ನರೇಗಾ: ಕೇಂದ್ರದಿಂದ 1227 ಕೋಟಿ ರೂ. ಬಾಕಿ
Team Udayavani, Feb 10, 2018, 6:30 AM IST
ವಿಧಾನಪರಿಷತ್ತು: ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ 1,227 ಕೋಟಿ ರೂ.
ಎರಡು ವರ್ಷಗಳ ಬಾಕಿ ಹಣ ಬಿಡುಗಡೆಯಾಗಬೇಕಿದ್ದು, ರಾಜ್ಯ ಸರ್ಕಾರದಿಂದ ಯಾವುದೇ ವಿಳಂಬವಾಗಿಲ್ಲ ಎಂದು ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.
ಪಕ್ಷೇತರ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಪ್ರಸ್ತಾಪಿಸಿದ ವಿಷಯಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಪರವಾಗಿ ಉತ್ತರಿಸಿದ ಅವರು, ನರೇಗಾ ಅಡಿಯಲ್ಲಿ ಉದ್ಯೋಗ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ. ಅದಕ್ಕೆ ಪೂರಕವಾಗಿ ಬಳಕೆ ಪ್ರಮಾಣ ಪತ್ರ ಸಲ್ಲಿಸಿದ್ದರೂ ಕೇಂದ್ರದಿಂದ ಅನುದಾನ ಬಿಡುಗಡೆಯಾಗಿಲ್ಲ ಎಂದರು.
ಕಳೆದ ಎರಡು ವರ್ಷಗಳಿಂದ 1227 ಕೋಟಿ ರೂ. ಮೊತ್ತವನ್ನು ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಇದರಿಂದ ತೊಂದರೆ ಯಾಗಿರುವುದನ್ನು ಒಪ್ಪಿಕೊಳ್ಳಲಾಗುವುದು. ಆದರೆ ಇದರಲ್ಲಿ ರಾಜ್ಯ ಸರ್ಕಾರದ ಲೋಪವಿಲ್ಲ.ಪಾರದರ್ಶಕತೆ ಕಾಯ್ದುಕೊಳ್ಳುವ ಕಾರ್ಯದಿಂದ ವಿಳಂಬವಾಗಿದೆ ಎಂದು ತಿಳಿಸಿದರು.
15 ದಿನದಲ್ಲಿ ಪಟ್ಟಿ ಬಿಡುಗಡೆ:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ 815 ಪಿಡಿಒ ನೇಮಕ ಪ್ರಕ್ರಿಯೆ ನಡೆದಿದ್ದು, 15 ದಿನದಲ್ಲಿ
ನೇಮಕಾತಿ ಪೂರ್ವ ಪಟ್ಟಿ (ಪ್ರಾವಿಷನ್ ಲಿಸ್ಟ್) ಪ್ರಕಟಿಸಲಾಗುವುದು ಎಂದು ಸಚಿವ ಆರ್.ವಿ.ದೇಶಪಾಂಡೆ ಭರವಸೆ ನೀಡಿದರು.
ಕಾಂಗ್ರೆಸ್ ಸದಸ್ಯೆ ಮೋಟಮ್ಮ ಪರವಾಗಿ ಐವಾನ್ ಡಿಸೋಜಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ದೇಶಪಾಂಡೆ, ಪಿಡಿಒ ಹುದ್ದೆಗಳನ್ನು ಶೇ.65ರಷ್ಟು ನೇರ ನೇಮಕ ಹಾಗೂ ಶೇ.35ರಷ್ಟು ಬಡ್ತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತದೆ.
ಈಗಾಗಲೇ 815 ಪಿಡಿಒಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇಮಕಾತಿ ಪ್ರಕ್ರಿಯೆ ನಡೆದಿದ್ದು, 15 ದಿನದಲ್ಲಿ ಪ್ರಾವಿಷನ್ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯ 227 ಗ್ರಾಪಂಗಳಲ್ಲಿ 61 ಹುದ್ದೆ ಖಾಲಿಯಿದ್ದು, 25 ಹುದ್ದೆಗಳನ್ನು ಮುಂಬಡ್ತಿ ಕೋಟಾದಡಿ
ಭರ್ತಿ ಮಾಡಲಾಗುವುದು ಎಂದರು.
ಇದಕ್ಕೆ ಪ್ರತಿಯಾಗಿ ಕೋಟ ಶ್ರೀನಿವಾಸ ಪೂಜಾರಿ, ಪಿಡಿಒ ಸೇರಿ ಇಲಾಖೆ ವತಿಯಿಂದ 2000 ಹುದ್ದೆ ಭರ್ತಿ ಪ್ರಕ್ರಿಯೆ ಮುಗಿದಿದ್ದರೂ ನೇಮಕ ಮಾಡಿಕೊಂಡಿಲ್ಲ. ಒಂದೂವರೆ ವರ್ಷದಿಂದ ಇದೇ ರೀತಿಯ ಉತ್ತರ ನೀಡುತ್ತಿರುವುದು ಸರಿಯಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪಾರದರ್ಶಕವಾಗಿ ನೇಮಕ ಪ್ರಕ್ರಿಯೆ ನಡೆಸುವಾಗ ತುಸು ವಿಳಂಬವಾಗುತ್ತದೆ. 15 ದಿನದಲ್ಲಿ ಪ್ರಾವಿಷನ್ ಪಟ್ಟಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.