ಸಿನಿಮಾ ನೋಡಿ ಸನ್ಯಾಸಿಯಾಗಲಿದ್ದವನ ರಕ್ಷಣೆ
Team Udayavani, Jan 28, 2019, 6:35 AM IST
ಬೆಂಗಳೂರು: ಬಂಡೆಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಾಪತ್ತೆಯಾಗಿದ್ದ ವಿದ್ಯಾರ್ಥಿ ದೇವಾಂಶ್ ಮಾರು (24) ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಮನೆ ಬಿಟ್ಟು ಹೋಗಿದ್ದ ದೇವಾಂಶ್ನನ್ನು ದೆಹಲಿ ರೈಲ್ವೆ ನಿಲ್ದಾಣದಲ್ಲಿ ಬಂಡೆಪಾಳ್ಯ ಪೊಲೀಸರು ಪತ್ತೆ ಹಚ್ಚಿದ್ದಾರೆ. ನೇಪಾಳಿ ಭಾಷೆಯ “ಮಸಾನ್’ ಎಂಬ ಸಿನಿಮಾ ನೋಡಿ ಆಧ್ಯಾತ್ಮಿಕ ಚಿಂತನೆ ಹೊಂದಿದ್ದ ದೇವಾಂಶ್ ವಾರಣಾಸಿಯಲ್ಲಿರುವ ಸನ್ಯಾಸಿಗಳಂತೆ ಬದುಕಲು ನಿರ್ಧರಿಸಿದ್ದ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
ರಾಜಸ್ಥಾನ ಮೂಲದ ನಿವಾಸಿ ದೇವಾಂಶ್ ಎಂಟು ತಿಂಗಳ ಹಿಂದೆ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದಿದ್ದು, ನಗರದಲ್ಲಿರುವ ಸಹೋದರಿಯ ಮನೆಯಲ್ಲಿ ವಾಸವಿದ್ದ. ಖಾಸಗಿ ಕಾಲೇಜಿನಲ್ಲಿ ಮೊದಲನೇ ವರ್ಷದ ಡಿಸೈನಿಂಗ್ ಕೋರ್ಸ್ನಲ್ಲಿ ವ್ಯಾಸಂಗ ಮಾಡುತ್ತಿದ್ದ. ಆದರೆ, ಆಧ್ಯಾತ್ಮದ ಬಗ್ಗೆ ಹೆಚ್ಚು ಒಲವಿದ್ದ ಈತ, ಈ ಕುರಿತು ಚಲನಚಿತ್ರಗಳನ್ನು ನೋಡುತ್ತಿದ್ದ. ಅದರಲ್ಲೂ ಮಸಾನ್ ಸಿನಿಮಾ ನೋಡಿ ಹೆಚ್ಚು ಪ್ರಭಾವಿತನಾಗಿದ್ದ ದೇವಾಂಶ್, ಸಿನಿಮಾದಲ್ಲಿ ಬರುವ ಹರಿದ್ವಾರ ಹಾಗೂ ವಾರಣಾಸಿಯಲ್ಲಿರುವ ಸನ್ಯಾಸಿಗಳ ಜೀವನವನ್ನು ಅನುಸರಿಸಲು ನಿರ್ಧರಿಸಿದ್ದ ಎಂದು ಪೊಲೀಸರು ಹೇಳಿದರು.
ಆ ಹಿನ್ನೆಲೆಯಲ್ಲಿ ಜ.18ರಂದು ಬೆಳಗ್ಗೆ 10 ಗಂಟೆಗೆ ಕಾಲೇಜಿಗೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋದವನು ತಡರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಆತನ ಮೊಬೈಲ್ಗೆ ಕರೆ ಮಾಡಿದಾಗ, ಆತನ ಎರಡೂ ಮೊಬೈಲ್ಗಳು ಮನೆಯಲ್ಲೇ ಇದ್ದವು. ನಂತರ ಕಾಲೇಜಿಗೆ ತೆರಳಿ ಈ ಬಗ್ಗೆ ಸಹಪಾಠಿಗಳನ್ನು ವಿಚಾರಿಸಿದಾಗ ಆತ ಕಾಲೇಜಿಗೇ ಬಂದಿಲ್ಲ ಎಂಬುದು ಗೊತ್ತಾಗಿದೆ. ಈ ಸಂಬಂಧ ಆತನ ಪೋಷಕರು ಬಂಡೆಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಗುರು ತೋರುವ ದಾರಿ ಕಡೆಗೆ ಪಯಣ!: ಪೊಲೀಸರು ಕೊಠಡಿ ಪರಿಶೀಲಿಸಿದಾಗ ಹಿಂದಿಯಲ್ಲಿ ಬರೆದಿಟ್ಟ ಪತ್ರವೊಂದು ಪತ್ತೆಯಾಗಿದೆ. ಈ ಪತ್ರದಲ್ಲಿ “ಇಷ್ಟು ದಿನ ನನಗೆ ಎಲ್ಲರೂ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು. ನನಗೆ ಎಲ್ಲರೊಂದಿಗೆ ಹೊಂದಿಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಇಲ್ಲಿಯವರೆಗೂ ನನಗೆ ಎಲ್ಲರೂ ಸಹಕಾರ ನೀಡಿರುತ್ತಿರಾ. ಆದರೆ, ನಾನೇ ಎಲ್ಲರನ್ನು ಬಿಟ್ಟು ಹೋಗುತ್ತಿದ್ದೇನೆ. ನಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂದು ಗೊತ್ತಿಲ್ಲ.
ಗುರು ನನಗೆ ಎಲ್ಲಿ ಜ್ಞಾನವನ್ನು ಕೊಡುತ್ತಾರೆ ಎಂದು ತಿಳಿಯಲು ಹೋಗುತ್ತಿದ್ದೇನೆ. ತುಂಬಾ ದಿನಗಳಿಂದ ನನ್ನ ಮನಸ್ಸಿನಲ್ಲಿ ಇದೇ ಅಂಶ ಕಾಡುತ್ತಿತ್ತು. ಇನ್ನು ಮುಂದೆ ನನ್ನನ್ನು ನೋಡುವುದಾಗಲಿ ಅಥವಾ ಹುಡುಕುವ ಪ್ರಯತ್ನ ಮಾಡಬೇಡಿ’ ಎಂದು ಪತ್ರದಲ್ಲಿ ಉಲ್ಲೇಖೀಸಿದ್ದ. ಇದರಿಂದ ತನಿಖೆ ಚುರುಕುಗೊಳಿಸಿದ ಪೊಲೀಸರು ಆತನ ಲ್ಯಾಪ್ಟಾಪ್ ಪರಿಶೀಲಿಸಿದಾಗ ಅಂತರ್ಜಾಲದಲ್ಲಿ ಬೆಂಗಳೂರಿನಿಂದ ಗೋವಾ, ಹರಿದ್ವಾರ, ವಾರಣಾಸಿ ಹಾಗೂ ದೆಹಲಿಗೆ ಹೋಗುವ ಎಲ್ಲ ರೈಲುಗಳ ಬಗ್ಗೆ ಹುಡುಕಾಟ ನಡೆಸಿದ್ದ.
ಅಲ್ಲದೆ, ಮನೆಯಿಂದ ಹೊರಡುವ ಹಿಂದಿನ ದಿನ ಮಸಾನ್ ಸಿನಿಮಾವನ್ನು ಎರಡು ಬಾರಿ ವೀಕ್ಷಿಸಿದ್ದ ವಿಚಾರ ಬೆಳಕಿಗೆ ಬಂದಿತ್ತು. ಜತೆಗೆ ಸನ್ಯಾಸತ್ವದ ಕುರಿತು ಈತ ಕೆಲ ಮಾಹಿತಿ ಶೋಧಿಸಿರುವುದು, ವಾರಣಾಸಿಯಲ್ಲಿ ಯಾವ ರೀತಿ ಸನ್ಯಾಸಿಗಳು ಇರುತ್ತಾರೆ ಮತ್ತು ಅವರು ಹೇಗಿರುತ್ತಾರೆ ಎಂಬುದರ ಬಗ್ಗೆಯೂ ಮಾಹಿತಿ ಪಡೆದುಕೊಂಡಿರುವ ಅಂಶ ಕಂಡು ಬಂದಿತ್ತು ಎಂದು ಪೊಲೀಸರು ಹೇಳಿದರು.
ಸಿಸಿ ಕ್ಯಾಮೆರಾ ಸುಳಿವು: ಈತ ನಾಪತ್ತೆಯಾದ ದಿನ ಮತ್ತು ಅವಧಿಯ ಆಧಾರದ ಮೇಲೆ ನಗರದ ರೈಲ್ವೆ ನಿಲ್ದಾಣದಲ್ಲಿದ್ದ ಎಲ್ಲ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಯಿತು. ಆಗ ಜ.18ರಂದು ಸಂಜೆ 5.20ರಲ್ಲಿ ದೇವಾಂಶ್ ದೆಹಲಿಗೆ ಮಾರ್ಗವಾಗಿ ವಾರಣಾಸಿಗೆ ತೆರಳುವ ರೈಲಿನಲ್ಲಿ ಹೊರಟಿರುವುದು ಸೆರೆಯಾಗಿತ್ತು. ಕೂಡಲೇ ಗೋವಾ, ದೆಹಲಿ ಮತ್ತು ವಾರಣಾಸಿ ರೈಲ್ವೆ ಪೊಲೀಸರಿಗೆ ಈತನ ಫೋಟೋಗಳನ್ನು ಕಳುಹಿಸಿ ಪತ್ತೆಗೆ ಸಹಕಾರ ನೀಡುವಂತೆ ಕೇಳಿಕೊಳ್ಳಲಾಗಿತ್ತು.
ನಂತರ ದೆಹಲಿಯಲ್ಲಿರುವ ಆತನ ಸಂಬಂಧಿಕರನ್ನೂ ಸಂಪರ್ಕಿಸಲಾಗಿತ್ತು. ಜ.21ರಂದು ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ರೈಲಿನಲ್ಲಿ ದೇವಾಂಶ್ನನ್ನು ದೆಹಲಿ ರೈಲ್ವೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಆತನನ್ನು ನಗರಕ್ಕೆ ಕರೆತಂದು ಪೋಷಕರಿಗೆ ಒಪ್ಪಿಸಲಾಗಿದೆ ಎಂದು ಬಂಡೆಪಾಳ್ಯ ಪೊಲೀಸರು ಹೇಳಿದರು.
ಗಾಂಜಾ ಸೇವನೆ: ತನಿಖೆ ವೇಳೆ ದೇವಾಂಶ್ ಸ್ನೇಹಿತರನ್ನು ವಿಚಾರಣೆಗೊಳಪಡಿಸಿದಾಗ ಆತ ಮಾದಕ ವಸ್ತು ಗಾಂಜಾ ಸೇವನೆ ಮಾಡುತ್ತಿದ್ದ ಎಂಬ ವಿಚಾರ ಗೊತ್ತಾಗಿದೆ. ಆದರೆ, ಈ ವಿಚಾರ ಮನೆಯವರಿಗೆ ಗೊತ್ತಿರಲಿಲ್ಲ. ಅಲ್ಲದೆ, ಮನೆಯಿಂದ ಹೊರಡುವ ಕೆಲ ದಿನಗಳ ಹಿಂದೆ ತನ್ನ ಡೆಬಿಟ್ ಕಾರ್ಡ್ನಲ್ಲಿ ಮೂರು ಸಾವಿರ ರೂ. ಹಣ ಡ್ರಾ ಮಾಡಿಕೊಂಡಿದ್ದಾನೆ. ಆದರೆ, ತನ್ನೊಂದಿಗೆ ಮೊಬೈಲ್, ಡೆಬಿಟ್ ಹಾಗೂ ಕ್ರಿಡಿಟ್ ಕಾರ್ಡ್ಗಳನ್ನು ಕೊಂಡೊಯ್ದಿರಲಿಲ್ಲ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
MUST WATCH
ಹೊಸ ಸೇರ್ಪಡೆ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ