ರಾಜ್ಯಾದ್ಯಂತ ಸಿಡಿಲಬ್ಬರದ ಮಳೆಗೆ ಆರು ಬಲಿ
Team Udayavani, Sep 7, 2017, 6:25 AM IST
ಬೆಂಗಳೂರು: ರಾಜ್ಯಾದ್ಯಂತ ಹುಬ್ಟಾ ಮಳೆಯ ಆರ್ಭಟ ಜೋರಾಗಿದ್ದು, ರಾಜಧಾನಿ ಬೆಂಗಳೂರು, ಹಳೆ ಮೈಸೂರು, ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಸೇರಿದಂತೆ ಎಲ್ಲೆಡೆ ವ್ಯಾಪಕ ಮಳೆಯಾಗುತ್ತಿದೆ. ಇದೇ ವೇಳೆ, ಸಿಡಿಲಬ್ಬರದ ಮಳೆಗೆ ಆರು ಮಂದಿ
ಅಸುನೀಗಿದ್ದಾರೆ. ಮೂವರು ಗಾಯಗೊಂಡಿದ್ದಾರೆ. ಬುಧವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಟಿ.ನರಸೀಪುರದಲ್ಲಿ ರಾಜ್ಯದಲ್ಲಿಯೇ ಅಧಿಕ, 14 ಸೆಂ.ಮೀ.ಗಳಷ್ಟು ಮಳೆ ಸುರಿಯಿತು.
ರಾಜಧಾನಿ ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಬುಧವಾರ ಮಳೆ ಆರ್ಭಟಿಸಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡವು. ಇದೇ ವೇಳೆ, ಗದಗ, ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ಸಿಡಿಲಿಗೆ ಮೂವರು ಬಲಿಯಾದರು. ಸಿಡಿಲಿಗೆ ಮೂವರು ಬಲಿಯಾದರು. ಹಾವೇರಿ ಜಿಲ್ಲೆ ಹಿರೇಕೆರೂರ ತಾಲೂಕಿನ ಆಲದಗೇರಿ ಗ್ರಾಮದಲ್ಲಿ ಫಕ್ಕೀರಪ್ಪ ಸಿದ್ದಪ್ಪ ಗೋಣೇರ (25) ಎಂಬುವರು ಸಿಡಿಲಿಗೆ ಬಲಿಯಾಗಿದ್ದಾರೆ. ಬುಧವಾರ ಮಧ್ಯಾಹ್ನ ತಮ್ಮ ಜಮೀನಿನಲ್ಲಿ ಅವರೆ ಕಾಯಿ ಬಿಡಿಸುತ್ತಿದ್ದಾಗ ಸಿಡಿಲು ಬಡಿಯಿತು. ಇದೇ ವೇಳೆ, ಶರಣಪ್ಪ ಬಸಪ್ಪ ಗೊಣೇರ (38), ಮಾರುತಿ ಹನುಮಂತಪ್ಪ ಓಲೇಕಾರ (35) ಎಂಬುವರಿಗೆ ಗಾಯವಾಗಿದ್ದು, ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಧಾರವಾಡ ಸಮೀಪದ ನವಲೂರು ಗ್ರಾಮದಲ್ಲಿ ಮಲಕಪ್ಪ ಸೂರ್ಯವಂಶಿ (40) ಎಂಬುವರು ಸಿಡಿಲಿಗೆ ಬಲಿಯಾಗಿದ್ದಾರೆ. ಬುಧವಾರ ಸಂಜೆ ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿಯಿತು. ಗದಗ ಜಿಲ್ಲೆ ಲಕ್ಷ್ಮೇಶ್ವರ ಸಮೀಪದ ಹರದಗಟ್ಟಿ ಗ್ರಾಮದಲ್ಲಿ ಬುಧವಾರ ಸಂಜೆ ಸಿಡಿಲಿಗೆ ಪಾಂಡಪ್ಪ ಕೂಬಪ್ಪ ಲಮಾಣಿ (42) ಎಂಬುವರು ಮೃತಪಟ್ಟಿದ್ದಾರೆ. ಸೂರ್ಯಕಾಂತಿ ಬೆಳೆಗೆ ಗೊಬ್ಬರ ಎರಚುವಾಗ ಸಿಡಿಲು ಬಡಿಯಿತು.
ಇದೇ ವೇಳೆ, ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಕೊಡಸೀಗೆ ಗ್ರಾಮದಲ್ಲಿ ಬುಧವಾರ ಮುಂಜಾನೆ ಮನೆಗೋಡೆ ಕುಸಿದು ಸಂದೇಶ್ಗೌಡ(7) ಎಂಬ ಬಾಲಕ ಅಸುನೀಗಿದ್ದಾನೆ. ಸಂದೇಶ್ ಗೌಡ ಬೆಳಗ್ಗೆ 7.30ರ ವೇಳೆ ತನ್ನ ಚಿಕ್ಕತಾತ ಕೊಮರೇಗೌಡರ ಮನೆ ಬಳಿ ಬಂದು ತಾತನನ್ನು ಮಾತನಾಡಿಸಿಕೊಂಡು ಸ್ಕೂಲ್ಗೆ ಹೊರಡುತ್ತಿದ್ದಾಗ ಪಕ್ಕದ ಕೊಮರೇಗೌಡ ಎಂಬುವರ ಮನೆ ಗೋಡೆ ಇದ್ದಕ್ಕಿದಂತೆ ಕುಸಿಯಿತು. ತಕ್ಷಣವೇ ಅಕ್ಕ ಪಕ್ಕದವರು ಆಗಮಿಸಿದರಾದರೂ ಬಾಲಕನನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಇದೇ ವೇಳೆ, ಕೊಮರೇಗೌಡರಿಗೆ ಗಾಯವಾಗಿದೆ. ಭೇರ್ಯ ಸಮೀಪದ ಮುದುಗುಪ್ಪೆ ಗ್ರಾಮದಲ್ಲಿ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದು ಚೆನ್ನಮ್ಮ (52 ) ಎಂಬ ವೃದ್ಧೆ ಅಸುನೀಗಿದ್ದಾಳೆ. ಮಳೆಗೆ ಮನೆಯ ಗೋಡೆ ಕುಸಿದು ಬಿದ್ದು ಕೊಪ್ಪಳ ತಾಲೂಕು ಮುದ್ದಾಬಳ್ಳಿಯ ವಿರುಪನ್ನ ಮಜನಳ್ಳಿ (80) ಎಂಬುವರು ಮೃತಪಟ್ಟಿದ್ದಾರೆ.
ಶ್ರೀರಂಗಪಟ್ಟಣ ಸಮೀಪ ನಾಲೆಯ ತಡೆಗೋಡೆ ಒಡೆದು ನಾಲೆಯ ಕೆಳಭಾಗದಲ್ಲಿದ್ದ ಜಮೀನುಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ಅಪಾರ ಪ್ರಮಾಣದ ಬೆಳೆ ನಷ್ಟ ಸಂಭವಿಸಿದೆ. ಕರಾವಳಿ ಭಾಗದಲ್ಲೂ ಮಳೆಯಾಗಿದ್ದು, ಕಾರ್ಕಳ ತಾಲೂಕಿನ ಕೆಲವೆಡೆ ಸಿಡಿಲು ಬಡಿದು ಹಲವು ಮನೆಗಳಿಗೆ ಹಾನಿ ಸಂಭವಿಸಿದೆ.
ಇಂದು ಕೂಡ ಮಳೆ?
ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಗುರುವಾರ ಕೂಡ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಎಸ್.ಎಂ. ಮೆಟ್ರಿ ತಿಳಿಸಿದ್ದಾರೆ. ಲಕ್ಷದ್ವೀಪ ಸುತ್ತಮುತ್ತ ಮತ್ತು ಬಂಗಾಳ ಕೊಲ್ಲಿಯ ನೈರುತ್ಯದಿಂದ ತಮಿಳುನಾಡಿನ ಕರಾವಳಿ ನಡುವೆ ಮೇಲ್ಸೆ$¾„ ಸುಳಿಗಾಳಿ ಇರುವುದರಿಂದ ಈ ಮಳೆ ಆಗುತ್ತಿದೆ. ನಗರ ಸೇರಿದಂತೆ ಕೆಲವೆಡೆ ಭಾರಿ ಮಳೆ ಆಗುವ ಲಕ್ಷಣವೂ ಇದೆ ಎಂದು ಅವರು ತಿಳಿಸಿದ್ದಾರೆ.