ಯಾವ ಪಕ್ಷದೊಂದಿಗೂ ಬಿಎಸ್ಪಿ ಮೈತ್ರಿ ಇಲ್ಲ
Team Udayavani, Mar 15, 2019, 6:15 AM IST
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಎಲ್ಲ 28 ಕ್ಷೇತ್ರಗಳಲ್ಲೂ ಪಕ್ಷವು ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ)ದ ರಾಜ್ಯ ಘಟಕದ ಸದಸ್ಯ ಅಶೋಕ್ ಸಿದ್ಧಾರ್ಥ ಸ್ಪಷ್ಟಪಡಿಸಿದರು.
ನಗರದ ಕ್ವೀನ್ಸ್ ರಸ್ತೆಯ ಖಾಸಗಿ ಭವನದಲ್ಲಿ ಗುರುವಾರ ಬಿಎಸ್ಪಿ ಹಮ್ಮಿಕೊಂಡಿದ್ದ ಮುಸ್ಲಿಂ ಮುಖಂಡ ಶಹರಿಯಾರ್ ಖಾನ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಮೂರನೇ ಅತಿ ದೊಡ್ಡ ಪಕ್ಷ ಬಿಎಸ್ಪಿ ಆಗಿದೆ. ಅಲ್ಲದೆ, ಪಕ್ಷಕ್ಕೆ ತನ್ನದೇ ಆದ ಮತಬ್ಯಾಂಕ್ ಇದೆ. ಹೀಗಾಗಿ, ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಸ್ವತಂತ್ರವಾಗಿ 28 ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲಿದೆ ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ದಲಿತ, ಮುಸ್ಲಿಮರು ಒಂದಾಗಿ¨ªಾರೆ. ಅದೇ ರೀತಿ, ಕರ್ನಾಟಕದಲ್ಲೂ ಆ ದ್ರುವೀಕರಣದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದ ಅವರು, ಈ ಬಾರಿ ಲೋಕಸಭಾ ಚುನಾವಣೆಯಲ್ಲೂ ಮುಸ್ಲಿಮರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು ಎಂದರು.
ಮಾಜಿ ಸಚಿವ ಎನ್. ಮಹೇಶ್ ಮಾತನಾಡಿ, ಶೀಘ್ರದಲ್ಲಿಯೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಹುತಾತ್ಮ ಯೋಧ ಗುರು ಪತ್ನಿಯನ್ನು ಮಂಡ್ಯದಿಂದ ಕಣಕ್ಕೆ ಇಳಿಸುವ ಪ್ರಸ್ತಾಪ ಇಲ್ಲ. ಆಕೆಗೆ ಇನ್ನೂ, 25 ವಯೋಮಿತಿ ಮೀರಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಎಸ್ಪಿ ರಾಜ್ಯ ಸಂಚಾಲಕ ಶಹರಿಯರ್ ಖಾನ್ ಮಾತನಾಡಿ, ಮುಸ್ಲಿಮರ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ ಕುರಿತು ದನಿಗೂಡಿಸುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ. ಬಿಎಸ್ಪಿಯು ಮುಸ್ಲಿಮರ ಪಕ್ಷವಾಗಿದ್ದು, ಇದಕ್ಕಾಗಿ ಸಂಘಟನೆ ಮಾಡಬೇಕು.
ಅದೇ ರೀತಿ, ಸಾಚಾರ್ ಸಮಿತಿ ವರದಿ ಜಾರಿ ಸೇರಿದಂತೆ ಇನ್ನಿತರ ಬೇಡಿಕೆಗಳಿಗೆ ಹೋರಾಟ ನಡೆಸಲಾಗುವುದು ಎಂದರು. ಬಿಎಸ್ಪಿ ರಾಜ್ಯ ಘಟಕ ಅಧ್ಯಕ್ಷ ಪ್ರೊ.ಹರಿರಾಂ, ರಾಜ್ಯ ಉಸ್ತುವಾರಿ ಎಂ.ಎಲ್. ತೋಮರ್, ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಖಜಾಂಚಿ ಸಲ್ಮಾ ಸೇರಿದಂತೆ ಪ್ರಮುಖರಿದ್ದರು.
ಏಪ್ರಿಲ್ 10ಕ್ಕೆ ಮೈಸೂರಿಗೆ ಮಾಯಾವತಿ: ಏಪ್ರಿಲ್ 10ರಂದು ರಾಜ್ಯದಲ್ಲಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ಅಂದು ಮೈಸೂರಿನಲ್ಲಿ ಲೋಕಸಭಾ ಚುನಾವಣೆ ಪ್ರಚಾರ ನಡೆಸಲಿದ್ದು, ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸಲಿದ್ದಾರೆ ಎಂದು ಅಶೋಕ್ ಸಿದ್ಧಾರ್ಥ ಮಾಹಿತಿ ನೀಡಿದರು.