Belagavi; ಮಹಿಳೆ ವಿವಸ್ತ್ರ ಪ್ರಕರಣ: ಕಾಕತಿ ಇನ್ಸ್ ಪೆಕ್ಟರ್ ಅಮಾನತು
Team Udayavani, Dec 15, 2023, 10:18 PM IST
ಬೆಳಗಾವಿ: ಹೊಸ ವಂಟಮೂರಿ ಗ್ರಾಮದ ಮಹಿಳೆಯಮ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ ನಡೆದ ಘಟನೆ ಸ್ಥಳಕ್ಕೆ ತಡವಾಗಿ ಹೋದ ಕಾಕತಿ ಠಾಣೆ ಇನ್ಸ್ ಪೆಕ್ಟರ್ ವಿಜಯಕುಮಾರ್ ಅವರನ್ನು ಅಮಾನತು ಮಾಡಿ ಮಹಾನಗರ ಪೊಲೀಸ್ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ ಆದೇಶ ಹೊರಡಿಸಿದ್ದಾರೆ.
ಸೋಮವಾರ ಡಿ. 11ರಂದು ಬೆಳಗಿನ ಜಾವ ಮಹಿಳೆಯನ್ನು ವಿವಸ್ತ್ರ ಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ ವಿಷಯ ತಿಳಿಯುತ್ತಿದ್ದಂತೆ ಸಬ್ ಇನ್ಸ್ಪೆಕ್ಟರ್ ಹಾಗೂ ಪೊಲೀಸ್ ಸಿಬಂದಿ ಧಾವಿಸಿದ್ದರು. ಈ ವೇಳೆ ಸಬ್ ಇನ್ಸ್ ಪೆಕ್ಟರ್ ಅವರು ಇನ್ಸ್ಪೆಕ್ಟರ್ ವಿಜಯ ಕುಮಾರ ಸಿನ್ನೂರ ಅವರಿಗೆ ಬೆಳಗ್ಗೆ 4:30ಕ್ಕೆ ಕರೆ ಮಾಡಿ ಮಾಹಿತಿ ನೀಡುತ್ತಾರೆ. ಆಗ ಸಿನ್ನೂರ ಸ್ಥಳಕ್ಕೆ ಬರುವುದಿಲ್ಲ. ಮತ್ತೆ 6:40ಕ್ಕೆ ಕರೆ ಮಾಡಿ ವಿಷಯ ತಿಳಿಸಿದರೂ ಸಿನ್ನೂರ್ ಬಾರದೆ ನಿಷ್ಕಾಳಜಿ ತೋರಿದ್ದಾರೆ ಎಂದು ಪ್ರಕರಣದ ತನಿಖಾಧಿಕಾರಿ ಬೆಳಗಾವಿ ಗ್ರಾಮೀಣ ಎಸಿಪಿ ಗಿರೀಶ್ ಅವರು ವರದಿ ನೀಡಿದ್ದಾರೆ.
ವರದಿ ಆಧರಿಸಿ ಪೊಲೀಸ್ ಕಮೀಷನರ್ ಸಿದ್ದರಾಮಪ್ಪ ಅವರು ಕರ್ತವ್ಯ ಲೋಪ ಎಸಗಿದ ಇನ್ಸ್ ಪೆಕ್ಟರ್ ವಿಜಯಕುಮಾರ್ ಸಿನ್ನೂರ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಇನ್ಸ್ ಪೆಕ್ಟರ್ ಸಿನ್ನೂರ್ ಅವರು ಕೂಡಲೇ ಧಾವಿಸಿ ಸಂತ್ರಸ್ತೆ ಮಹಿಳೆಯನ್ನು ರಕ್ಷಿಸಬೇಕಿತ್ತು. ಜತೆಗೆ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಬೇಕಿತ್ತು. ಆದರೆ ಪ್ರಕರಣದಲ್ಲಿ ಸಂಪೂರ್ಣವಾಗಿ ನಿಷ್ಕಾಳಜಿ ತೋರಿದ ಇನ್ಸ್ ಪೆಕ್ಟರ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.