ಕನಕಾಂಬರ ಮೊಗ್ಗಿನ ಜಡೆ ನೀಡಿದ್ದಕ್ಕೆ ವಿವಾಹ ರದ್ದು
Team Udayavani, Oct 27, 2017, 6:50 AM IST
ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಭೀಮಕ್ಕನಹಳ್ಳಿಯ ನವಕೋಟಿ ನಾರಾಯಣ ಕಲ್ಯಾಣ ಮಂಟಪದಲ್ಲಿ ಮೊಗ್ಗಿನ ಜಡೆ ಬಗ್ಗೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಮದುವೆಯೇರದ್ದಾಗಿದೆ. ಕಲ್ಯಾಣ ಮಂಟಪದಲ್ಲಿ ವಿಜಯಪುರದ ವಧುವಿನೊಂದಿಗೆ ಹೊಸಕೋಟೆ ತಾಲೂಕಿನ ಭೀಮಾಪುರದ ಯುವಕನ ವಿವಾಹ ನೆರವೇರಬೇಕಾಗಿತ್ತು.
ಬುಧವಾರ ರಾತ್ರಿ ಆರತಕ್ಷತೆ ನಡೆದು ಗುರುವಾರ ಬೆಳಗ್ಗೆ 5 ರಿಂದ 6 ಗಂಟೆಗೆ ಮುಹೂರ್ತ ನಿಗದಿಯಾಗಿತ್ತು. ಆದರೆ,ಮಲ್ಲಿಗೆ ಹೂವಿನ ಬದಲಿಗೆ ವರನ ಕಡೆಯವರು ವಧುವಿಗೆ ಕನಕಾಂಬರ ಹೂವಿನ ಜಡೆ ನೀಡಿದರು. ಈ ಬಗ್ಗೆ ವಧುವಿನ ಕಡೆಯವರು ಆಕ್ಷೇಪಿಸಿ ಕಲ್ಯಾಣ ಮಂಟಪದಿಂದ ಹೊರ ನಡೆದರು.
ವರ ಹಾಗೂ ವರನ ಸಂಬಂಧಿಗಳು ಬಹಳಷ್ಟು ಮನವಿ ಮಾಡಿದರಾದರೂ ವಧುವಿನ ಕಡೆಯವರು ಕಿವಿಗೊಡದೆ ಕಾರಿನಲ್ಲಿ ಹೊರಟೇ ಬಿಟ್ಟರು. ಇದರಿಂದ ವಿಚಲಿತರಾದ ವರನ ಕಡೆಯವರು ಬೇರೆ ಹುಡುಗಿಗಾಗಿ ಹುಡುಕಾಟ ನಡೆಸಿದರೂ ಪ್ರಯೋಜನವಾಗದ ಕಾರಣ ವಿವಾಹ ರದ್ದಾಯಿತು.