ನಲಿದಾಡುವ ನವಿಲುಗಳ ನರಳಾಟ
ನಗರದ ಹೊರವಲಯದಲ್ಲಿ ನಡೆದಿದೆ ರಾಷ್ಟ್ರಪಕ್ಷಿಗಳ ನಿರಂತರ ಮರಣ
Team Udayavani, Jul 28, 2019, 10:01 AM IST
ಬೆಂಗಳೂರು: ಒಂದೆಡೆ ಸ್ವಾಭಾವಿಕ ಕಾಡು ಕರಗುತ್ತಿದ್ದರೆ, ಮತ್ತೂಂದೆಡೆ ಕಾಂಕ್ರೀಟ್ ಕಾಡು ವಿಸ್ತರಿಸುತ್ತಿದೆ. ಅಸಮತೋಲನದಿಂದ ವನ್ಯಜೀವಿಗಳು ನಗರದತ್ತ ಮುಖಮಾಡುತ್ತಿದ್ದು, ವರ್ಷದ ಹಿಂದೆ ಶಾಲೆಯೊಂದಕ್ಕೆ ಚಿರತೆ ನುಗ್ಗಿತ್ತು. ಇತ್ತೀಚೆಗೆ ನವಿಲುಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಅವು ನಿಗೂಢ ರೀತಿಯಲ್ಲಿ ಸಾವನ್ನಪ್ಪುತ್ತಿರುವುದು ಬೆಳಕಿಗೆ ಬಂದಿದೆ.
ಕೇವಲ ಒಂದು ತಿಂಗಳ ಅಂತರದಲ್ಲಿ ನಗರದ ವಿವಿಧೆಡೆ ಆರು ನವಿಲುಗಳು ಸಾವನ್ನಪ್ಪಿರುವುದು ವರದಿಯಾಗಿದೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಅರಣ್ಯ ಇಲಾಖೆ ನಿರ್ಲಕ್ಷ್ಯ ಧೋರಣೆಯೂ ಇದಕ್ಕೆ ಕಾರಣ ಎಂಬ ಆರೋಪ ವನ್ಯಜೀವಿ ರಕ್ಷಕರಿಂದ ಕೇಳಿಬರುತ್ತಿದೆ.
ಎಲ್ಲೆಲ್ಲಿ ಸಾವು?: ಜೂನ್ನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಎರಡು ನವಿಲುಗಳು ಅನುಮಾಸ್ಪಾದವಾಗಿ ಸಾವನ್ನಪ್ಪಿದ್ದವು. ಈ ಘಟನೆ ಬೆನ್ನಲ್ಲೇ ಕೆಂಗೇರಿಯ ವೃಷಭಾವತಿ ನದಿ ದಡದಲ್ಲಿ ಮೂರು ನವಿಲುಗಳು ಸಾವನ್ನಪ್ಪಿದ್ದವು. ಇದೇ ತಿಂಗಳಲ್ಲಿ ಯಶವಂತಪುರದ ಮೆಟ್ರೋ ಹಳಿಯ ಮೇಲೆ ನವಿಲೊಂದು ಸತ್ತು ಬಿದ್ದಿತ್ತು. ಇದಾಗಿ ಒಂದು ವಾರದಲ್ಲಿ ಹತ್ತಿರದಲ್ಲೇ ಇರುವ ಎಪಿಎಂಸಿ ಮಾರುಕಟ್ಟೆ ಕಚೇರಿ ಗಾಜಿಗೆ ಸಿಲುಕಿ ನವಿಲು ಸಾವನ್ನಪ್ಪಿತ್ತು. ಇದಲ್ಲದೆ, ಪೀಣ್ಯ ಕೈಗಾರಿಕಾ ಪ್ರದೇಶ, ತುಮಕೂರಿನ ಹೆದ್ದಾರಿ ಬಳಿ ರಸ್ತೆ ಅಪಘಾತದಲ್ಲಿ ಎರಡು ನವಿಲುಗಳು ಬಲಿಯಾಗಿರುವ ಬಗ್ಗೆ ವರದಿಯಾಗಿದೆ.
ಈ ಮಧ್ಯೆ ಜುಲೈ 14ರಂದು ಬೆಳಗ್ಗೆ ಬೆಂಗಳೂರು ವಿವಿ ಆವರಣದಲ್ಲಿನ ಕುಲಪತಿಗಳ ನಿವಾಸದ ಬಳಿ ನಾಯಿ ದಾಳಿಯಿಂದ ನವಿಲೊಂದು ಪ್ರಾಣಬಿಟ್ಟಿದೆ. ಇದಲ್ಲದೆ, ಫೆ.25ರಂದು ಇದೇ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ನರ್ತಿಸುತಿದ್ದ ನವಿಲು, ನಾಯಿ ದಾಳಿಗೆ ತುತ್ತಾಗಿತ್ತು. ಹೀಗೆ ಅಲ್ಪಾವಧಿಯಲ್ಲಿ ರಾಷ್ಟ್ರೀಯ ಪಕ್ಷಿ ಸಂತತಿಯ ಸರಣಿ ಸಾವುಗಳು ಆತಂಕ ಮೂಡಿಸಿವೆ.
ಬಯೋಪಾರ್ಕ್ನಲ್ಲಿ ನೂರಕ್ಕೂ ಹೆಚ್ಚಿವೆ: ಅಂದಹಾಗೆ, ಜ್ಞಾನಭಾರತಿ ಆವರಣವನ್ನು ನವಿಲುಗಳ ಬಯೋಪಾರ್ಕ್ ಎಂದು ಘೋಷಿಸಲಾಗಿದ್ದು, ಇಲ್ಲಿ ನೂರಕ್ಕೂ ಅಧಿಕ ನವಿಲುಗಳು ವಾಸಿಸ್ತುತಿವೆ. ಆದರೆ, ಆಹಾರಕ್ಕಾಗಿ ನಗರದ ಹೊರವಲಯಗಳ ಹೊಲ ಗದ್ದೆಗಳ ಕಡೆ ಇವು ಬರುವುದು ಮಾಮೂಲು. ಆದರೆ, ಈಗ ಸ್ವತಃ ನವಿಲುಗಳೇ ಆಹಾರವಾಗುತ್ತಿರುವುದು ದುರಂತ. ತೋಟಗಳಲ್ಲಿ ಕೀಟನಾಶ ಮತ್ತು ಔಷಧಗಳನ್ನು ಸಿಂಪಡಣೆ ಮಾಡಲಾಗಿರುತ್ತದೆ. ಅಂತಹ ಹಣ್ಣುಗಳನ್ನು ಸೇವಿಸಿ, ನಾಯಿ-ಬೆಕ್ಕುಗಳ ದಾಳಿ, ಜನಸಂದಣಿಯ ಭಯ, ಹೀಗೆ ನಾನಾ ಕಾರಣಗಳಿಂದ ನವಿಲುಗಳು ಸಾವನ್ನಪ್ಪುತ್ತಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.
ನವಿಲುಗಳ ಸಾವು ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಅರಣ್ಯ ಇಲಾಖೆ ನಿರ್ಲಕ್ಷ್ಯ ಧೋರಣೆಯೂ ಕಾರಣ. ಇದೇ ರೀತಿ ಮುಂದುವರಿದರೆ ಮುಂದಿನ 5-10 ವರ್ಷಗಳಲ್ಲಿ ನವಿಲುಗಳು ಕೂಡ ಹುಲಿಗಳಂತೆ ಅಳಿವಿನಂಚಿಗೆ ಹೋಗಲಿವೆ ಎಂದು ವನ್ಯಜೀವಿ ರಕ್ಷಕ ರಾಜೇಶ್ ಆತಂಕ ವ್ಯಕ್ತಪಡಿಸುತ್ತಾರೆ.