ಹಣಕಾಸು ಸಂಸ್ಥೆಗಳು ಗ್ರಾಮೀಣ ಜನರ ಪ್ರೋತ್ಸಾಹಿಸಲಿ
Team Udayavani, May 9, 2019, 3:00 AM IST
ದೇವನಹಳ್ಳಿ: ಗ್ರಾಮೀಣ ಪ್ರದೇಶದಲ್ಲಿರುವ ಮೂಲ ಕಸುಬುದಾರರಿಗೆ ಪ್ರೋತ್ಸಾಹ ನೀಡಿದರೆ ಮಾತ್ರ ಆರ್ಥಿಕ ಸುಭದ್ರತೆ ಸಿಗಲಿದೆ ಎಂದು ಶಾಸಕ ನಿಸರ್ಗ ಎಲ್.ಎನ್.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ಸೂಲಿಬೆಲೆ ರಸ್ತೆಯ ಶಾಂತಿ ನಗರದಲ್ಲಿರುವ ಕುಂಭೇಶ್ವರ ಕಾಂಪ್ಲೆಕ್ಸ್ನ 1ನೇ ಮಹಡಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ದೇವನಹಳ್ಳಿ ಜ್ಞಾನ ಶಾಲೆ ಸೌಹಾದ್ಯ ಕೋ.ಆಪರೇಟಿವ್ ಸೊಸೈಟಿಯನ್ನು ಉದ್ಘಾಟಿಸಿ ಮಾತನಾಡಿದರು.
ಸ್ಥಳೀಯರಿಗೆ ಹೆಚ್ಚಿನ ಅನುಕೂಲ: ಭಾರತದಲ್ಲಿ ಮೊದಲ ಬಾರಿಗೆ ಕರ್ನಾಟಕ ರಾಜ್ಯದ ಗದಗಿನಲ್ಲಿ ಆರಂಭಗೊಂಡ ಸಹಕಾರ ಸಂಘ ದೇಶದಲ್ಲಿ 8.2ಲಕ್ಷ ಶಾಖೆಯನ್ನು ಹೊಂದಿದ್ದು, 30 ಕೋಟಿ ಸದಸ್ಯರಿದ್ದಾರೆ. ರಾಜ್ಯದಲ್ಲಿ 4,600 ಶಾಖೆಗಳಿದ್ದು, ಒಂದು ಕೋಟಿ ಸದಸ್ಯರಿದ್ದಾರೆ.
ಬ್ಯಾಂಕಿಂಗ್ ವ್ಯವಸ್ಥೆ ಇಲ್ಲದ ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚು ಒಡನಾಟ ಇರುವುದರಿಂದ ಸ್ಥಳೀಯರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಈ ಭಾಗದ ರೈತಾಪಿ ಜನರಿಗೆ ಹಾಗೂ ಮೂಲ ಕಸಬುದಾರರಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
102ಕೋಟಿ ರೂ. ವಹಿವಾಟು: ಜ್ಞಾನ ಶಾಲೆ ಸೌಹಾರ್ದ ಕೋ.ಅಪರೇಟಿವ್ ಸೊಸೈಟಿ ಸಂಸ್ಥಾಪಕ ಅಧ್ಯಕ್ಷ ಶ್ರೀಧರ್.ಎನ್.ರಾವ್ ಮಾತನಾಡಿ, ಸಹಕಾರ ಸಂಸ್ಥೆ ಪ್ರಾರಂಭಗೊಂಡು 9 ವರ್ಷಗಳು ಕಳೆದಿವೆ. ಪ್ರಸ್ತುತ 15ಸಾವಿರ ಸದಸ್ಯರನ್ನು ಹೊಂದಿದೆ. 102ಕೋಟಿ ರೂ. ವಹಿವಾಟು ನಡೆಸುತ್ತಿದೆ.
ಸಮಾಜದಲ್ಲಿನ ಪ್ರತಿಯೊಬ್ಬ ಕಟ್ಟಕಡೆಯ ವ್ಯಕ್ತಿಗೂ ಮೊದಲ ಆದ್ಯತೆ ನೀಡಿ ಆರ್ಥಿಕ ಮಟ್ಟ ಹೆಚ್ಚಿಸಲು ಶ್ರಮಿಸುತ್ತಿದೆ. ಈಗಾಗಲೇ ಗ್ರಾಮೀಣ ಭಾಗದಲ್ಲಿರುವ ಬಡವರಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಕಯ್ಯಮ್ಮ, ಮುನಿಯಪ್ಪ, ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಜ್ಯೋತಿ ಬಸವರಾಜು, ಬಿಜೆಪಿ ರಾಜ್ಯ ಪರಿಷತ್ ಸದಸ್ಯ ದೇ.ಸು.ನಾಗರಾಜ್, ಸೌಹಾರ್ದ ಕೊ.ಆಪ್. ಸೊಸೈಟಿ ನಿರ್ದೇಶಕ ಎನ್.ರಮೇಶ್ ಬಾಬು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸ್ ರಾವ್, ಸಂಘದ ಅಧ್ಯಕ್ಷ ಸಂಜೀವ್, ಕೆ.ಮಹಾಜನ್, ಉಪಾಧ್ಯಕ್ಷ ರವಿಶಂಕರ್ ಕುಲಕರ್ಣಿ, ನಿರ್ದೇಶಕರು ಮತ್ತಿತರರು ಭಾಗವಹಿಸಿದ್ದರು.