸ್ತಿ ಪಟ್ಟಿಯಲ್ಲಿ ಹಲವು ವಿಶಿಷ್ಟ ವ್ಯಕ್ತಿಗ ಳಿರುವುದು ಗಮನ ಸೆಳೆಯುತ್ತಿದೆ. 1964ರಲ್ಲಿ ಒಲಿಂಪಿಕ್ ನಲ್ಲಿ ಭಾಗವಹಿಸಿದ್ದ ಅಥ್ಲೀಟ್ “ಜೆಂಟಲ್ ಮನ್ ಸ್ಪಿಂಟ್ಲರ್’ ಎಂದೇ ಖ್ಯಾತರಾಗಿದ್ದ ಕೋಲಾರದ ಕೆನೆತ್ ಲಾರೆನ್ಸ್ ಪೊವೆಲ್ ಅವರನ್ನು ಇಷ್ಟು ವರ್ಷಗಳ ಬಳಿಕ ರಾಜ್ಯ ಸರ್ಕಾರ ಗುರು ತಿ ಸಿರುವುದು ಗಮನಾರ್ಹ. ಹೆದ್ದಾರಿ ಇಂಜಿನಿಯರಿಂಗ್ ಕ್ಷೇತ್ರ ದಲ್ಲಿ ಪರಿಣಿತರಾಗಿರುವ ಬೆಂಗಳೂರು ಭಾರತೀಯ ವಿಜ್ಞಾನ ಕೇಂದ್ರದ ಪ್ರೊಫೆಸರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.
ಬೆಂಗಳೂರಿನಲ್ಲಿ ಆದಾಯ ತೆರಿಗೆ ಅಧಿಕಾರಿಯಾಗಿರುವ ಮೇಜರ್ ಪ್ರದೀಪ್ ಆರ್ಯ ಅವರು ಸೇನಾ ಕಮೀ ಷನ್x ಅಧಿಕಾರಿಯಾಗಿ ಸಲ್ಲಿಸಿರುವ ಸೇವೆಯನ್ನು ರಾಜ್ಯ ಸರ್ಕಾರ ಗುರುತಿಸಿದೆ. ಕಳೆದ ವರ್ಷ ವಷ್ಟೇ ಅವರಿಗೆ ಶೌರ್ಯ ಚಕ್ರ ಗೌರವ ಸಂದಿತ್ತು.
ವಿಶೇಷತೆ ಏನು?: ಈ ಬಾರಿಯ ರಾಜ್ಯೋತ್ಸವ ಪಟ್ಟಿಯಲ್ಲಿ ಹಲವು ವಿಶೇಷತೆಗಳು ಅಡಗಿದ್ದು ಕೌತುಕ ಹುಟ್ಟುಹಾಕಿದೆ. ನೂರು ವರ್ಷ ಪೂರೈಸಿದ ಹಿರಿಯರ ಜತೆಗೆ ಸ್ವತಂತ್ರ ಹೋರಾಟಗಾರರು ಇರುವುದು ವಿಶೇಷವಾಗಿದೆ. ಉಡುಪಿಯ ಹಿರಿಯ ಜೀವಿ ಹಾಗೂ ಡೋಲು ಕಲಾವಿದ ಗುರುವ ಕೊರಗ ನೂರು ವರ್ಷ ವಸಂತ ಪೂರೈಸಿದವರಾಗಿದ್ದಾರೆ. ಉಡುಪಿ ಜಿಲ್ಲೆಯ ಹಿರಿಯಡ್ಕದವರಾದ ಶತಾಯುಶಿ ಗುರುವ ಕೊರಗ ಚಿಕ್ಕವಯಸ್ಸಿನಲ್ಲೇ ಡೋಲು ಬಾರಿಸುವುದನ್ನು ತಮ್ಮ ಹಿರಿಯರಿಂದ ಕಲಿತ್ತಿದ್ದ ಗುರುವ ಕೊರಗ ಅದೇ ವೃತ್ತಿಯಲ್ಲಿ ಮುಂದುವರಿದರು.ಉಡುಪಿ ಜಿಲ್ಲೆಯ ಜಾನಪದ ಲೋಕದಲ್ಲಿ ವಿಶಿಷ್ಟ ರೀತಿಯ ಹೆಸರು ಸಂಪಾದಿಸಿದ್ದಾರೆ.
ಹಾಗೆಯೇ ಮದ್ದಳೆ ಮಾಂತ್ರಿಕ ಎಂದೇ ಖ್ಯಾತರಾದ ಹಿರಿಯಡ್ಕ ಗೋಪಾಲರಾಯರು ತೊಂಬತ್ತೂಂಬತ್ತು ವರ್ಷಕ್ಕೆ ಹೆಜ್ಜೆ ಇರಿಸಿರುವುದು ಮತ್ತೂಂದು ವಿಶೇಷವಾಗಿದೆ. ಯಕ್ಷಗಾನ ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿರುವ ಗೋಪಾಲ ರಾಯರು ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ್ದರು.
1919 ಡಿ.15ರಂದು ಜನಿಸಿದ ಅವರು ಹದಿನಾರನೇ ವಯಸ್ಸಿನಲ್ಲಿ ತಂದೆ ಶೇಷಗಿರಿ ರಾವ್ ಅವರಿಂದ ಮದ್ದಳೆ ಅಭ್ಯಾಸ ಮಾಡಿದ ಅವರು ಗುರು ನಾಗಪ್ಪ ಕಾಮತ್ ಅವರಿಂದ ನೃತ್ಯ ಅಭ್ಯಾಸ ಆರಂಭಿಸಿದರು.1934ರಲ್ಲಿ ಹಿರಿಯಡಕ ಮೇಳದಲ್ಲಿ ಪಾತ್ರಧಾರಿಯಾಗಿ ಪ್ರವೇಶಿಸಿದ ಅವರು 1936ರಲ್ಲಿ ಒತ್ತು ಮದ್ದಳೆಗಾರರಾಗಿ ನೇಮಕವಾದರು.
ಸ್ವಾತಂತ್ರ್ಯಹೋರಾಟಗಾರ ಬಸವರಾಜ ಬಿಸರಳ್ಳಿ ಇತ್ತೀಚೆಗಷ್ಟೇ ಹಂಪಿ ವಿ.ವಿ.ಯಿಂದ ಪಿಎಚ್ಡಿ ಮಾಡಲು ಪ್ರವೇಶ ಪರೀಕ್ಷೆ ಬರೆದಿದ್ದರು. 937ರಲ್ಲಿ ಮುಖ್ಯ ಮದ್ದಳೆಗಾರನಾಗಿ ಪೆರ್ಡೂರು ಮೇಳ ಪ್ರವೇಶಿಸಿದರು. 971ರಿಂದ 75ರ ವರೆಗೆ ಡಾ| ಶಿವರಾಮ ಕಾರಂತ ಅವರ ನಿರ್ದೇಶನದಂತೆ ಯಕ್ಷಗಾನ ಕೇಂದ್ರದಲ್ಲಿ ಅಧ್ಯಾಪಕರಾಗಿ ಸೇವೆ. 1972ರಲ್ಲಿ ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 1997ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ. ಒಟ್ಟು 8 ಸಂಘಗಳಿಗೆ ಯಕ್ಷಗಾನ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ.
ಇದ ಜತೆಗೆ 1969ರಲ್ಲಿ ಅಮೆರಿಕ ಹೈವಾರ್ಡ್ ವಿ.ವಿ. ಕ್ಯಾಲಿಫೋರ್ನಿಯಾದಲ್ಲಿ ಪೀಟರ್ ಕ್ಲಾಸ್ ಎಂಬವರಿಗೆ ಒಂದು ವರ್ಷ ಮದ್ದಳೆ ವಾದನ, ಯಕ್ಷಗಾನ ಕಲಿಸಿ ವಿದೇಶದಲ್ಲೂ ಯಕ್ಷಗಾನದ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ಈ ಭಾರಿಯ ಪ್ರಶಸ್ತಿ ಪುರಷ್ಕೃತರ ಪಟ್ಟಿಯಲ್ಲಿ ಬೆಂಗಳೂರಿಗೆ ಸಿಂಹಪಾಲು ಇರುವುದು ವಿಶೇಷವಾಗಿದೆ. ನಂತರ ಕಲಬುರ್ಗಿ, ಮೈಸೂರು ಸೇರಿದಂತೆ ಇನ್ನಿತರ ಜಿಲ್ಲೆಗಳು ಸ್ಥಾನಗಳಿಸಿವೆ.
ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗಾಗಿ ಸಾಕಷ್ಟು ಪೈಪೋಟಿ ನಡೆದಿತ್ತು. ಸುಮಾರು 1600ಕ್ಕೂ ಅಧಿಕ ಅರ್ಜಿಗಳು ವಿವಿಧ ವಯದಿಂದ ಬಂದಿದ್ದವು.
ಪ್ರಶಸ್ತಿ ಪುರಸ್ಕೃತರ ಪಟ್ಟಿ
ಸಾಹಿತ್ಯ ಕ್ಷೇತ್ರ: ಕೋಲಾರದ ಎಂ.ಎಸ್. ಪ್ರಭಾಕರ್ (ಕಾಮರೂಪಿ), ಹಸನ್ ನಯೀಂ ಸುರಕೋಡ್, (ಬೆಳಗಾವಿ), ಚ.ಸರ್ವಮಂಗಳ,( ಮೈಸೂರು),ಚಂದ್ರಶೇಖರ ತಾಳ್ಯ.(ಚಿತ್ರದುರ್ಗ).
ರಂಗಭೂಮಿ ಕ್ಷೇತ್ರ: ಎಸ್.ಎನ್. ರಂಗಸ್ವಾಮಿ,(ದಾವಣಗೆರೆ), ಪುಟ್ಟಸ್ವಾಮಿ (ರಾಮನಗರ), ಪಂಪಣ್ಣ ಕೋಗಳಿ (ಬಳ್ಳಾರಿ)
ಸಂಗೀತ ಕ್ಷೇತ್ರ: ಅಣ್ಣು ದೇವಾಡಿಗ (ದ.ಕ),
ನೃತ್ಯ ಕ್ಷೇತ್ರ: ಎಂ.ಆರ್. ಕೃಷ್ಣಮೂರ್ತಿ (ಬೆಂಗಳೂರು), ಜಾನಪದ ಕ್ಷೇತ್ರ: ಗುರುವ ಕೊರಗ (ಉಡುಪಿ), ಗಂಗಹುಚ್ಚಮ್ಮ (ತುಮಕೂರು), ಚನ್ನಮಲ್ಲೇಗೌಡ (ಚಾಮರಾಜನಗರ), ಶರಣಪ್ಪ ಬೂತೇರ (ಬೀದರ್), ಶಂಕ್ರಮ್ಮ ಮಹಾದೇವಪ್ಪ (ಕಲಬುರ್ಗಿ), ಬಸವರಾಜ ಅಲಗೂಡ (ಕಲಬುರ್ಗಿ), ಚೂಡಾಮಣಿ ರಾಮಚಂದ್ರ (ಶಿವಮೊಗ್ಗ), ಶಿಲ್ಪಕಲಾ ಕ್ಷೇತ್ರ: ಯಮನಪ್ಪ ಚಿತ್ರಗಾರ (ಗದಗ),ಬಸಣ್ಣ ಕಾಳಪ್ಪ ಕಂಚಗಾರ (ಯಾದವಗಿರಿ),
ಚಿತ್ರಕಲಾ ಕ್ಷೇತ್ರ: ಬಸವರಾಜ ರೇವಣ್ಣಸಿದ್ದಪ್ಪ ಉಪ್ಪಿನ (ಕಲಬುರ್ಗಿ),
ಕ್ರೀಡಾ ಕ್ಷೇತ್ರ: ಕೆನೆತ್ ಪೊವೆಲ್ (ಕೋಲಾರ), ಎಸ್.ವಿ. ವಿನಯ್ (ಕೊಡಗು), ಆರ್. ಚೇತನ್ (ಹಾಸನ).
ಯಕ್ಷಗಾನ ಕ್ಷೇತ್ರ: ಹಿರಿಯಡ್ಕ ಗೋಪಾಲ ರಾವ್ (ಉಡುಪಿ), ಸೀತಾರಾಮ ಕುಮಾರ ಕಟೀಲು (ದ.ಕ).
ಬಯಲಾಟ ಕ್ಷೇತ್ರ: ಯಲ್ಲವ್ವಾ ರೊಡ್ಡಪ್ಪನವರ (ಬಾಗಲಕೋಟೆ), ಭೀಮರಾಯ ಬೋರಗಿ (ವಿಜಯಪುರ).
ಚಲನಚಿತ್ರ ಕ್ಷೇತ್ರ: ಭಾರ್ಗವ (ಮೈಸೂರು), ಜೈಜಗದೀಶ್ (ಕೊಡಗು), ರಾಜನ್ (ಮೈಸೂರು), ದತ್ತುರಾಜ್ (ಬೆಂಗಳೂರು).
ಶಿಕ್ಷಣ ಕ್ಷೇತ್ರ: ಗೀತಾ ರಾಮಾನುಜಂ (ಮೈಸೂರು), ಎ.ವಿ.ಎಸ್.ಮೂರ್ತಿ (ಬೆಂಗಳೂರು),
ಡಾ.ಕೆ.ವಿ.ಗೋಪಾಲ ಕೃಷ್ಣ (ಬೆಂಗಳೂರು), ಶಿವಾನಂದ ಕೌಜಲಗಿ ( ಬೆಳಗಾವಿ).
ವಿಜ್ಞಾನ ತಂತ್ರಜ್ಞಾನ ಕ್ಷೇತ್ರ: ಪ್ರೊ.ಸಿ.ಇ.ಜಿ.ಜಸ್ಟೋ (ಬೆಂಗಳೂರು),
ಸಂಕೀರ್ಣ: ಆರ್.ಎಸ್.ರಾಜಾರಾಂ (ದ.ಕ), ಮೇಜರ್ ಪ್ರದೀಪ್ ಆರ್ಯ ( ಬೆಂಗಳೂರು), ಸಿ.ಕೆ.ಜೋರಾಪುರ (ಬೆಳಗಾವಿ),ನರಸಿಂಹಯ್ಯ ( ಬೆಂಗಳೂರು), ಡಿ.ಸುರೇಂದ್ರಕುಮಾರ್ (ದ.ಕ), ಪಿ.ಬಿ.ಶಾಂತಪ್ಪನವರ್ (ಕಲಬುರ್ಗಿ), ನಮಶಿವಾಯಂ ರೇಗುರಾಜ್ (ಬೆಂಗಳೂರು), ಪಿ.ರಾಮದಾಸ್ (ದ.ಕ), ಎಂ.ಜೆ.ಬ್ರಹ್ಮಯ್ಯ (ಚಿಕ್ಕಬಳ್ಳಾಪುರ).
ಪತ್ರಿಕೋದ್ಯಮ ಕ್ಷೇತ್ರ: ಜಿ.ಎನ್.ರಂಗನಾಥರಾವ್ ( ಬೆಂಗಳೂರು), ಬಸವರಾಜಸ್ವಾಮಿ (ರಾಯಚೂರು), ಅಮ್ಮೆಂಬಳ ಆನಂದ (ಉತ್ತರ ಕನ್ನಡ).
ಸಹಕಾರ ಕ್ಷೇತ್ರ: ಸಿ.ರಾಮು( ರಾಮನಗರ).
ಸಮಾಜ ಸೇವೆ: ಆನಂದ್ ಸಿ.ಕುಂದರ್ (ಉಡುಪಿ), ರಾಚಪ್ಪ ಹಡಪದ (ಧಾರವಾಡ), ಕೃಷ್ಣಕುಮಾರ ಪೂಂಜ (ದ.ಕ),
ಮಾರ್ಗರೇಟ್ ಆಳ್ವ ( ಉತ್ತರ ಕನ್ನಡ).
ಕೃಷಿ ಕ್ಷೇತ್ರ: ಮಹಾದೇವಿ ಅಣ್ಣಾರಾವ್ ವಣದೆ (ಕಲಬುರ್ಗಿ), ಮೂಕಪ್ಪ ಪೂಜಾರ್ (ಹಾವೇರಿ),
ಪರಿಸರ ಕ್ಷೇತ್ರ: ಕಲ್ಮನೆ ಕಾಮೇಗೌಡ (ಮಂಡ್ಯ).
ಸಂಘ ,ಸಂಸ್ಥೆ: ರಂಗದೊರೆ ಸ್ಮಾರಕ ಆಸ್ಪತ್ರೆ (ಬೆಂಗಳೂರು).
ವೈದ್ಯಕೀಯ ಕ್ಷೇತ್ರ: ಡಾ.ಜೆ.ವಿ.ನಾಡಗೌಡ ( ಬೆಂಗಳೂರು), ಡಾ.ಸೀತಾರಾಮ ಭಟ್ (ಬೆಂಗಳೂರು), ಪಿ.ಮೋಹನ್ ರಾವ್ (ಬೆಂಗಳೂರು), ಡಾ.ಎಂ.ಜಿ.ಗೋಪಾಲ್ (ಬೆಂಗಳೂರು).
ನ್ಯಾಯಾಂಗ ಕ್ಷೇತ್ರ: ಎಚ್.ಎಲ್.ದತ್ತು (ಚಿಕ್ಕಮಗಳೂರು).
ಹೊರನಾಡ ಸೇವೆ: ಡಾ.ಎ.ಎ. ಶೆಟ್ಟಿ (ಯು.ಕೆ).
ಸ್ವಾತಂತ್ರ್ಯ ಹೋರಾಟ : ಬಸವರಾಜ ಬಿಸರಳ್ಳಿ ( ಕೊಪ್ಪಳ).
ರಾಜ್ಯೋತ್ಸವ ಪ್ರಶಸ್ತಿ ವಿಜೇತರ ನುಡಿ
ಚಿತ್ರರಂಗದ ಆತ್ಮೀಯ ಗೆಳೆಯ ಅಂಬರೀಶ್ನನ್ನು ಕಳೆದುಕೊಂಡು ಕಳೆದ ಮೂರು ದಿನಗಳಿಂದ ದುಃಖದಲ್ಲಿದೆ. ಇದೇ ಸಂದರ್ಭದಲ್ಲಿ ಸಂತೋಷದ ಸುದ್ದಿಯೊಂದು ಬಂದಿದೆ. ಏನೆನ್ನಬೇಕೋ ಗೊತ್ತಾಗುತ್ತಿಲ್ಲ. ಕಳೆದ 44 ವರ್ಷಗಳಿಂದ, ಸುಮಾರು 550ಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ಆದರೆ ಯಾವತ್ತೂ ಯಾವುದೇ ಪ್ರಶಸ್ತಿ-ಪುರಸ್ಕಾರಗಳನ್ನು ನಿರೀಕ್ಷೆ ಮಾಡಿದವನಲ್ಲ. ರಾಷ್ಟ್ರ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಅವಾಗಿಯೇ ಹುಡುಕಿಕೊಂಡು ಬಂದಿವೆ. ಈಗ ಆ ಸಾಲಿಗೆ ಮತ್ತೂಂದು ಪ್ರಶಸ್ತಿಯ ಹೆಸರು ಸೇರ್ಪಡೆಯಾಗಿದೆ. ಈ ಪ್ರಶಸ್ತಿ ಪಡೆದುಕೊಳ್ಳುವ ಮಟ್ಟಕ್ಕೆ ನನ್ನನ್ನು ಬೆಳೆಸಿದ ಎಲ್ಲರಿಗೂ ಆಭಾರಿಯಾಗಿದ್ದೇನೆ
– ಜೈ ಜಗದೀಶ್, ಹಿರಿಯ ನಟ
ಪ್ರತಿಬಾರಿ ರಾಜ್ಯೋತ್ಸವ ಪಟ್ಟಿಯಲ್ಲಿ ಬೇರೆಯವರ ಹೆಸರು ಬರುವುದನ್ನು ನೋಡುತ್ತಿದ್ದೆ. ಈ ವರ್ಷ ಆ ಪಟ್ಟಿಯಲ್ಲಿ ನನ್ನ ಹೆಸರಿರುವುದು ಖುಷಿ ತಂದಿದೆ. ಪ್ರಶಸ್ತಿ ಸಿಗಬೇಕು ಅಂದ್ರೆ ಶಿಫಾರಸ್ಸು ಇರಬೇಕು ಅಂತ ಎಲ್ಲರೂ ಹೇಳುತ್ತಿದ್ದರು. ಆದ್ರೆ ನಾನು ಪ್ರಶಸ್ತಿ, ಶಿಫಾರಸ್ಸು ಅಂತ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ನನ್ನ ಕೆಲಸ ಮಾಡಿಕೊಂಡಿದ್ದೆ. ಈ ವರ್ಷ ಆ ಪ್ರಶಸ್ತಿ ನನೆY ಬಂದಿದೆ. ಇಷ್ಟು ವರ್ಷ ಚಿತ್ರರಂಗದಲ್ಲಿ ನನ್ನ ಕೆಲಸವನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದ ಆಯ್ಕೆ ಸಮಿತಿಗೂ, ಸರ್ಕಾರಕ್ಕೂ ಧನ್ಯವಾದಗಳು. ಎಲ್ಲದಕ್ಕಿಂತ ಹೆಚ್ಚಾಗಿ ಈ ಇಷ್ಟು ವರ್ಷ ನನಗೆ ಬದುಕು ಕೊಟ್ಟ ಚಿತ್ರರಂಗಕ್ಕೆ ಋಣಿಯಾಗಿದ್ದೇನೆ.
– ಭಾರ್ಗವ, ಹಿರಿಯ ನಿರ್ದೇಶಕ
ಡೋಲು ಬಾರಿಸುವುದು ಮತ್ತು ಸಿದ್ಧಪಡಿಸುವುದು ನಮ್ಮ ಕುಲ ಕಸುಬು. ಈ ಕ್ಷೇತ್ರದಲ್ಲಿನ ಕಲಾ ಸೇವೆಯನ್ನು ಗುರುತಿಸಿ, ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿರುವುದು ಸಂತಸ ತಂದಿದೆ.
– ಗುರುವ ಕೊರಗ, ಜಾನಪದ ಕಲಾವಿದ ಉಡುಪಿ.