ಕುಡುಕ ಗಂಡನ ಕಾಟ ತಾಳದೇ ಕೊಲೆ ಮಾಡಿದ್ದ ಪತ್ನಿ ಬಂಧನ
Team Udayavani, May 31, 2018, 12:37 PM IST
ದೊಡ್ಡಬಳ್ಳಾಪುರ: ತಾಲೂಕಿನ ನಾರನಹಳ್ಳಿ ಗ್ರಾಮದ ಕೋಳಿ ಫಾರಂನಲ್ಲಿ ನಡೆದಿದ್ದ ಕಾವಲುಗಾರ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿ ದ್ದಾರೆ. ಕಾವಲುಗಾರ ಬಿಮಾಲ್ಬೋರಾ ನನ್ನು ಆತನ ಪತ್ನಿ ಪೂರ್ಣಿಮಾ ಬೋರಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಸಾಬೀತಾಗಿದ್ದು ಈಕೆಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಡಿವೈಎಸ್ಪಿ ಆರ್. ಮೋಹನ್ಕುಮಾರ್ ತಿಳಿಸಿದರು.
ನಗರದಲ್ಲಿ ಬುಧವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೃತ ಬಿಮಾಲ್ ಬೋರಾ ಪ್ರತಿ ದಿನ ಕುಡಿದು ಹೆಂಡತಿ, ಮಕ್ಕಳಿಗೆ ತೀವ್ರ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಹಲವಾರು ಬಾರಿ ಪತ್ನಿ ಪೂರ್ಣಿಮಾ ಬೋರಾ ಬುದ್ಧಿ ಹೇಳಿದ್ದರೂ ತನ್ನ ಚಾಳಿಯನ್ನು ಬಿಟ್ಟಿರಲಿಲ್ಲ. ಇದರಿಂದ ರೋಸಿ ಹೋಗಿದ್ದ ಪೂರ್ಣಿಮಾ ಬೋರಾ ಕುಡಿದ ಅಮಲಿನಲ್ಲಿದ್ದ ಪತಿಯ ಕೈ ಕಾಲುಗಳನ್ನು ಕಟ್ಟಿಹಾಕಿ ಕತ್ತು ಕೊಯ್ದು ಕೊಲೆ ಮಾಡಿದ್ದಳು ಎಂದು ಹೇಳಿದರು.
ಕೊಲೆ ಆರೋಪವನ್ನು ಮುಚ್ಚಿಹಾಕಲು ಹಲವಾರು ರೀತಿಯಲ್ಲಿ ಪ್ರಯತ್ನಿಸಿದ್ದರು. ಸೂಕ್ತ ಸಾಕ್ಷಿಗಳು ದೊರೆತ ಹಿನ್ನೆಲೆಯಲ್ಲಿ ಪೂರ್ಣಿಮಾ ಬೋರಾ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ ಎಂದು ಡಿವೈಎಸ್ಪಿ ತಿಳಿಸಿದ್ದಾರೆ.
ದುಷ್ಕರ್ಮಿಗಳು ಇಟ್ಟ ಬೆಂಕಿಗೆ ಬೈಕ್ಗಳು ಭಸ್ಮ ದೊಡ್ಡಬಳ್ಳಾಪುರ: ನಗರದಲ್ಲಿನ ಮಾರುತಿ ನಗರದ ಕೊದಂಡರಾಮ ಅವರ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ದುಬಾರಿ ಬೆಲೆಯ ಎರಡು ಬೆ„ಕ್ಗಳಿಗೆ ಮಂಗಳವಾರ ರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಲಕ್ಷಾಂತರ ರೂ. ನಷ್ಟವಾಗಿರುವ ಘಟನೆ ನಡೆದಿದೆ.
ಬೈಕ್ಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಅಲ್ಲದೆ ಮನೆಯ ಗೋಡೆ ಸೇರಿದಂತೆ ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದೆ. ಬೆಂಕಿ ಕಾಣಿಸಿಕೊಂಡ ಸ್ವಲ್ಪ ಸಮಯದಲ್ಲಿಯೇ ಮನೆಯ ಮಾಲಿಕರು ನೋಡಿಕೊಂಡಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಸ್ಥಳಕ್ಕೆ ನಗರ ಪೊಲೀಸ್ ಠಾಣೆ ಸಬ್ಇನ್ಸ್ಪೆಕ್ಟರ್ ಬಿ. ಕೆ.ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.