ಮಳೆ ಆಧಾರಿತ ರಾಗಿ ಬೆಳೆ ಮತ್ತು ಸವಾಲು
ಆನೇಕಲ್: ವಾಡಿಕೆಗಿಂತ ಹೆಚ್ಚು ಮಳೆ:ಕೈ ಹಿಡಿದ ರಾಗಿ ಬೆಳೆ: ರೈತರ ಮುಖದಲ್ಲಿ ಮಂದಹಾಸ
Team Udayavani, Sep 1, 2021, 2:55 PM IST
ಆನೇಕಲ್: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ ರಾಗಿ ಬೆಳೆಗೆ ಪೂರಕವಾಗಿದೆ. ತಾಲೂಕಿನಲ್ಲಿ ವಾಡಿಕೆಗಿಂತ ಶೇ.10ರಷ್ಟು ಹೆಚ್ಚು
ಮಳೆಯಾಗಿರೋದು ರೈತರಲ್ಲಿ ಮಂದಹಾಸ ಮೂಡಿಸಿದೆ. ಜತೆಗೆ ಈ ವರ್ಷ ರಾಗಿ ಪಸಲು ಹಿಂದಿಗಿಂತ ಹೆಚ್ಚು ಇಳು ವರಿಯ ನಿರೀಕ್ಷೆಯಲ್ಲಿದ್ದಾರೆ.
ವಾಡಿಕೆಗಿಂತ ಹೆಚ್ಚು ಮಳೆ: ಕಳೆದ 2020 ವರ್ಷದಲ್ಲಿ ವಾಡಿಕೆಯಂತೆ 868 ಎಂ.ಎಂ ನಷ್ಟು ಮಳೆ ಬರ ಬೇಕಿತ್ತು, ಆದರೆ 1073 ಎಂಎಂ ಮಳೆ
ಬಂದಿತ್ತು. 2021ರಲ್ಲಿ ಇಲ್ಲಿವರೆಗೆ ವಾಡಿಕೆಯಂತೆ453 ಎಂ.ಎಂ ಮಳೆ ಅವಶ್ಯವಿತ್ತು. ಆದರೆ 502.85 ಎಂ.ಎಂ ಮಳೆ ಸುರಿದಿರುವುದು
ಮಳೆಯಾಧಾರಿತಕೃಷಿಕರಿಗೆ ಸಂತಸದ ಸಂಗತಿಯಾಗಿದೆ.
ರಾಗಿ ಕಣಜ ಎಂದೇ ಖ್ಯಾತಿ: 70300 ಹೆಕ್ಟರ್ ಭೂಮಿಯಲ್ಲಿ ಮಳೆಯಾಧಾರಿತ ಕೃಷಿ ನಡೆಸುತ್ತಿದ್ದಾರೆ, ಇದರಲ್ಲಿ ಶೇ.82ರಷ್ಟು ರಾಗಿ ಬೆಳೆ ಬೆಳೆಯುತ್ತಿದ್ದಾರೆ. ಉಳಿದ ಶೇ.18ರಷ್ಟು ಹೆಕ್ಟರ್ ಭೂಮಿಯಲ್ಲಿ ದ್ವಿದಳ ಧಾನ್ಯ, ತೊಗರಿ, ಅಲಸಂದೆ, ಎಳ್ಳು ಹೀಗೆ ಹಲವು ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ. ಕಳೆದ ವರ್ಷ 5480 ಹೆಕ್ಟೇರ್ ಭೂಮಿಯಲ್ಲಿ 13700 ಕ್ವಿಂಟಲ್ ರಾಗಿ ಬೆಳೆಯಲಾಗಿತ್ತು. ರಾಗಿ ಕಣಜ ಎಂದೇ ಆನೇಕಲ್ ಖ್ಯಾತಿ ಪಡೆದಿದೆ. ಇಲ್ಲಿ ರಾಗಿ ಬೆಳೆಯೇ ಪ್ರಮುಖ ಬೆಳೆಯಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಧನಂಜಯ್ಯ ಉದಯವಾಣಿಗೆ ವಿವರಿಸಿದರು.
ಇಳಿಮುಖದತ್ತ ಕೃಷಿ: ವರ್ಷದಿಂದ ವರ್ಷಕ್ಕೆ ತಾಲೂಕಿನಲ್ಲಿ ಕೃಷಿಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹೊಸ ಪೀಳಿಗೆ ಕೃಷಿಯೆಡೆಗೆ ಆಸಕ್ತಿ ತೋರುತ್ತಿಲ್ಲ. ನಗರೀಕರಣ, ರಿಯಲ್ ಎಸ್ಟೇಟ್ ವೇಗಕ್ಕೆ ಭೂಮಿ ಮಾರಾಟವಾಗುತ್ತಿರುವುದು. ಮುಖ್ಯವಾಗಿ ತಾಲೂಕಿನಲ್ಲಿ5 ಕೈಗಾರಿಕಾ ಪ್ರದೇಶಗಳಿವೆ. ಜಿಗಣಿ, ಬೊಮ್ಮಸಂದ್ರ, ಅತ್ತಿಬೆಲೆ, ವೀರಸಂದ್ರ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಆವರಿಸಿರುವುದು. ಇದರಿಂದ ಕಾರ್ಮಿಕರು ವಾಸಕ್ಕೆ ಬಾಡಿಗೆ ಮನೆಗಳ ಬೇಡಿಕೆ ಹೆಚ್ಚಿರುವುದರಿಂದ ಕೃಷಿ ಭೂಮಿಗಳು ವಸತಿನಿಲಯಗಳಾಗಿ ಪರಿವರ್ತನೆ ಆಗುತ್ತಿವೆ.
ಇದನ್ನೂ ಓದಿ:ಕೋವಿಡ್ ವಿಚಾರದಲ್ಲಿ ತಜ್ಞರು ಕೊಡುವ ವರದಿಯನ್ನು ಸರಕಾರ ಮೊದಲು ಅನುಸರಿಸಲಿ : ಕಿಮ್ಮನೆ
ಗೃಹ ಮಂಡಳಿ ನಿರ್ಮಾಣ : ಮುಖ್ಯವಾಗಿ ತಾಲೂಕಿನ ಮೂರು ಕಡೆಗಳಲ್ಲಿ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯವರು ಸಾವಿರಾರು ಎಕರೆ
ಭೂಮಿ ವಶಕ್ಕೆ ಪಡೆದು ವಸತಿ ಸಂಕೀರ್ಣ ಮತ್ತು ಬಡಾವಣೆಗಳನ್ನು ನಿರ್ಮಾಣ ಮಾಡುತ್ತಿರುವುದು ಕೃಷಿ ಇಳಿ ಮುಖಕ್ಕೆ ಕಾರಣವಾಗಿದೆ. ಅಲ್ಲದೇ ಖಾಸಗಿ ಲೇಔಟ್ಗಳು ನಾಯಿಕೊಡೆಯಂತೆ ಹೆಚ್ಚಿದ್ದು ಭೂಮಿಗೆ ಬಂಗಾರದ ಬೆಲೆ ಬಂದಿದೆ. ಆದರೇ ಕೃಷಿ ಮಾಡುವ ರೈತನ ಬಾಳು ಬಂಗಾರವಾಗಿಲ್ಲ. ಹಾಗಾಗಿ ಕೃಷಿ ಭೂಮಿ ಮಾರಾಟ ಮಾಡಿ ನೆಮ್ಮದಿಯಿಂದ ಜೀವನ ನಡೆಸಬಹುದು ಎನ್ನುವ ಭಾವನೆ ರೈತರಲ್ಲಿ ಬಂದಿದೆ.ಇದು ಕೃಷಿಚಟುವಟಿಕೆ ಇಳಿಮುಖವಾಗಲು ಮತ್ತೊಂದು ಮೂಲ ಕಾರಣವಾಗಿದೆ.
ಬೆಳೆ ಸಮೀಕ್ಷೆಗೆ ಮುಂದಾಗಿ: ತಮ್ಮ ಹೊಲ,ತೋಟ,ಗದ್ದೆಗಳಲ್ಲಿನ ಬೆಳೆ ಮಾಹಿತಿಯನ್ನು ಕೃಷಿ ಇಲಾಖೆಗೆಂದೆ ಇರುವ ಮೊಬೈಲ್ ಆಪ್ ಅನ್ನು ಡೌನ್ ಲೋಡ್ ಮಾಡಿಕೊಂಡು ತಮ್ಮ ಜಮೀನಿನಲ್ಲೇ ನಿಂತು ಪ್ರತಿಯೊಂದು ಬೆಳೆ ಬಗ್ಗೆ ಚಿತ್ರ ಸಹಿತ ದಾಖಲು ಮಾಡಬೇಕೆಂದು ರೈತರಲ್ಲಿ ಕೃಷಿ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ತಾಲೂಕಿನಲ್ಲಿ ತೀರ ಕಡಿಮೆ ರೈತರು ಬೆಳೆ ಸಮೀಕ್ಷೆ ದಾಖಲಿಸಿದ್ದಾರೆ. ಬಹುತೇಕ ರೈತರು ಮೊಬೈಲ್ ಬಳಸಿದರೂ ಬೆಳೆ ಸಮೀಕ್ಷೆ ವಿವರ ದಾಖಲಿಸಿಲ್ಲ. ಅನಕ್ಷರಸ್ಥ ರೈತರಿಗೆ ಈ ಬಗ್ಗೆ ತಿಳುವಳಿಕೆ ಕಡಿಮೆ, ಆದರೇ ವಿದ್ಯಾವಂತಮಕ್ಕಳ ಸಹಾಯ ಪಡೆದಾದರೂಬೆಳೆ ಸಮೀಕ್ಷೆ ವಿವರ ದಾಖಲಿಸಬಹುದುಲ್ಲವೇ ಅನ್ನೋದು ಕೃಷಿ ಅಧಿಕಾರಿ ಧನಂಜಯ್ಯಪ್ರಶ್ನೆ. ಬೆಳೆ ಸಮೀಕ್ಷೆ ಮಾಡುವುದು ಕಡ್ಡಾಯ ಹಾಗೂ ಉಪಯುಕ್ತ ವಾದದ್ದು. ಒಮ್ಮೆ ನಮ್ಮ ಬೆಳೆ ದಾಖಲು ಮಾಡಿದರೆ ಮುಂದೆ ಬೆಳೆ ನಷ್ಟವಾದಾಗ ಸರ್ಕಾರದ ವತಿಯಿಂದ ಬೆಳೆ ಪರಿಹಾರ ನೀಡಲು ಸಹಕಾರಿಯಾಗುತ್ತದೆ ಎಂದರು.
ಬಿತ್ತನೆ ಬೀಜ ವಿತರಣೆ: ಸಮಯಕ್ಕೆ ಸರಿಯಾಗಿ ಉತ್ತಮ ತಳಿಯ ಬಿತ್ತನೆ ಬೀಜಗಳನ್ನು ಅವಶ್ಯಕತೆಯಿರುವ ರೈತರಿಗೆ ಸಬ್ಸಿಡಿ ದರದಲ್ಲಿ ನೀಡಲಾಗಿದೆ. ಆನೇಕಲ್ ತಾಲೂಕಿನಲ್ಲಿ ಜಿಪಿ 28, ಎಂಆರ್-6, ಎಂಆರ್-8 ತಳಿಗಳಿವೆ. ಇದರಲ್ಲಿ ಜಿಪಿ-28 ತಳಿ ಹೆಚ್ಚು ಇಳುವರಿ ನೀಡುತ್ತಿದೆ. ರಾಗಿ ಬೇಸಾಯ ಮಾಡುವ ರೈತರಲ್ಲಿ ಶೇ.50ರಷ್ಟು ರೈತರು ತಾವು ಬೆಳೆದ ಹಳೆಯ ನಾಟಿ ರಾಗಿಯನ್ನು ಬಿತ್ತನೆಗೆ ಬಳಸಿಕೊಳ್ಳುತ್ತಿದ್ದಾರೆ.
ರಾಗಿ, ಭತ್ತ ಸೇರಿದಂತೆ ಎಲ್ಲ ರೀತಿ ಕಾಳುಗಳ ಬೀಜಗಳನ್ನು ಆಯಾ ಕಾಲಾವಧಿಯಲ್ಲೇ ನೀಡಲಾಗಿದೆ. ಬಹುತೇಕ ರೈತರ ಬೀಜ ಪಡೆದು ಬಿತ್ತನೆ
ಮಾಡಿ ಬೆಳೆ ಬೆಳೆಯ ತೊಡಗಿದ್ದಾರೆ.
ಬೆಳೆ ವಿಮೆ: ರಾಗಿ ಬೆಳೆಗೆ ವಿಮೆ ಮಾಡಿಸುವ ಯೋಜನೆಗ ಳನ್ನು ಸರ್ಕಾರ ಜಾರಿಗೆ ತಂದಿದೆ. ಇದಕ್ಕೂ ರೈತರು ಮುಂದಾಗುವುದಿಲ್ಲ. ಸದ್ಯ
ತಾಲೂಕಿನಲ್ಲಿ 138 ರೈತರು ಮಾತ್ರ ತಮ್ಮ ರಾಗಿ ಬೆಳೆಗೆ ವಿಮೆ ಮಾಡಿಸಿದ್ದಾರೆ. ಉಳಿದ ರೈತರು ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳಬೇಕೆಂದು ಅವರು ಹೇಳಿದರು.
ಕಸಬಾದಲ್ಲೇ ಹೆಚ್ಚು ಕೃಷಿಕರು: ತಾಲೂಕಿನಲ್ಲಿ ಅತಿ ಹೆಚ್ಚು ಕೃಷಿಯಾಧರಿತ ರೈತರು ಇರುವುದು ಕಸಬಾ ಹೋಬಳಿಯಲ್ಲಿ ಮಾತ್ರ , ಇನ್ನು ರಾಗಿ ಹಳ್ಳಿ ಪಂಚಾಯ್ತಿಯಲ್ಲಿ ಇಂದಿಗೂ ಸಾಂಪ್ರದಾಯಿಕ ಕೃಷಿಯನ್ನು ಕಾಣಬಹುದು. ಉಳಿದಂತೆ ಹೆಬ್ಬಗೋಡಿ, ಬೊಮ್ಮ ಸಂದ್ರ, ಅತ್ತಿಬೆಲೆ, ಸರ್ಜಾಪುರಗಳಲ್ಲಿ ನಗರೀಕರಣ ಹೆಚ್ಚಳದಿಂದಕೃಷಿ ಮರೆಯಾಗಿದೆ
ಬೆಳೆ ಪರಿಹಾರ
ಕೋವಿಡ್ ವೇಳೆ ಲಾಕ್ಡೌನ್ ಇದ್ದಿದ್ದರಿಂದ ರೈತರ ಬೆಳೆಗೆ ಮಾರುಕಟ್ಟೆ ಸಿಗದೆ ನಷ್ಟಕ್ಕೆ ಒಳಗಾಗಿದ್ದರು. ಈ ಸಮಯದಲ್ಲಿ ರೈತರಿಗೆ ಬೆಳೆ
ಪರಿಹಾರ ನೀಡಲು ಕೇಂದ್ರ, ರಾಜ್ಯ ಸರ್ಕಾರಗಳು ಮುಂದಾಗಿತ್ತು. ಅದರಂತೆ ತಾಲೂಕಿನಲ್ಲಿ15,132 ಅರ್ಜಿಗಳು ಬಂದಿತ್ತು. ಅದರಲ್ಲಿ ಬೆಳೆ ಸಮೀಕ್ಷೆ ಆಧಾರದ ಮಾಹಿತಿ ಮೇರೆಗೆ 14,639 ರೈತರಿಗೆ ಕೆಂದ್ರದ 6 ಸಾವಿರ, ರಾಜ್ಯ ಸರ್ಕಾರದ 4 ಸಾವಿರ ರೂ. ರೈತರ ಖಾತೆಗೆ ಜಮೆಯಾಗುವ ಪ್ರಕ್ರಿಯೆ ಸಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಧನಂಜಯ್ಯ ತಿಳಿಸಿದರು.
ರಾಗಿ ಲಾಭದಾಯಕ ಬೆಳೆಯಲ್ಲ:ಮಲ್ಲಿಕಾರ್ಜುನ
ಇಂದು ರಾಗಿ ಬೆಳೆ ರೈತನಿಗೆ ಹೆಚ್ಚು ಲಾಭತರುವ ಬೆಳೆಯಾಗಿ ಉಳಿದಿಲ್ಲ.ಕಾರಣ ಇಂದು ರಾಗಿ ಬೇಸಾಯ ಮಾಡಲು ಪ್ರತಿಯೊಂದುಕೆಲಸಕ್ಕೂ
ಕೂಲಿಕಾರರನ್ನೇ ಅವಲಂಬಿಸಬೇಕಿದೆ. ಹಿಂದೆ ಅವಿಭಕ್ತಕುಟುಂಬದಲ್ಲಿ ಮನೆ-ಮಂದಿಯೆಲ್ಲ ಕೃಷಿ ಕೆಲಸ ನೋಡಿಕೊಳ್ಳುತ್ತಿದ್ದರು. ಆದರೇ ಇಂದು ವಿಭಕ್ತಕುಟುಂಬಗಳಾಗಿ ಒಡೆದು ಹೋಗಿದ್ದು ಹೆಚ್ಚಿನವರು ಉದ್ಯೋಗದಲ್ಲಿದ್ದಾರೆ. ಹಾಗಾಗಿ ಕೃಷಿ ಕಾರ್ಯಕ್ಕೆಕೂಲಿ ಖರ್ಚು ಹೆಚ್ಚಾಗಿದೆ. ರಾಗಿ ಬೆಳೆಯಲು ಒಂದು ಎಕರೆಗೆ 25 ರಿಂದ3 ಸಾವಿರ ಖರ್ಚು ಆಗುತ್ತದೆ. ರಾಗಿಯಿಂದ30-35 ಸಾವಿರ ಲಾಭ ಬರಬಹುದು ಅಷ್ಟೇ. ರಾಗಿ ಮಾರಾಟಕ್ಕೆ ಆಗದಿದ್ದರೂ ಮನೆ ಬಳಕೆಗಾಗಿ ಬೆಳೆದುಕೊಳ್ಳುತ್ತೇವೆ ಎಂದು ಶೆಟ್ಟಳ್ಳಿ ರೈತ ಮಲ್ಲಿಕಾರ್ಜುನ್ ಹೇಳಿಕೆ.
– ಮಂಜುನಾಥ ಎನ್.ಬನ್ನೇರುಘಟ್ಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ