ಸಕಾಲ ಯೋಜನೆಯ ಪ್ರಚಾರ ಅಗತ್ಯ: ಸಚಿವ ಸುರೇಶ್ ಕುಮಾರ್
Team Udayavani, Oct 28, 2019, 1:03 PM IST
ಬೆಂಗಳೂರು : ಸಕಾಲ ಯೋಜನೆ ಬಗ್ಗೆ ಹೆಚ್ಚು ಪ್ರಚಾರ ಕೊಡಬೇಕು, ಸಕಾಲಕ್ಕಾಗಿ ಸಹಾಯವಾಣಿ ಆರಂಭ ಮಾಡಲಾಗಿದೆ. ಅಲ್ಲದೇ ಸೆಪ್ಟೆಂಬರ್ ನಲ್ಲಿ ಸುಮಾರು 60 ಸಾವಿರ ಕರೆ ಸ್ವೀಕಾರ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ನಗರದಲ್ಲಿ ಮಾತಾನಾಡಿಸ ಅವರು ಸಕಾಲ ಯೋಜನೆಯ ಕರೆ ಸ್ವೀಕಾರದಲ್ಲಿ ಬೆಂಗಳೂರು ಇದುವೆರಗೂ ಸುಮಾರು 16327 ಕರೆ ಸ್ವೀಕಾರ ಮಾಡಿದೆ ಹಾಗೂ ಅದು ಯೋಜನೆಯ ಯಶಸ್ವಿಯಲ್ಲಿ ಮುಂದೆ ಇದೆ ಎಂದು ಹೇಳಿದರು. ಪ್ರತಿ ತಿಂಗಳು ಸಕಾಲದ ಬಗ್ಗೆ ಆಯಾ ನಗರದ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡುತ್ತೇವೆ,ಡಿಸಿಗಳು, ಸಿಇಓಗಳು ಜಿಲ್ಲಾ ಮಟ್ಟದಲ್ಲಿ ರಿವ್ಯೂ ಮಾಡಬೇಕು. ತಹಶೀಲ್ದಾರ ತಾಲೂಕು ಮಟ್ಟದಲ್ಲಿ ರಿವ್ಯೂ ಮಾಡಬೇಕು ಎಂದರು.
“ಸೇವಾ ಸಿಂಧು” ಎನ್ನುವ ಯೋಜನೆಯನ್ನು ಹೊಸದಾಗಿ ಪ್ರಾರಂಭ ಮಾಡಿಲಾಗಿದೆ ಆನ್ ಲೈನ್ ನಲ್ಲಿ ಇದರ ಸೇವೆಯನ್ನು ಒದಗಿಸಲಾಗುತ್ತಿದೆ. 43 ಇಲಾಖೆಯ 301 ಸೇವೆಗಳನ್ನು ಸೇವಾ ಸಿಂಧು ಯೋಜನೆಯಲ್ಲಿ ಸೇರಿಸಲಾಗಿದೆ. ಸೇವಾ ಸಿಂಧುಗಾಗಿ 8 ಸಾವಿರ ಕೇಂದ್ರಗಳನ್ನ ರಾಜ್ಯಾದ್ಯಂತ ಪ್ರಾರಂಭ ಮಾಡಲಾಗಿದೆ. ಸೇವಾ ಸಿಂಧು ಜೊತೆಗೆ ಬೆಂಗಳೂರು ಒನ್, ಕರ್ನಾಟಕ ಒನ್ ಕೂಡಾ ಸೇರಿಸುತ್ತೇವೆ ಎಂದು ಹೇಳಿದರು.
“ಜನ ಸೇವಕ” ಅನ್ನುವ ಹೊಸ ಕಾರ್ಯಕ್ರಮ ಅನುಷ್ಠಾನ ಮಾಡುತ್ತೇವೆ. ಮನೆ ಮನೆಗೆ ಹೋಗಿ ಸೇವೆ ಒದಗಿಸೋದು ಜನ ಸೇವಕ ಕಾರ್ಯಕ್ರಮದ ಉದ್ದೇಶ ಇದನ್ನು ಸದ್ಯ ಪ್ರಾಯೋಗಿಕವಾಗಿ ದಾಸರ ಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಜಾರಿ ಮಾಡಲಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಬೆಂಗಳೂರಿನ ಹಲವು ಕ್ಷೇತ್ರಗಳಿಗೆ ವಿಸ್ತರಣೆ ಮಾಡುತ್ತೇವೆ ಎಂದು ಯೋಜನೆಯ ಬಗ್ಗೆ ಮಾಹಿತಿ ಕೊಟ್ಟರು.
ಮುಂದುವರೆದು ಮಾತಾನಾಡಿದ ಅವರು ನಾನು ಸಚಿವ ಸಂಪುಟ ವಿಸ್ತರಣೆ ವೇಳೆ ಯಡಿಯೂರಪ್ಪ ಮನೆಗೆ ಹೋಗಿದ್ದೆ. ನಾನು ಸಿಎಂ ಬಳಿ ಹೋಗಿ ನನಗೆ ಯಾವುದೇ ಖಾತೆ ಬೇಕಾದರೂ ಕೊಡಿ ಅದರ ಜೊತೆ ಸಕಾಲ ಕೊಡಿ ಅಂತ ಕೇಳಿದ್ದೆ. ಇದು ನನಗೆ ಇಷ್ಟವಾದ ಖಾತೆ. ಹೀಗಾಗಿ ಕೇಳಿ ಪಡೆದಿದ್ದೆ. ಪ್ರಧಾನಿ ಮೋದಿ ಅವ್ರು ನಮ್ಮ ಸಕಾಲದ ಮಾಹಿತಿ ಪಡೆಯುತ್ತಿದ್ದಾರೆ. ದೇಶದ ಮಟ್ಟದಲ್ಲೂ ಸಕಾಲ ಯೋಜನೆ ಅನುಷ್ಠಾನ ಆಗುವ ಸಾಧ್ಯತೆ ಇದೆ.