ರಾಜ್ಯ-ಕೇಂದ್ರ ಸರ್ಕಾರದಿಂದ ಭಾರೀ ಅನುದಾನ ನಿರೀಕ್ಷೆ
Team Udayavani, Mar 26, 2017, 12:08 PM IST
ಬೆಂಗಳೂರು: ನಗರದ ಮೂಲ ಸೌಕರ್ಯ, ಕೆರೆಗಳ ಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನವನ್ನೇ ಅವಲಂಬಿಸಿರುವ ಬಿಬಿಎಂಪಿ, ಒಟ್ಟಾರೆ 9,241 ಕೋಟಿ ಮೊತ್ತದ ಬಜೆಟ್ನಲ್ಲಿ 4,249.82 ಕೋಟಿ ಅನುದಾನವನ್ನು ಕೇಂಧ್ರ, ರಾಜ್ಯ ಸರ್ಕಾರದಿಂದ ನಿರೀಕ್ಷಿಸಿದೆ.
ಇದರಲ್ಲಿ ರಾಜ್ಯ ಸರ್ಕಾರದಿಂದ 3,891.36 ಕೋಟಿ ರೂ. ಹಾಗೂ ಕೇಂದ್ರದಿಂದ 358.46 ಕೋಟಿ ರೂ. ಅನುದಾನ ಪಾಲಿಕೆಗೆ ಬರಲಿದೆ. ಈ ಪೈಕಿ ರಾಜ್ಯ ಸರ್ಕಾರದಿಂದ ವಿಶೇಷ ಮೂಲಸೌಕರ್ಯಕ್ಕೆ 2,031 ಕೋಟಿ, ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಗೆ 1,000 ಕೋಟಿ, ಕೆರೆಗಳ ಅಭಿವೃದ್ಧಿಗೆ 50 ಕೋಟಿ, ವೇತನ ಸೇರಿದಂತೆ ಇತರೆ ಉದ್ದೇಶಗಳಿಗೆ 810 ಕೋಟಿ ರೂ. ಅನುದಾನ ನಿರೀಕ್ಷಿಸಲಾಗಿದೆ.
ಅದೇ ರೀತಿ, ಕೇಂದ್ರದಿಂದ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ ಆರೋಗ್ಯ ಕಾರ್ಯಕ್ರಮಗಳಿಗೆ 73 ಕೋಟಿ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ಶೈಕ್ಷಣಿಕ ಕಾರ್ಯಕ್ರಮಗಳಿಗೆ 16 ಲಕ್ಷ, 14ನೇ ಹಣಕಾಸು ಆಯೋಗದ ಅನುದಾನ 265.30 ಕೋಟಿ, ಸ್ವತ್ಛ ಭಾರತ ಅಭಿಯಾನದಡಿ 10 ಕೋಟಿ, ಅಮೃತ್ ಯೋಜನೆ ಅಡಿ ಉದ್ಯಾನ ಅಭಿವೃದ್ಧಿಗೆ 10 ಕೋಟಿ ಸೇರಿ 358.46 ಕೋಟಿ ಬರಲಿದೆ.
ಅನುದಾನಕ್ಕೆ ಕ್ರಿಯಾಯೋಜನೆ: ಈ ಅನುದಾನಕ್ಕೆ ಪಾಲಿಕೆಯು 2017-18ನೇ ಸಾಲಿನ ಬಜೆಟ್ನಲ್ಲಿ ಕ್ರಿಯಾಯೋಜನೆಗಳನ್ನು ರೂಪಿಸಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಿದೆ. ಆ ಪೈಕಿ 690 ಕೋಟಿ ರೂ. ವೆಚ್ಚದಲ್ಲಿ ಸುಮಾರು 80 ಕಿ.ಮೀ. ಉದ್ದದ ಆಯ್ದ 43 ಪ್ರಮುಖ ರಸ್ತೆಗಳನ್ನು ಶ್ರೇಷ್ಠ ಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗುವುದು. ಪಾದಚಾರಿ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲಾಗುವುದು.
ಬೆಂಗಳೂರಿನ ಕೇಂದ್ರ ವಾಣಿಜ್ಯ ವಲಯದಲ್ಲಿ 250 ಕೋಟಿ ರೂ.ಗಳಲ್ಲಿ 3ನೇ ಹಂತದ ಟೆಂಡರ್ಶ್ಯೂರ್ ಮಾದರಿಯ 25 ಕಿ.ಮೀ. ಉದ್ದದ 25 ಅಂತರ ಸಂಪರ್ಕ ರಸ್ತೆಗಳನ್ನು ಸಮಗ್ರವಾಗಿ ಮೇಲ್ದರ್ಜೆಗೇರಿಸಲಾಗುವುದು. ಅತಿ ಹೆಚ್ಚು ಸಂಚಾರದಟ್ಟಣೆ ಇರುವ 12 ಕಾರಿಡಾರ್ಗಳನ್ನು ಗುರುತಿಸಿದ್ದು, ಈ ಕಾರಿಡಾರ್ಗಳ ಅಭಿವೃದ್ಧಿಗಾಗಿ 150 ಕೋಟಿ ರೂ. ಖರ್ಚು ಮಾಡಲಾಗುವುದು. 200 ಕಿ.ಮೀ. ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ 200 ಕೋಟಿ ರೂ. ಮೀಸಲಿಡಲಾಗಿದೆ.
ಅಲ್ಲದೆ, ವಾಹನದಟ್ಟಣೆ ಇರುವ ಆಯ್ದ 9 ಕಡೆ 421 ಕೋಟಿ ರೂ.ಗಳಲ್ಲಿ ಗ್ರೇಡ್ ಸಪರೇಟರ್ಗಳ ನಿರ್ಮಾಣ, 150 ಕೋಟಿ ರೂ.ಗಳಲ್ಲಿ ರೈಲ್ವೆ ಮೇಲ್ಸೇತುವೆ ಮತ್ತು ಕೆಳಸೇತುವೆಗಳನ್ನು ನಿರ್ಮಿಸಲಾಗುವುದು. ಮಳೆ ನೀರು ಚರಂಡಿಗಳ ಅಭಿವೃದ್ಧಿಗೆ 300 ಕೋಟಿ ರೂ., ರಸ್ತೆ ಉಬ್ಬುಗಳು, ಲೇನ್ ಮಾರ್ಕಿಂಗ್, ಸೈನೇಜ್, ಮೀಡಿಯನ್ ಸೇರಿದಂತೆ ಸಂಚಾರಿ ಎಂಜಿನಿಯರಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲು 200 ಕೋಟಿ ರೂ. ನೀಡಲಾಗಿದೆ.
ಖಾಸಗಿ ಸಹಭಾಗಿತ್ವದಲ್ಲಿ ಸ್ಕೈವಾಕ್ಗಳ ನಿರ್ಮಿಸಲು ನಿರ್ಧರಿಸಲಾಗಿ¨ಲಿದ್ದು, ಇದನ್ನು ಉತ್ತೇಜಿಸಲು 80 ಕೋಟಿಮೀಡಲಿಡಲಾಗಿದೆ. ನಗರದಲ್ಲಿ 415.50 ಕಿ.ಮೀ. ಮಧ್ಯಮ ಹಾಗೂ 415.5 ಕಿ.ಮೀ. ಪಾಥಮಿಕ ಸೇರಿ 840 ಕಿ.ಮೀ. ಉದ್ದದ 633 ನೀರುಗಾಲುವೆಗಳಿವೆ. ಇವುಗಳ ನಿರ್ವಹಣೆಗಾಗಿ ಹೆಬ್ಟಾಳ, ಕೋರಮಂಗಲ, ಚಲ್ಲಘಟ್ಟ ಮತ್ತು ವೃಷಭಾವತಿ ಕಣಿವೆಗಳಲ್ಲಿ 509 ಅಪಾಯಕಾರಿ ಪ್ರದೇಶಗಳ ಮೋರಿಗಳನ್ನು ಗುರುತಿಸಲಾಗಿದೆ.
“ನಮ್ಮ ಕ್ಯಾಂಟೀನ್’ಗೆ ಅಭಿನಂದನೆ
ನಗರದ ಎಲ್ಲ 198 ವಾರ್ಡ್ಗಳಲ್ಲಿ ಸರ್ಕಾರ “ನಮ್ಮ ಕ್ಯಾಂಟೀನ್’ ಆರಂಭಿಸುವುದಾಗಿ ಘೋಷಿಸಿದ್ದು, ಇದಕ್ಕೆ ಬಿಬಿಎಂಪಿ ಬಜೆಟ್ನಲ್ಲಿ ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ಈ ಕ್ಯಾಂಟೀನ್ನಲ್ಲಿ ಬೆಳಗಿನ ಉಪಹಾರ 5 ರೂ., ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ತಲಾ 10 ರೂ. ದರ ನಿಗದಿಪಡಿಸಲಾಗಿದೆ. ಇದಕ್ಕಾಗಿ ಸರ್ಕಾರವು ಪಾಲಿಕೆಗೆ ನೂರು ಕೋಟಿ ರೂ. ನೀಡಿದೆ. ಇದನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಗುಣಶೇಖರ್ ತಿಳಿಸಿದ್ದಾರೆ.