ಸಿದ್ದು ಗರಂ, ಎಚ್ಡಿಕೆ ಬೇಸರ ವೇಣುಗೋಪಾಲ್ ತಲೆಬಿಸಿ
Team Udayavani, Sep 17, 2018, 6:55 AM IST
ಬೆಂಗಳೂರು:ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ “ಗರಂ’ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ “ಬೇಸರ’ದ ಮಾತುಗಳಿಂದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ತಲೆಬಿಸಿ ಮಾಡಿಕೊಳ್ಳುವಂತಾಗಿದೆ.
ಕಾವೇರಿ ನಿವಾಸದಲ್ಲಿ ವೇಣುಗೋಪಾಲ್ ಭೇಟಿ ಮಾಡಿದ ಸಂದರ್ಭದಲ್ಲಿ ವಿಷಯ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಸಮ್ಮಿಶ್ರ ಸರ್ಕಾರ ಕೆಡವಲು ತಮ್ಮ ಬೆಂಬಲಿಗರೇ ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ನವರೇ ಬಿಂಬಿಸುತ್ತಿರುವ ಬಗ್ಗೆ ಕೆ.ಸಿ.ವೇಣುಗೋಪಾಲ್ ಮುಂದೆ “ಗರಂ’ಆಗಿ ಮಾತನಾಡಿದರು. ಎಲ್ಲದಕ್ಕೂ ನಾನೇ ಕಾರಣ ಎಂಬುದು ಎಷ್ಟು ಸರಿ. ಸರ್ಕಾರದ ನೇತೃತ್ವ ವಹಿಸಿರುವವರು ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯಬೇಕಲ್ಲವೇ ಎಂದರು.
ಪಾಲುದಾರ ಪಕ್ಷದ ಪ್ರತಿನಿಧಿಯಾಗಿ ಸರ್ಕಾರದಲ್ಲಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕಾಂಗ್ರೆಸ್ ಶಾಸಕರ ಮನವಿಗಳಿಗೆ ಸ್ಪಂದಿಸಬೇಕಲ್ಲವೇ ಎಂದು ಪ್ರಶ್ನಿಸಿದರು.ನಾನು ವಿದೇಶ ಪ್ರವಾಸ ಹೋದರೂ, ಕ್ಷೇತ್ರ ಭೇಟಿಗೆ ಹೋದರೂ ಅದಕ್ಕೆ ಒಂದು ಕಥೆ ಕಟ್ಟಲಾಗುತ್ತಿದೆ. ಇದು ನನಗೂ ನೋವು ತಂದಿದೆ ಎಂದು ಹೇಳಿದರು ಎನ್ನಲಾಗಿದೆ.
ಎಚ್ಡಿಕೆ ಅಸಮಾಧಾನ
ಮತ್ತೂಂದೆಡೆ ಶನಿವಾರ ತಡರಾತ್ರಿ ಕುಮಾರಕೃಪ ಅತಿಥಿಗೃಹದಲ್ಲಿ ಭೇಟಿ ಮಾಡಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹ, ಕಾಂಗ್ರೆಸ್ ನಾಯಕರಿಂದಲೇ ಗೊಂದಲ ಉಂಟಾಗುತ್ತಿದೆ. ಪಕ್ಷದ ಆಂತರಿಕ ಸಮಸ್ಯೆಗೂ ಸಮ್ಮಿಶ್ರ ಸರ್ಕಾರಕ್ಕೂ ಸಂಬಂಧ ಕಲ್ಪಿಸಲಾಗುತ್ತಿದೆ. ಸಾಲ ಮನ್ನಾದಂತಹ ಮಹತ್ವದ ತೀರ್ಮಾನ ಕೈಗೊಂಡರೂ ಬಂಡಾಯದ ಹೇಳಿಕೆ, ಗೊಂದಲಗಳಿಂದಾಗಿ ಅದು ಮರೆಯಾಗಿದೆ ಎಂದು ಅಸಮಾಧಾನ ತೋಡಿಕೊಂಡರು.
ಸಮ್ಮಿಶ್ರ ಸರ್ಕಾರ ರಚನೆಗೆ ಕಾಂಗ್ರೆಸ್ ಪಕ್ಷವೇ ಮುಂದಾಗಿ ಪ್ರಸ್ತಾವನೆ ನೀಡಿತು. ನಾವು ಅದಕ್ಕೆ ಒಪ್ಪಿದೆವು. ಆದರೆ, ಕೆಲವು ನಾಯಕರು ದಿನ ಬೆಳಗಾದರೆ ಸರ್ಕಾರ ಬೀಳಿಸುವ ಧಾಟಿಯಲ್ಲೇ ಮಾತನಾಡುತ್ತಿದ್ದಾರೆ. ಎಷ್ಟು ದಿನ ಹೀಗೆ ಮುಂದುವರಿಯುವುದು ಎಂದು ಪ್ರಶ್ನಿಸಿದರು ಎನ್ನಲಾಗಿದೆ.ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಹ ವೇಣುಗೋಪಾಲ ಜತೆ ದೂರವಾಣಿ ಮೂಲಕ ಚರ್ಚಿಸಿದರು ಎಂದು ಹೇಳಲಾಗಿದೆ.
ಅತ್ತ ಕುಮಾರಸ್ವಾಮಿ ಹಾಗೂ ಹಾಗೂ ಇತ್ತ ಸಿದ್ದರಾಮಯ್ಯ ಅವರ ಮಾತುಗಳಿಂದ ಇಕ್ಕಟ್ಟಿಗೆ ಸಿಲುಕಿದಂತಾದ ವೇಣುಗೋಪಾಲ್, ಹೈಕಮಾಂಡ್ ಜತೆ ಚರ್ಚಿಸಿ ಬಗೆಹರಿಸಲಾಗುವುದು ಎಂದು ಇಬ್ಬರಿಗೂ ಭರವಸೆ ನೀಡಿದರು ಎಂದು ತಿಳಿದು ಬಂದಿದೆ.