Belagavi; ಮೇಯರ್ ಆಗಿ ಬಿಜೆಪಿಯ ಸವಿತಾ ಕಾಂಬಳೆ, ಉಪಮೇಯರ್ ಆನಂದ ಚವಾಣ ಆಯ್ಕೆ
ಐದು ವರ್ಷಗಳ ಬಳಿಕ ಕನ್ನಡಿಗರಿಗೆ ಮೇಯರ್ ಪಟ್ಟ
Team Udayavani, Feb 15, 2024, 1:41 PM IST
ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಎರಡನೇ ಅವಧಿಗೆ ಮೇಯರ್ ಆಗಿ ಬಿಜೆಪಿಯ ಸವಿತಾ ಕಾಂಬಳೆ ಹಾಗೂ ಉಪಮೇಯರಾಗಿ ಆನಂದ ಅವಿರೋಧವಾಗಿ ಆಯ್ಕೆಯಾದರು.
35 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದ್ದರಿಂದ ಬಿಜೆಪಿ ಮೇಯರ್ ಹಾಗೂ ಉಪಮೇಯರ್ ಸ್ಥಾನವನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಐದು ವರ್ಷದ ಬಳಿಕ ಪಾಲಿಕೆಯಲ್ಲಿ ಕನ್ನಡ ಭಾಷಿಕ ಸದಸ್ಯೆ ಮೇಯರ್ ಆಗಿರುವುದು ವಿಶೇಷವಾಗಿದೆ. 2018-19ರಲ್ಲಿ ಕನ್ನಡ ಭಾಷಿಕ ಬಸವರಾಜ ಚಿಕ್ಕಲದಿನ್ನಿ ಮೇಯರ್ ಆಗಿದ್ದರು.
ಎಸ್ ಸಿ ಮಹಿಳಾ ವರ್ಗಕ್ಕೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಸವಿತಾ ಜಯಪಾಲ ಕಾಂಬಳೆ ಹಾಗೂ ಲಕ್ಷ್ಮಿ ರಾಠೋಡ್ ನಾಮಪತ್ರ ಸಲ್ಲಿಸಿದ್ದರು. ಉಪಮೇಯರ್ ಸ್ಥಾನಕ್ಕೆ ಆನಂದ ಚವಾಣ, ಮಾಧವಿ ರಾಗೋಚೆ, ಜ್ಯೋತಿ ಕಡೋಲಕರ, ಶಾಮುಬಿ ಪಠಾಣ ನಾಮಪತ್ರ ತುಂಬಿದ್ದರು. ಬಿಜೆಪಿ ವರಿಷ್ಠರ ಸೂಚನೆಯಂತೆ ಲಕ್ಷ್ಮೀ ರಾಠೋಡ ನಾಮಪತ್ರ ಹಿಂಪಡೆದರು. ಹೀಗಾಗಿ ಮೇಯರ್ ಆಗಿ ಸವಿತಾ ಕಾಂಬಳೆ ಹಾಗೂ ಉಪಮೇಯರ್ ಆಗಿ ಆನಂದ ಚವಾಣ ಅವಿರೋಧ ಆಯ್ಕೆಯಾದರು.
ಪ್ರಾದೇಶಿಕ ಆಯುಕ್ತರಾದ ಎಸ್.ಬಿ. ಶೆಟ್ಟೆನ್ನವರ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಮಹಾನಗರ ಪಾಲಿಕೆ ಪ್ರಭಾರಿ ಆಯುಕ್ತೆ ರಾಜಶ್ರೀ ಜೈನಾಪುರೆ ಇದ್ದರು.