ಪರಿಹಾರ ಬೇಕು; ಮೊಸಳೆ ಕಣ್ಣೇರಲ್ಲ
ಕೇಂದ್ರದ ಉದಾಸೀನದಿಂದ ಹೆಚ್ಚಿದ ಅಸಮಾಧಾನ | ಸರ್ಕಾರವೇ ಕೈಚೆಲ್ಲಿದರೆ ಯಾರ ಬಳಿ ಹೋಗುವುದು?
Team Udayavani, Oct 3, 2019, 5:54 PM IST
ಕೇಶವ ಆದಿ
ಬೆಳಗಾವಿ: ನೆರೆ ಸಂತ್ರಸ್ತರ ಸಂಕಷ್ಟಗಳ ಸರಮಾಲೆ ಜೊತೆಗೆ ಈಗ ಪರಿಹಾರದ ಹಣ ಬಿಡುಗಡೆ ಮಾಡುವ ವಿಷಯದಲ್ಲಿ ಕೇಂದ್ರದ ಉದಾಸೀನ ಮನೋಭಾವ ಮತ್ತು ಪ್ರತಿಪಕ್ಷಗಳ ಟೀಕೆ ದೊಡ್ಡ ಸುದ್ದಿಯಾಗುತ್ತಿದೆ.
ಉತ್ತರ ಕರ್ನಾಟಕ ದಲ್ಲಿ ಭೀಕರ ಸ್ಥಿತಿ ಇದ್ದರೂ ಕೇಂದ್ರ ಸರಕಾರ ಇದುವರೆಗೆ ಕಣ್ಣು ತೆರೆಯದೇ ಇರುವದು ವಿರೋಧ ಪಕ್ಷದವರ ಮತ್ತು ನೆರೆ ಪೀಡಿತ ಪ್ರದೇಶಗಳ ಜನರ ಆಕ್ರೋಶಕ್ಕೆ ಗುರಿಯಾಗಿದೆ. ರಾಜ್ಯದಲ್ಲಿ ಭೀಕರ ಪ್ರವಾಹದಿಂದ ಸುಮಾರು 38 ಸಾವಿರ ಕೋಟಿಗೂ ಅಧಿಕ ಹಾನಿಯಾಗಿದೆ. ಇದು ರಾಜ್ಯ ಸರಕಾರದ ಅಂಕಿ ಅಂಶ. ಪ್ರತಿಪಕ್ಷದ ಅಂಕಿ ಅಂಶಗಳ ಪ್ರಕಾರ ಹಾನಿಯ ಪ್ರಮಾಣ ಒಂದು ಲಕ್ಷ ಕೋಟಿಗೂ ಹೆಚ್ಚು. ಪ್ರಕೃತಿ ವಿಕೋಪದಿಂದ ರಾಜ್ಯದ 22 ಜಿಲ್ಲೆಗಳಲ್ಲಿ ಎಂಟು ಲಕ್ಷ ಜನರು ಬೀದಿಗೆ ಬಂದಿದ್ದಾರೆ.
ಮಾರು ಮೂರು ಲಕ್ಷ ಜನ ಮನೆ ಕಳೆದುಕೊಂಡಿದ್ದಾರೆ. 20 ಲಕ್ಷ ಎಕರೆ ಪ್ರದೇಶದ ಬೆಳೆ ಹಾನಿಯಾಗಿದೆ. 90 ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಈ ಎಲ್ಲ ಅಂಕಿಅಂಶಗಳು ಸರಕಾರದ ಮುಂದಿವೆ. ಆದರೆ ರಾಜ್ಯದಲ್ಲಿ ನೆರೆ ಹಾವಳಿಯಿಂದ ಅನಾಹುತಗಳಾಗಿ ಎರಡು ತಿಂಗಳಾಯಿತು. ಕೇಂದ್ರದ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಅಮಿತ್ ಶಾ ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆ ಮಾಡಿ ಎರಡು ತಿಂಗಳು ಕಳೆದವು. ಕೇಂದ್ರದ ಅಧಿಕಾರಿಗಳ ತಂಡ ಪರಿಶೀಲನೆ ಮಾಡಿಹೋಗಿ ತಿಂಗಳ ಮೇಲಾಯಿತು.
ರಾಜ್ಯದ ಸಚಿವರು ಪರಿಶೀಲನೆ ಮಾಡಿ ವರದಿ ಕೊಟ್ಟಿದ್ದೂ ಆಯಿತು. ಇದೆಲ್ಲದರ ಮಧ್ಯೆ ಸ್ವತಃ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ನಾಲ್ಕು ಬಾರಿ ಖುದ್ದಾಗಿ ಪ್ರವಾಹ ಪ್ರದೇಶಗಳ ಪರಿಶೀಲನೆ ಮಾಡಿದರು. ಇಷ್ಟೆಲ್ಲಾ ಆದ ಮೇಲೂ ಪ್ರತಿಯೊಬ್ಬರೂ ನಿರೀಕ್ಷೆ ಮಾಡಿದ್ದ ಕೇಂದ್ರ ಸರಕಾರದ ಪರಿಹಾರದ ಪ್ಯಾಕೇಜ್ ಮಾತ್ರ ಇದುವರೆಗೆ ಘೋಷಣೆ ಆಗಲಿಲ್ಲ. ಹಾಗಾದರೆ ಕೇಂದ್ರದ ಪರಿಹಾರದ ಪ್ಯಾಕೇಜ್ ಬರಬೇಕಾದರೆ ಇನ್ನೆಂತಹ ವರದಿ ಬೇಕು ಎಂಬ ಪ್ರಶ್ನೆ ಈಗ ಸಂತ್ರಸ್ತರನ್ನು ಕಾಡುತ್ತಿದೆ.
ಸಿಎಂ ಯಡಿಯೂರಪ್ಪ ಈಗ ನಾಲ್ಕನೇ ಬಾರಿಗೆ ಅ. 3 ರಂದು ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಅಧಿಕಾರಿಗಳ ಜೊತೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೈಗೊಂಡಿರುವ ಪರಿಹಾರ ಕಾರ್ಯಗಳ ಪ್ರಗತಿ ಪರಿಶೀಲನೆ ಹಾಗೂ ಪ್ರವಾಹ ಬಾಧಿತ ಪ್ರದೇಶಗಳಲ್ಲಿನ ಜನರನ್ನು ಭೇಟಿಯಾಗಲಿದ್ದಾರೆ. ರಾಜ್ಯದ ಪ್ರವಾಹ ಸಂತ್ರಸ್ತರ ಬಗ್ಗೆ ಕೇಂದ್ರದ ನಾಯಕರು ತೋರಿರುವ ಅನಾದರ ಹಾಗೂ ತಾತ್ಸಾರ ಮನೋಭಾವ ಇಲ್ಲಿನ ಬಿಜೆಪಿ ನಾಯಕರಿಗೇ ಸಾಕಷ್ಟು ಅಸಮಾಧಾನ ಉಂಟುಮಾಡಿದೆ.
ಕೆಲವು ನಾಯಕರು ಪಕ್ಷದ ಆಂತರಿಕ ಸಭೆಯಲ್ಲಿ ತಮ್ಮ ಕೋಪ ಹಾಗೂ ಸಂತ್ರಸ್ತರ ಕಷ್ಟವನ್ನು ಹೊರಹಾಕಿದ್ದಾರೆ. ಹೀಗಿರುವಾಗ ಯಡಿಯೂರಪ್ಪ ಅವರು ಕೇಂದ್ರದ ಪರಿಹಾರವಿಲ್ಲದೇ ಇಲ್ಲಿ ಬಂದು ಸಭೆ ಮಾಡಿದರೆ ಏನು ಪ್ರಯೋಜನ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಬೆಳಗಾವಿ ಜಿಲ್ಲೆಯೊಂದರಲ್ಲೇ ಸುಮಾರು 11 ಸಾವಿರ ಕೋಟಿ ರೂ ಹಾನಿಯಾಗಿದೆ. ಗದಗ ಜಿಲ್ಲೆಯಲ್ಲಿ ಸುಮಾರು 305 ಕೋಟಿ, ಧಾರವಾಡ ಜಿಲ್ಲೆಯಲ್ಲಿ 672 ಕೋಟಿಗೂ ಅಧಿಕ ಹಾನಿ ಸಂಭವಿಸಿದೆ. ರಾಜ್ಯದ ಒಟ್ಟು ಹಾನಿ ಪ್ರಮಾಣದಲ್ಲಿ ಪ್ರತಿಶತ ಅರ್ಧಕ್ಕಿಂತ ಹೆಚ್ಚು ನಷ್ಟ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೇ ಆಗಿದೆ. ಇಷ್ಟಾದರೂ ಇದುವರೆಗೆ
ಕೇಂದ್ರದಿಂದ ಪರಿಹಾರದ ಪ್ಯಾಕೇಜ್ ಪ್ರಕಟವಾಗದೇ ಇರುವುದು ಈ ಭಾಗದ ರೈತ ಸಮುದಾಯ ಹಾಗೂ ನೆರೆ ಸಂತ್ರಸ್ತರ ಕಂಗೆಣ್ಣಿಗೆ ಗುರಿಯಾಗಿದೆ.
ಪದೇ ಪದೇ ನಡೆಸುವ ಸಮೀಕ್ಷೆಗಳಿಂದ ಯಾವುದೇ ಅರ್ಥವಿಲ್ಲ. ಅದರ ಬದಲು ಪರಿಹಾರ ಘೋಷಣೆ ಮಾಡಿ. ಸಂತ್ರಸ್ತರಿಗೆ ತಕ್ಷಣ ಪುನರ್ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿ ನೆರೆ ಸಂತ್ರಸ್ತರು ಹಾಗೂ ರೈತರು ಸರಕಾರಗಳ ವಿರುದ್ಧ ದಂಗೆ ಏಳುವ ಪರಿಸ್ಥಿತಿ ಬರುತ್ತದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಪ್ರವಾಹ ಇಳಿಕೆಯಾದ ನಂತರ ತಕ್ಷಣ ಪರಿಹಾರವಾಗಿ ಸರಕಾರ 10 ಸಾವಿರ ರೂ. ನೀಡಿದ್ದೇ ದೊಡ್ಡ ಸಾಧನೆ ಎಂಬಂತಾಯಿತು. ಈ ಅಲ್ಪ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು ಇದಾದ ನಂತರ ರಾಜ್ಯ ಸರಕಾರದಿಂದ ಬರೀ ಸಾಂತ್ವನದ ಮಾತುಗಳು ಬಂದಿವೆ ಹೊರತು ಬೆಳೆ ಹಾಗೂ ಮನೆಗಳ ಹಾನಿಯ ಪರಿಹಾರದ ಮಾತೇ ಇಲ್ಲ. ಹೀಗಾದರೆ ನಾವು
ಯಾರ ಬಳಿಗೆ ಹೋಗಬೇಕು ಎಂಬುದು ನೆರೆ ಸಂತ್ರಸ್ತರ ಪ್ರಶ್ನೆ.