ಉದ್ಯಮಿಗಳಿಂದ ಸ್ಪಂದನೆ: ಜಾರ್ಜ್
Team Udayavani, Aug 4, 2018, 6:30 AM IST
ಬೆಂಗಳೂರು: ಕೈಗಾರಿಕೆ ಸ್ಥಾಪನೆ ದೃಷ್ಟಿಯಿಂದ ಬೆಂಗಳೂರು ಇನ್ನಷ್ಟು ಬೆಳೆಯುವುದು ಸೂಕ್ತವಲ್ಲ ಎಂಬುದು ಸರ್ಕಾರದ ನಿಲುವು. ಆ ಹಿನ್ನೆಲೆಯಲ್ಲಿ 2 ಹಾಗೂ 3ನೇ ಹಂತದ ನಗರಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುತ್ತಿದ್ದು, ಉದ್ಯಮಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಬೃಹತ್ ಕೈಗಾರಿಕೆ ಮತ್ತು ಐಟಿ, ಬಿಟಿ,
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಬೆಂಗಳೂರು ಅರಮನೆಯಲ್ಲಿ ಆಯೋಜಿಸಲಿರುವ “ಬೆಂಗಳೂರು ಟೆಕ್ ಸಮ್ಮಿಟ್-2018′ ಕುರಿತಂತೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ಅವರು ಮಾತನಾಡಿದರು.
ಕೈಗಾರಿಕಾ ಕ್ಷೇತ್ರದಲ್ಲಿ ಬೆಂಗಳೂರನ್ನು ಇನ್ನಷ್ಟು ಬೆಳೆಸುವುದು ಸೂಕ್ತವೆನಿಸುತ್ತಿಲ್ಲ. ಜ್ಞಾನ ಸಂಬಂಧಿತ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಂಬಂಧಿತ ಉದ್ಯಮಗಳು ಬೆಂಗಳೂರಿನಿಂದ ಹೊರ ಹೋಗುವುದಿಲ್ಲ. ಆದರೆ ಉಳಿದ ಉದ್ಯಮಗಳನ್ನು ರಾಜ್ಯದ ಇತರೆ ನಗರಗಳಲ್ಲಿ ಸ್ಥಾಪಿಸಲು ಅವಕಾಶವಿದ್ದು, ಇದನ್ನು ಉತ್ತೇಜಿಸಲಾಗುತ್ತಿದೆ ಎಂದರು.
ಏಷಿಯನ್ ಪೈಂಟ್ಸ್ ಕಂಪನಿಯು ಮೈಸೂರಿನಲ್ಲಿ 2,500 ಕೋಟಿ ರೂ. ಹೂಡಿಕೆ ಮಾಡಿ ಉದ್ಯಮ ಸ್ಥಾಪಿಸುತ್ತಿದೆ. ಬೆಳಗಾವಿ, ಮಂಗಳೂರು, ಹುಬ್ಬಳ್ಳಿ ಸೇರಿ ಇತರೆ ನಗರಗಳಲ್ಲೂ ಕೈಗಾರಿಕೆ ಸ್ಥಾಪನೆಗೆ ಪೂರಕ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರು- ಚೆನ್ನೈ ಕೈಗಾರಿಕಾ ಕಾರಿಡಾರ್ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.ಅದರಂತೆ ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ ಶೇ.50ರಷ್ಟು ಭರಿಸ ಬೇಕಾಗುತ್ತದೆ. ಯೋಜನೆಗೆ 10,000 ಎಕರೆ ಭೂಮಿ
ಅಗತ್ಯವಿದ್ದು, ಈಗಾಗಲೇ 6,000 ಎಕರೆ ಲಭ್ಯವಿದೆ. ಬಾಕಿ 4,000 ಎಕರೆ ಭೂಮಿ ಸ್ವಾಧೀನಪಡಿಸಿ ಕೊಳ್ಳಬೇಕಿದೆ. ಕೇಂದ್ರ ಸರ್ಕಾರವು 3,000 ಕೋಟಿ ರೂ. ವೆಚ್ಚದಲ್ಲಿ ಮೂಲ ಸೌಕರ್ಯ ಕಲ್ಪಿಸಲಿದೆ ಎಂದು ಹೇಳಿದರು.
ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ನಿರ್ದೇಶಕ ಶೈಲೇಂದ್ರ ಕುಮಾರ್ ತ್ಯಾಗಿ, ಮೈಂಡ್ ಟ್ರೀ ಸಿಇಒ ಕೃಷ್ಣ ಕುಮಾರ್ ನಟರಾಜನ್ ಇತರರಿದ್ದರು.
ವಿಮಾನಯಾನ
ಸಂಪರ್ಕ ಸೇವೆ
ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕಾಭಿವೃದಿಟಛಿ ದೃಷ್ಟಿಯಿಂದ ವಿಮಾನಯಾನ ಸಂಪರ್ಕ ಸೇವೆ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಸಚಿವ ಜಾರ್ಜ್ ಹೇಳಿದರು. ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗೆ ಕೇಂದ್ರ ಸರ್ಕಾರದ ಅನುಮತಿ ದೊರಕಿದ್ದು, ಸದ್ಯದಲ್ಲೇ ವಿಸ್ತರಣೆ ಕಾರ್ಯ ಆರಂಭವಾಗುವ ನಿರೀಕ್ಷೆಯಿದೆ. ಹುಬ್ಬಳ್ಳಿ ನಿಲ್ದಾಣದಿಂದ ವಿಮಾನಗಳ ಹಾರಾಟ ಸೇವೆ ಹೆಚ್ಚಾಗಿದೆ. ಕಲಬುರಗಿ ವಿಮಾನನಿಲ್ದಾಣ ಕಾರ್ಯಾರಂಭಕ್ಕೆ ಸಿದಟಛಿತೆ ನಡೆದಿದೆ ಎಂದು ಹೇಳಿದರು.