ಮಲಿನಗೊಂಡಿದ್ದ ಕಿತ್ತಗಾನಹಳ್ಳಿ ಕೆರೆ ಶುದ್ಧೀಕರಣ
Team Udayavani, Sep 1, 2021, 3:07 PM IST
ಆನೇಕಲ್: ಬೊಮ್ಮಸಂದ್ರ ಕೈಗಾರಿಕಾ ಸಂಘ ಹಾಗೂ ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ಕಿತ್ತಗಾನಹಳ್ಳಿ ಕೆರೆ ಅಭಿವೃದ್ಧಿ ಮಾಡಲಾಗುತ್ತಿದೆ,
ಅಭಿವೃದ್ಧಿ ಕಾರ್ಯ ಕೊನೆಯ ಹಂತ ತಲುಪಿದ್ದು ಮಳೆಯಿಂದಾಗಿ ಕೆರೆಗೆ ಶುದ್ಧನೀರು ಬರುತ್ತಿರುವುದರಿಂದ ಕೆರೆಗೆ 2ಲಕ್ಷ ಮೀನಿನ ಮರಿಗಳನ್ನು
ಬಿಡಲಾಗಿದೆ ಎಂದು ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷ ಎ. ಪ್ರಸಾದ್ ಹೇಳಿದರು.
ತಾಲೂಕಿನ ಬೊಮ್ಮಸಂದ್ರ ಕೈಗಾರಿಕಾ ಸಂಘದ ಸದಸ್ಯರ ಜೊತೆ ಕೆರೆ ಅಭಿವೃದ್ಧಿ ಪರಿಶೀಲನೆ ಬಳಿಕ ಮಾತನಾಡಿ, ಈಗಾಗಲೇ ಕೆರೆ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಬೊಮ್ಮಸಂದ್ರ ಕೈಗಾರಿಕಾ ಸಂಘ ಹಾಗೂ ಖಾಸಗಿ ಸಂಸ್ಥೆಗಳ ಸಹಕಾರದೊಂದಿಗೆ ಕಳೆಗುಂದಿದ್ದ ಕೆರೆ ಅಭಿವೃದ್ಧಿ ಪಡಿಸಿ ಜೀವಕಳೆ ತುಂಬಲಾಗಿದೆ ಎಂದು ಶ್ಲಾಘಿಸಿದರು.
ಕೆರೆ ಸ್ವಚ್ಛತೆಗೆ ಮೀನಿನ ಬಳಕೆ: ಕಲುಷಿವಾಗಿದ್ದ ಕೆರೆಯ ಅಭಿವೃದ್ಧಿ ಪಡಿಸಲು ಹಲವು ಕಂಪನಿಗಳು ಕೈಜೋಡಿಸಿವೆ. ಸಂಪೂರ್ಣವಾಗಿ ಮಲಿನ ವಾಗಿದ್ದ ಕೆರೆಯನ್ನುಸ್ವಚ್ಛಗೊಳಿಸುವ ಕಾಮಗಾರಿ ಪೂರ್ಣಗೊಂಡಿದೆ. ಆನೇಕಲ್ ತಾಲೂಕಿನಾದ್ಯಂತ ಕೆಲವು ದಿನಗಳಿಂದ ನಿರಂತರ ಮಳೆ
ಆಗುತ್ತಿರುವುದರಿಂದ ಶುದ್ಧ ನೀರು ಕೆರೆಗೆ ಸೇರುತ್ತಿದೆ. ಕೆರೆ ಸ್ವತ್ಛವಾಗಿರಲು 2 ಲಕ್ಷ ಮೀನಿನ ಮರಿಗಳನ್ನು ಬಿಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ಅರಣ್ಸಿಂಗ್ ರಾಜ್ಯಕ್ಕೆ ಬರೋದೇ ದುಡ್ಡು ವಸೂಲಿ ಮಾಡೋದಕ್ಕೆ : ಹೆಚ್.ಡಿ.ಕೆ ವಾಗ್ದಾಳಿ
ಕಾರ್ಮಿಕರ ಸುರಕ್ಷತೆಗೆ ಆದ್ಯತೆ: ಬೊಮ್ಮಸಂದ್ರ ಕೈಗಾರಿಕಾ ಸಂಘ ಈಗಾಗಲೆ ಹಲವಾರು ಅಭಿವೃದ್ಧಿ ಕಾರ್ಯಕ್ರಮ ಕೈಗೊಂಡಿದೆ. ಕೈಗಾರಿಕಾ
ಪ್ರದೇಶಗಳಲ್ಲಿ ರಸ್ತೆಗಳು ಅಭಿವೃದ್ಧಿಗೊಳಿಸಿದ್ದು, ಕೈಗಾರಿಕೆಗಳಲ್ಲಿ ಕೆಲಸ ಮಾಡುವವರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಕಾರ್ಮಿಕರು ಹಾಗೂ
ಕೈಗಾರಿಕಾ ಸಂಘದ ವ್ಯಾಪ್ತಿಗೆ ಒಳಪಡುವ ಕಂಪನಿಗಳ ಮಾಲೀಕರು ಮುಂದಿನ ದಿನಗಳಲ್ಲಿ ಹೆಚ್ಚಿನ ಅಭಿವೃದ್ಧಿಕೆಲಸ ಮಾಡಲಿದ್ದಾರೆ ಎಂದರು.
ವಾಯುವಿಹಾರಕ್ಕೆ ವ್ಯವಸ್ಥೆ: ಸಂಘಟನಾ ಕಾರ್ಯದರ್ಶಿ ಮುರಳಿ ಮಾತನಾಡಿ,ಕಿತ್ತಗಾನಹಳ್ಳಿ ಕೆರೆ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ವ್ಯಾಪ್ತಿ ಯಲ್ಲಿ ಇರುವುದರಿಂದ ಕೆರೆ ಅಭಿವೃದ್ಧಿ ಮಾಡುವ ಜವಾಬ್ದಾರಿಯನ್ನು ಎಲ್ಲರೂ ಕೂಡ ಒಗ್ಗಟ್ಟಿನಿಂದ ಮಾಡಿದ್ದು ಈಗ ಕೆರೆ ಪ್ರದೇಶ ಸಂಪೂರ್ಣವಾಗಿ ಶುದ್ಧವಾಗಿದೆ. ಕೆರೆಯಲ್ಲಿರುವ ಕಲುಷಿತ ಮಣ್ಣನ್ನು ತೆಗೆದು,ಕೆರೆಯ ಸುತ್ತ ಪ್ರತಿದಿನ ವಾಯುಹಾರಕ್ಕೆ ಬೇಕಾದ ರೀತಿಯಲ್ಲಿ ರಸ್ತೆಯ ನಿರ್ಮಾಣ ಮಾಡಲಾಗಿದ್ದು, ವಿವಿಧ ಬಗೆಯ ಗಿಡಗಳನ್ನು ನೆಡಲಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಮೊದಲಿನಂತೆ ಪಕ್ಷಿತಾಣ ನಿರ್ಮಾಣ ವಾಗಲಿದೆ ಎಂದು ಹೇಳಿದರು.
ಬೊಮ್ಮಸಂದ್ರ ಕೈಗಾರಿಕಾ ಸಂಘ ಕಾರ್ಯದರ್ಶಿ ನರೇಂದ್ರ ಕುಮಾರ್, ಖಜಾಂಚಿ ಸಂಜೀವ್ ಸಾವಂತ್, ಸಹಾಯಕ ಸಂಘಟನಾ ಕಾರ್ಯದರ್ಶಿ ರಾಜಶೇಖರ್ ಪಾಟೀಲ್, ಬೊಮ್ಮಸಂದ್ರ ಕೈಗಾರಿಕಾ ಸಂಘದ ಸದಸ್ಯರಾದ ಪುನೀತ್ ಪ್ರಸಾದ್, ಹೆನ್ನಾಗರ ಗ್ರಾ.ಪಂ. ಸದಸ್ಯರಾದ ಕಿರಣ್ ,ಶಿವರಾಜ್,ಗೋಪಲ್,ರಾಜು ಮಡಿಕೇರಿ ಮತ್ತಿತತರು ಇದ್ದರು.