ಸಾರ್ವಜನಿಕ ಸ್ಥಳದಲ್ಲಿ ಬಯಲು ಶೌಚ
Team Udayavani, Oct 30, 2019, 3:08 AM IST
ಚಿತ್ರಗಳು: ಫಕ್ರುದ್ದೀನ್ ಎಚ್.
ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವುದು ಮುಂದುವರಿದಿದ್ದು, ಈ ಬಾರಿಯೂ ಬೆಂಗಳೂರು ಸ್ವಚ್ಛ ಸರ್ವೇಕ್ಷಣ್ನಲ್ಲಿ ಕಡಿಮೆ ರ್ಯಾಂಕಿಂಗ್ಗೆ ತೃಪ್ತಿ ಪಟ್ಟುಕೊಳ್ಳುವ ಸಾಧ್ಯತೆ ಇದೆ. ಹಲವು ಸಾರ್ವಜನಿಕ ಶೌಚಾಲಯಗಳಲ್ಲಿ ಸ್ವಚ್ಛತೆ ಮರಿಚಿಕೆಯಾಗಿದ್ದು, ದುರ್ವಾಸನೆ ಬೀರುತ್ತಿವೆ.
ಬಹುತೇಕ ಶೌಚಾಲಯಗಳಲ್ಲಿ ಪರವಾನಗಿ ಪತ್ರವೇ ಇಲ್ಲ. ಕೆಲವು ಕಡೆ ಮನಸೋಇಚ್ಛೆ ಹಣ ಸಂಗ್ರಹ ಮಾಡಲಾಗುತ್ತಿದೆ. ಮೂತ್ರ ವಿಸರ್ಜನೆ ಮಾಡುವುದಕ್ಕೆ ಯಾವುದೇ ಶುಲ್ಕ ಪಡೆದುಕೊಳ್ಳುವಂತಿಲ್ಲ ಎನ್ನುವ ಆದೇಶವಿದ್ದರೂ, ಮೂತ್ರ ವಿಸರ್ಜನೆಗೆ ಹಣ ತೆಗೆದುಕೊಳ್ಳಲಾಗುತ್ತಿದೆ.
“ಬಿಬಿಎಂಪಿ ವ್ಯಾಪ್ತಿಯಲ್ಲಿನ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಯನ್ನು ಯಾವ ಆಧಾರ ಮೇಲೆ ಉತ್ತರ ಭಾರತೀಯರಿಗೆ ಟೆಂಡರ್ ನೀಡಲಾಗಿದೆ, ಈ ಶೌಚಾಲಯಗಳಲ್ಲಿ ಸ್ವಚ್ಛತೆ ಸಮಸ್ಯೆ ಎದುರಾದರೆ ಯಾರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎನ್ನುವುದರ ಬಗ್ಗೆ ಬಿಬಿಎಂಪಿಯ ಅಧಿಕಾರಿಗಳು ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು’ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರಾದ ಜಗದೀಶ್ ಹಿರೇಮನಿ ಬಿಬಿಎಂಪಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಅಲ್ಲದೆ, ಈ ಶೌಚಾಲಯಗಳ ನಿರ್ವಹಣೆಯನ್ನು ಸಫಾಯಿ ಕರ್ಮಚಾರಿಗಳಿಗೆ ಹಾಗೂ ಸಫಾಯಿ ಕರ್ಮಚಾರಿ ಕುಟುಂಬಗಳಿಗೆ ನೀಡುವುದಕ್ಕೆ ಕ್ರಮ ತೆಗೆದುಕೊಳ್ಳುವಂತೆಯೂ ನಿರ್ದೇಶನ ನೀಡಿದ್ದರು. ಆದರೆ, ಯಾವುದೇ ನಿಯಮವನ್ನೂ ಬಿಬಿಎಂಪಿಯ ಅಧಿಕಾರಿಗಳು ಪಾಲಿಸಿಲ್ಲ.
ಇಂದಿಗೂ ನಗರದ ಬಹುತೇಕ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಯನ್ನು ಉತ್ತರ ಭಾರತೀಯರೇ ಮಾಡುತ್ತಿರುವುದು “ಉದಯವಾಣಿ’ ರಿಯಾಲಿಟಿ ಚೆಕ್ನಲ್ಲಿ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ, ಇದೇ ಶೌಚಾಲಯಗಳಲ್ಲೇ ಹಲವಾರು ಜೀವನ ಸಾಗಿಸುತ್ತಿದ್ದು, ಗ್ಯಾಸ್ ಸಿಲೆಂಡರ್ ಹಾಗೂ ಅಡುಗೆ ಪಾತ್ರೆಗಳು ಇರುವುದೂ ಪತ್ತೆಯಾಗಿದೆ.
ಬಯಲು ಮೂತ್ರ ವಿಸರ್ಜನೆ ನಗರದ ಕಪ್ಪು ಚುಕ್ಕಿ: ನಗರದಲ್ಲಿ ಬಯಲು ಪ್ರದೇಶಗಳಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವುದು ಕಳೆದ ಬಾರಿ ನಡೆದ ಸ್ವಚ್ಛ ಸರ್ವೇಕ್ಷಣ್ನಲ್ಲಿ ಅಂಕ ಕಡಿಮೆ ಬರುವುದಕ್ಕೆ ಪ್ರಮುಖ ಕಾರಣವಾಗಿತ್ತು. ಆದರೆ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಬಿಬಿಎಂಪಿ ವಿಫಲವಾಗಿದೆ.
ನಗರದ ಯಾವ ಪ್ರದೇಶದಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ ಎಂಬ ಪಟ್ಟಿಯನ್ನು ಬಿಬಿಎಂಪಿ ಸಿದ್ದಪಡಿಸಿಕೊಳ್ಳುತ್ತಿದ್ದು, ಇಲ್ಲಿಯವರೆಗೆ 152 ಪ್ರದೇಶಗಳನ್ನು ಗುರುತಿಸಿದೆ. ಆದರೆ, ಇದಕ್ಕೆ ಪರ್ಯಾಯ ವ್ಯವಸ್ಥೆ ಇನ್ನೂ ಆಗಿಲ್ಲ. ಇನ್ನೊಂದು ಕಡೆ ಸಮೀಪದಲ್ಲಿ ಸಾರ್ವಜನಿಕ ಶೌಚಾಲಯಗಳು ಇದ್ದರೂ, ಸಾರ್ವಜನಿಕರು ಅದನ್ನು ಬಳಸದೆ ರಸ್ತೆ ಬದಿಯಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿರುವುದು ಬಿಬಿಎಂಪಿಗೂ ತಲೆ ನೋವಾಗಿದೆ.
ಟೆಂಡರ್ ನೀಡುವುದಕ್ಕೆ ಕಾನೂನಿನ ಬಿಕ್ಕಟ್ಟು: ಸಫಾಯಿ ಕರ್ಮಚಾರಿಗಳಿಗೆ ಶೌಚಾಲಯಗಳ ನಿರ್ವಹಣೆಯ ಹೊಣೆಯನ್ನು ನೇರವಾಗಿ (ಟೆಂಡರ್ ಕರೆಯದೆ)ನೀಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ, ಸಫಾಯಿ ಕರ್ಮಚಾರಿಗಳಿಗೆ ನೀಡಲು ಸಾಧ್ಯವಾಗುತ್ತಿಲ್ಲ. ಸಫಾಯಿ ಕರ್ಮಚಾರಿಗಳೂ ನಿಯಮಾನುಸಾರ ಟೆಂಡರ್ ಮೂಲಕ ಭಾಗವಹಿಸಲು ಅವಕಾಶವಿದೆ ಅಥವಾ ಸರ್ಕಾರ ಕಾನೂನಿಗೆ ತಿದ್ದುಪಡಿ ತಂದರೂ ನೇರ ಅವಕಾಶ ನೀಡಬಹುದು ಎಂದು ಬಿಬಿಎಂಪಿಯ ಅಧಿಕಾರಿಯೊಬ್ಬರು ತಿಳಿಸಿದರು.
“ಉದಯವಾಣಿ’ ರಿಯಾಲಿಟಿ ಚೆಕ್: ನಗರದ ಪ್ರಮುಖ ಪ್ರದೇಶಗಳಾದ ಮೆಜೆಸ್ಟಿಕ್, ಕೆ.ಆರ್ ಮಾರ್ಕೆಟ್, ಕಲಾಸಿಪಾಳ್ಯ, ಶಿವಾಜಿನಗರ, ಶ್ರೀರಾಮಪುರ, ಜಯನಗರ ಹಾಗೂ ಮಲ್ಲೇಶ್ವರ ಸೇರಿದಂತೆ ಜನ ಸಂದಣಿ ಹೆಚ್ಚಾಗಿರುವ ಪ್ರದೇಶಗಳಲ್ಲಿ “ಉದಯವಾಣಿ’ ರಿಯಾಲಿಟಿ ಚೆಕ್ ನಡೆಸಿದ್ದು, ಸಾರ್ವಜನಿಕ ಶೌಚಾಲಯಗಳಲ್ಲಿ ಮೂತ್ರ ವಿಸರ್ಜನೆಗೆ ಹಣ ಪಡೆದುಕೊಳ್ಳುತ್ತಿರುವುದು, ಪರವಾನಗಿ ಪತ್ರ ಇಲ್ಲದೆ ಇರುವುದು ಹಾಗೂ ಸಮೀಪದಲ್ಲಿ ಶೌಚಾಲಯವಿದ್ದರೂ ರಸ್ತೆಗಳ ಬೀದಿ ಬದಿಯಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ನಗರದಲ್ಲಿ ಶೌಚಾಲಯಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಸುತ್ತೋಲೆ ಹೊರಡಿಸಲಾಗಿದೆ. ಸ್ವಚ್ಛತೆ ಸೇರಿದಂತೆ ವಿವಿಧ ಸಮಸ್ಯೆಗಳಿರುವ ಶೌಚಾಲಯಗಳನ್ನು ಮುಚ್ಚುವಂತೆ ಹಾಗೂ ಸರ್ಮಪಕ ನಿರ್ವಹಣೆ ಮಾಡದವರ ಪರವಾನಗಿ ರದ್ದು ಮಾಡುವಂತೆಯೂ ಸೂಚಿಸಲಾಗಿದೆ.
-ರಂದೀಪ್, ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ)
* ಹಿತೇಶ್ ವೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ