ಜಿಲ್ಲೆಯಲ್ಲಿ 37 ಬಾಲ್ಯ ವಿವಾಹಕ್ಕೆ ಅಧಿಕಾರಿಗಳ ತಡೆ
ಲಾಕ್ಡೌನ್ ವೇಳೆಖರ್ಚು ಕಡಿಮೆ, ಪ್ರೇಮ ಪ್ರಕರಣ, ಮರ್ಯಾದೆಕಾಪಾಡಿಕೊಳ್ಳಲು ಪೋಷಕರಿಂದ ಮಕ್ಕಳಿಗೆ ಬಾಲ್ಯವಿವಾಹ
Team Udayavani, Sep 21, 2020, 2:57 PM IST
ಸಾಂದರ್ಭಿಕ ಚಿತ್ರ
ದೇವನಹಳ್ಳಿ: ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆಯಬೇಕಿದ್ದ 37 ಬಾಲ್ಯ ವಿವಾಹ ಪ್ರಕರಣಗಳನ್ನು ತಡೆದಿರುವ ಅಧಿಕಾರಿಗಳು, ಈ ಸಂಬಂಧ ಠಾಣೆಯಲ್ಲಿ ಎರಡು ಪ್ರಕರಣ ದಾಖಲಿಸಿದ್ದಾರೆ.
ಕೇಂದ್ರ ಸರ್ಕಾರದ ಸರಳ ವಿವಾಹ ಮಾರ್ಗಸೂಚಿ ದುರ್ಬಳಕೆ ಮಾಡಿಕೊಂಡ ಕೆಲವರು, ಅಪ್ರಾಪ್ತರಿಗೆ ಮದುವೆ ಮಾಡಿಸಲುಮುಂದಾಗಿದ್ದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಜಿಲ್ಲಾಡಳಿತದಿಂದ ಬಾಲ್ಯವಿವಾಹ ತಡೆಗಟ್ಟಲು ಸಾಕಷ್ಟು ಕಾನೂನು ಜಾರಿಗೆ ತಂದಿದೆ. ಪ್ರತಿ ತಿಂಗಳು ಬಾಲ್ಯವಿವಾಹದ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿವಿಧ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ, ಜಿಲ್ಲಾ ಮಟ್ಟದಲ್ಲಿ ಸಭೆಗಳನ್ನೂ ಮಾಡಲಾಗುತ್ತಿದೆ. ದೇವಸ್ಥಾನ,ಕಲ್ಯಾಣಮಂಟಪ, ಇತರೆ ಕಡೆ ಬಾಲ್ಯ ವಿವಾಹ ಪ್ರಕರಣ ಕಂಡುಬಂದರೆ ಕೂಡಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲ್ಯ ವಿವಾಹಕ್ಕಿರುವ ಕಾರಣವೇನೆಂದರೆ, ಬಡತನ, ಅನಕ್ಷರತೆ, ಶೈಕ್ಷಣಿಕ ಸೌಲಭ್ಯದ ಕೊರತೆ, ಮೂಢ ನಂಬಿಕೆ, ಹೆತ್ತವರು ಹಾಗೂ ಪಾಲಕರು ತಮ್ಮ ಜವಾಬ್ದಾರಿ ಕಳೆದುಕೊಳ್ಳುವುದು, ವೃದ್ಧರ ಮತ್ತು ಅನಾರೋಗ್ಯದ ಹಿರಿಯರ ಆಸೆ ಈಡೇರಿಸುವ ಉದ್ದೇಶದಿಂದ ಈ ರೀತಿ ಬಾಲ್ಯವಿವಾಹಗಳಿಗೆ ಒಳಗಾಗುತ್ತಿದ್ದು ಅಧಿಕಾರಿಗಳು ಈ ಕುರಿತು ಹದ್ದಿನಕಣ್ಣಿಟ್ಟಿದ್ದಾರೆ.
ಗಮನ ಸೆಳೆದ ಬಾಲ್ಯ ವಿವಾಹಗಳು: ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ 37 ಬಾಲ್ಯವಿವಾಹಗಳನ್ನು ತಡೆದಿದ್ದು ವಿವಾಹ ನಡೆದ 2 ಪ್ರಕರಣಗಳ ಕುರಿತು ಕೇಸು ದಾಖಲಿಸಲಾಗಿದೆ. ತಡೆದಿರುವ ಬಾಲ್ಯವಿವಾಹಗಳಲ್ಲಿ ಎಲ್ಲಾ ಹೆಣ್ಣು ಮಕ್ಕಳು ಶಿಕ್ಷಣ ಮುಂದುವರಿಸಲು ಅವಕಾಶ ಕಲ್ಪಿಸಲಾಗಿದ್ದು, ಶಾಲೆ ಪ್ರಾರಂಭಗೊಂಡ ನಂತರ ಇವರನ್ನು ಶಾಲೆಗೆ ದಾಖಲಿಸುವುದು, ಇವರ ಶೈಕ್ಷಣಿಕ ಮಟ್ಟ ಹೆಚ್ಚಿಸಲು ಕಾರ್ಯಕ್ರಮ ರೂಪಿಸಲಾಗುವುದು. ಬಾಲ್ಯ ವಿವಾಹದಿಂದ ರಕ್ಷಿಸಿದ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲಾಗಿದೆ. ಕುಟುಂಬದ ಎಲ್ಲಾ ಸದಸ್ಯರಿಗೆ ಆಪ್ತ ಸಮಾಲೋಚನೆ ಮಾಡಿ, ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗಿದೆ.
ಅಧಿಕಾರಿಗಳ ಕೋರ್ಟ್: ಬಾಲ್ಯ ವಿವಾಹ ಪ್ರಕರಣ, ಸ್ವೀಕೃತವಾದ ಮಕ್ಕಳ ಸಹಾಯವಾಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತು ತಾಲೂಕು ಆಡಳಿತ ಸಹಯೋಗದೊಂದಿಗೆ ಎಲ್ಲಿ ಬಾಲ್ಯ ವಿವಾಹ ನಡೆಯುತ್ತಿದೆ ಎಂಬ ಮಾಹಿತಿ ದೊರೆತ ಕೂಡಲೇ ಅಧಿಕಾರಿಗಳ ತಂಡ ಪ್ರಕರಣ ತಡೆ ಹಿಡಿದು, ಕ್ರಮ ವಹಿಸುವ ಕಾರ್ಯಮಾಡುತ್ತಿದೆ. ಬಾಲ್ಯವಿವಾಹಕ್ಕೆ ಶ್ರಮಿಸುತ್ತಿರುವ ಸಂಘಟನೆ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿದಕೂಡಲೇ ಸ್ಪಂದಿಸಲಾಗುತ್ತಿದೆ. ಕಳೆದ 2018-19ರಲ್ಲಿ 12 ಪ್ರಕರಣ ಪತ್ತೆ ಹಚ್ಚಲಾಗಿತ್ತು. ನೆಂಟರಿಷ್ಟರಿಗೂ ಮಾಹಿತಿ ನೀಡದೇ, ಶಾಸ್ತ್ರ ಮುಗಿಸಲು ಮುಂದಾಗಿದ್ದ ಪಾಲಕರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿ ಅಪ್ರಾಪ್ತರು ಸಪ್ತಪದಿ ತುಳಿಯದಂತೆ ತಡೆ ಹಿಡಿದಿದ್ದರು.
17 ವರ್ಷ ತುಂಬಿದವರದ್ದೇ ಹೆಚ್ಚು ಪ್ರಕರಣ : ಜಿಲ್ಲೆಯಲ್ಲಿ 16 ರಿಂದ 17 ವರ್ಷದ ಮದುವೆ ಪ್ರಕರಣಗಳೇ ಹೆಚ್ಚು ಪತ್ತೆಯಾಗಿವೆ. ಬಹಳಷ್ಟು ಪಾಲಕರು 17 ತುಂಬಿದ ಹೆಣ್ಣು ಮಕ್ಕಳನ್ನು 18 ವರ್ಷ ಎಂದು ಹೇಳಿ ಮದುವೆಗೆ ಮುಂದಾಗಿದ್ದಾರೆ. ಕಾನೂನಿನಡಿ 18 ವರ್ಷ ತುಂಬಿದ ಮೇಲಷ್ಟೇ ಮದುವೆಗೆ ಅರ್ಹರು ಎಂಬುದರ ಕುರಿತು ಪೋಷಕರಿಗೆಅರಿವಿಲ್ಲ.ಜಿಲ್ಲೆಯಲ್ಲಿಪತ್ತೆಯಾದಪ್ರಕರಣಗಳಲ್ಲಿ ಕೆಲವು ಪ್ರೇಮ ವಿವಾಹಕ್ಕೆ ಸಂಬಂಧಿಸಿದ್ದೇ ಹೆಚ್ಚು. ಪ್ರೇಮ ಪಾಶಕ್ಕೆ ಬಿದ್ದ ಮಕ್ಕಳು ದಾರಿ ತಪ್ಪುವ ಆತಂಕದಿಂದ ಬೇಗನೆ ಮದುವೆ ಮುಗಿಸಲು ಪಾಲಕರು ಮುಂದಾಗಿದ್ದರು. ಮತ್ತೂಂದೆಡೆ ಪ್ರೀತಿ ಪ್ರೇಮ ನೆಪದಲ್ಲಿ ಮನೆಯಲ್ಲಿ ಮರ್ಯಾದೆ ಹಾಳಾಗುತ್ತದೆ ಎಂಬ ಕಾರಣಕ್ಕೆ ಬೇರೆಯವರೊಂದಿಗೆ ಮದುವೆ ಮಾಡಿ ಮುಗಿಸಲು ಯೋಜಿಸುತ್ತಿದ್ದರು ಎಂಬುದು ಅಧಿಕಾರಿಗಳ ತನಿಖೆಯಿಂದ ಬೆಳಕಿಗೆ ಬಂದಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಪ್ರತಿ ತಿಂಗಳು ಬಾಲ್ಯ ವಿವಾಹ ಹಾಗೂ ಇಲಾಖೆಗೆ ಸಂಬಂಧಿಸಿದಂತೆ, ಪ್ರತಿ ತಿಂಗಳು ಸಭೆ ಮಾಡಿ, ಅಧಿಕಾರಿಗಳಿಗೆ ಸೂಚನೆಮಾರ್ಗದರ್ಶನ ನೀಡಲಾಗಿದೆ. ಪೊಲೀಸರು, ಆಯಾ ತಾಲೂಕಿನ ಸಿಡಿಪಿಒ ಸೇರಿ ವಿವಿಧ ಇಲಾಖೆ ಒಳಗೊಂಡಂತೆ ಬಾಲ್ಯ ವಿವಾಹ ತಡೆಗೆ ತಂಡವನ್ನು ರಚಿಸಲಾಗಿದೆ. – ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ
ಈಗಾಗಲೇ ಬಾಲ್ಯ ವಿವಾಹ ನಡೆಯುತ್ತಿರುವ ಮಾಹಿತಿ ತಿಳಿದಕೂಡಲೇ ದಾಳಿ ನಡೆಸಿದ್ದರಿಂದ 37 ಬಾಲ್ಯ ವಿವಾಹ ತಡೆಯಲು ಸಾಧ್ಯ ವಾಯಿತು.ಪೋಕ್ಸೋ ಕಾಯಿದೆಯಡಿ 1 ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಜಿಲ್ಲೆಯಲ್ಲಿಹೆಚ್ಚು ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಪಾಲಕರು ಹಾಗೂ ಮದುವೆ ಸಂದರ್ಭದಲ್ಲಿ ಹಾಜರಿದ್ದ ಎಲ್ಲರಿಗೂ ಎಚ್ಚರಿಕೆ ನೀಡಲಾಗಿದೆ. –ಪುಷ್ಪಾ ರಾಯ್ಕರ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಪ ನಿರ್ದೇಶಕಿ
–ಎಸ್.ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ